ಲೋಕಸಭೆ ಸ್ಪಕರ್ ಹುದ್ದೆಗೆ ಮತ್ತೆ ಓಂ ಬಿರ್ಲಾ ನಾಮಪತ್ರ
ನವದೆಹಲಿ, ಜೂನ್ 25: ಲೋಕಸಭೆ ಚುನಾವಣೆ 2024 ಮುಗಿದಿದ್ದು, ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 18ನೇ ಲೋಕಸಭೆ ಸ್ಪೀಕರ್ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಓಂ ಬಿರ್ಲಾ, ಕೆ. ಸುರೇಶ್ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಮಂಗಳವಾರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ಸಭೆಯ ಬಳಿಕ ಸ್ಪೀಕರ್ ಹುದ್ದೆಗೆ ಅಭ್ಯರ್ಥಿ ಅಂತಿಮಗೊಳಿಸಲಾಗಿದೆ.

17ನೇ ಲೋಕಸಭೆಯಲ್ಲಿಯೂ ಓಂ ಬಿರ್ಲಾ ಸ್ಪೀಕರ್ ಆಗಿ ಕಾರ್ಯ ನಿರ್ವಹಣೆ ಮಾಡಿದ್ದರು. ಈಗ ಅವರನ್ನು ಪುನಃ ಆಯ್ಕೆ ಮಾಡಲಾಗುತ್ತದೆ. ಜೂನ್ 26ರಂದು ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದೆ.
ಸ್ಪೀಕರ್ ಆಯ್ಕೆ ಕುರಿತು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಡಿಎಂಕೆ ನಾಯಕರ ಜೊತೆ ರಾಜನಾಥ್ ಸಿಂಗ್ ಮತ್ತು ರಿಜಿಜು ಮಾತುಕತೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ರಾಹುಲ್ ಗಾಂಧಿ, "ಪ್ರತಿಪಕ್ಷಗಳು ಸ್ಪೀಕರ್ ಆಯ್ಕೆಗೆ ಬೆಂಬಲ ನೀಡಲಿವೆ. ಆದರೆ ಡೆಪ್ಯೂಟಿ ಸ್ಪೀಕರ್ ಹುದ್ದೆ ನಮಗೆ ಬೇಕು" ಎಂದರು.
ಆದರೆ ಬಳಿಕ 'ಇಂಡಿಯಾ' ಮೈತ್ರಿಕೂಟದಿಂದ ಕೆ. ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಅವಿರೋಧವಾಗಿ ಓಂ ಬಿರ್ಲಾ ಆಯ್ಕೆಯಾಗುವುದಿಲ್ಲ. ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಬೇಕಿದೆ.
ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗಿ ಓಂ ಬಿರ್ಲಾ, 'ಇಂಡಿಯಾ' ಮೈತ್ರಿಕೂಟದ ಅಭ್ಯರ್ಥಿಯಾಗಿ ಕಾಂಗ್ರೆಸ್ನ ಕೆ. ಸುರೇಶ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದ್ದರಿಂದ 1946ರ ಬಳಿಕ ಮೊದಲ ಬಾರಿಗೆ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಕೇರಳದ ಮಾವೇಲಿಕರದ ಕಾಂಗ್ರೆಸ್ ಸಂಸದ ಕೆ. ಸುರೇಶ್ (68) ಸಂಸತ್ನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಸದಸ್ಯರು. ಡೆಪ್ಯೂಟಿ ಸ್ಪೀಕರ್ ಹುದ್ದೆ ನಮಗೆ ಸಾಕು ಎಂದು ಹೇಳಿದ್ದ ಕಾಂಗ್ರೆಸ್ ಕಡೆ ಕ್ಷಣದಲ್ಲಿ ಸ್ಪೀಕರ್ ಹುದ್ದೆಗೆ ಕೆ. ಸುರೇಶ್ ಕಣಕ್ಕಿಳಿಸಿದೆ. ಹಂಗಾಮಿ ಸ್ಪೀಕರ್ ಆಗಿ ಸುರೇಶ್ ಆಯ್ಕೆ ಮಾಡಿಲ್ಲ ಎಂದು ಕಾಂಗ್ರೆಸ್ ಮೊದಲೇ ಅಸಮಾಧಾನಗೊಂಡಿತ್ತು.
ಜೂನ್ 26ರಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಸ್ಪೀಕರ್ ಹುದ್ದೆಯ ನಾಮ ನಿರ್ದೇಶನ ಮಾಡಲಿದ್ದಾರೆ. ಬಳಿಕ ಲೋಕಸಭಾ ಸದಸ್ಯರು ಸ್ಪೀಕರ್ ಹುದ್ದೆಯ ಚುನಾವಣೆಗೆ ಮತದಾನ ಮಾಡಲಿದ್ದಾರೆ.
2024ರ ಲೋಕಸಭೆ ಚುನಾವಣೆಯ ಬಳಿಕ 543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್ಡಿಎ ಮೈತ್ರಿಕೂಟ 293, ಇಂಡಿಯಾ ಮೈತ್ರಿಕೂಟ 234 ಸದಸ್ಯ ಬಲ ಹೊಂದಿದೆ. ಬಿಜೆಪಿ ಸ್ಪೀಕರ್ ಆಯ್ಕೆಯ ಕುರಿತು ಮಿತ್ರ ಪಕ್ಷಗಳ ಜೊತೆ ಚರ್ಚಿಸಲು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ನೇಮಕ ಮಾಡಿತ್ತು.
ಕೆ. ಸುರೇಶ್ 8 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಸದ್ಯ ಮಾವೇಲಿಕರದ ಸಂಸದರಾಗಿರುವ ಸುರೇಶ್, ನಾಲ್ಕು ಬಾರಿ ಅಡೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1989ರಲ್ಲಿ ಅವರು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಬಳಿಕ ಎರಡು ಬಾರಿ ಸೋತರು. 2009ರಲ್ಲಿ ಮತ್ತೆ ಕ್ಷೇತ್ರದಲ್ಲಿ ಗೆದ್ದರು.
ಪ್ರಧಾನಿ ಡಾ. ಮನಮೋಹನ್ ಸಿಂಗ್ ಸಂಪುಟದಲ್ಲಿ ಕೆ. ಸುರೇಶ್ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. 2021ರಲ್ಲಿ ಕೇರಳ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸುರೇಶ್ ನೇಮಕ ಮಾಡುವ ಕುರಿತು ಚರ್ಚೆ ನಡೆದಿತ್ತು.












Click it and Unblock the Notifications