ಗುರುಗ್ರಾಮ್, ದೆಹಲಿ- ಯುಪಿಯಲ್ಲಿ ಏಕಾಏಕಿ ಭಾರಿ ಮಳೆ; 39 ಸಾವು, ಶಾಲಾ ಕಾಲೇಜುಗಳಿಗೆ ರಜೆ
ನವದೆಹಲಿ, ಅಕ್ಟೋಬರ್ 10: ಕಳೆದ ಕೆಲವು ದಿನಗಳಿಂದ ಮಳೆಯಿಂದಾಗಿ ಹಲವೆಡೆ ಅನಾಹುತ ಸಂಭವಿಸಿದೆ. ದೆಹಲಿಯಲ್ಲಿ ಕಟ್ಟಡ ಕುಸಿದಿದ್ದು, ಅಪಘಾತದಲ್ಲಿ ಮಗುವೊಂದು ಸಾವನ್ನಪ್ಪಿದೆ. ಗುರುಗ್ರಾಮದಲ್ಲಿ ಕೊಳದಲ್ಲಿ ಮುಳುಗಿ 6 ಮಕ್ಕಳು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದಲ್ಲೂ ಮಳೆಯ ಆರ್ಭಟ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಉತ್ತರ ಭಾರತದಲ್ಲಿ ಸುರಿದ ಮಳೆಗೆ 30ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಮುಂಗಾರು ಕಳೆದು ಹೋಗಿದ್ದರೂ, ದೇಶದ ಹಲವು ರಾಜ್ಯಗಳಲ್ಲಿ ಇನ್ನೂ ಭಾರಿ ಮಳೆಯಾಗುತ್ತಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಒಡಿಶಾ, ಜಾರ್ಖಂಡ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಹಾನಿಯನ್ನುಂಟು ಮಾಡಿದೆ. ಭಾರಿ ಮಳೆಯಿಂದಾಗಿ ಹಲವೆಡೆ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವೆಡೆ ಅಣೆಕಟ್ಟು ಅಪಾಯದ ಅಂಚಿನಲ್ಲಿದೆ. ಅಣೆಕಟ್ಟೆಯಿಂದ ನೀರು ಬಿಟ್ಟಿರುವುದರಿಂದ ತಗ್ಗು ಪ್ರದೇಶಗಳು ನೀರಿನಿಂದ ತುಂಬಿವೆ. ಹಲವು ಗ್ರಾಮಗಳು ಮುಳುಗಡೆಯಾಗಿದ್ದು, ಸಂತ್ರಸ್ತ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಯುಪಿ, ಗುರುಗ್ರಾಮ್, ಮೊಹಾಲಿ ಮತ್ತು ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆಯಿಂದಾಗಿ 39 ಜನರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದಾಗಿ ಇಂದು ಉತ್ತರ ಪ್ರದೇಶದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 1ರಿಂದ 12ನೇ ತರಗತಿಯವರೆಗೆ ಶಾಲೆಗಳನ್ನು ರಜೆ ನೀಡಿ ಆದೇಶವನ್ನು ನೀಡಲಾಗಿದೆ.
ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ: ಹಳದಿ ಅಲರ್ಟ್
ಯುಪಿಯಲ್ಲಿ ಮಳೆಯ ಆರ್ಭಟಕ್ಕೆ 30 ಜನರು ಸಾವನ್ನಪ್ಪಿದ್ದಾರೆ
ಉತ್ತರ ಪ್ರದೇಶದಲ್ಲಿ ಗರಿಷ್ಠ ಪ್ರಮಾಣದ ಮಳೆಯಾಗಿದೆ. ಭಾರಿ ಮಳೆಗೆ ಹಲವು ಜಿಲ್ಲೆಗಳಲ್ಲಿ ಮನೆಗಳು ಬಿದ್ದು, ಸಿಡಿಲು ಬಡಿದು 24 ಗಂಟೆಗಳಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. ಮಳೆಯಿಂದಾಗಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೀತಾಪುರದ ಸಿದ್ಧಾರ್ಥನಗರ, ಸಂತ ಕಬೀರ್ ನಗರದಲ್ಲಿ ಸಿಡಿಲು ಬಡಿದು ನಾಲ್ವರು ಮೃತಪಟ್ಟಿದ್ದಾರೆ. ಬಾರಾಬಂಕಿಯಲ್ಲಿ ಮರ ಬಿದ್ದು ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಉನ್ನಾವೋದಲ್ಲಿ ಮನೆ ಕುಸಿದು ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಕಾನ್ಪುರ ಗ್ರಾಮಾಂತರದಲ್ಲಿ ಎರಡು ಮತ್ತು ಇಟಾವಾ ಮತ್ತು ಔರೈಯಾದಲ್ಲಿ ತಲಾ ಒಂದು ಜೀವಗಳು ಬಲಿಯಾದವು. ಮಳೆಯಿಂದ ಸಿಡಿಲು ಬಡಿದು ಇಬ್ಬರು ರೈತರು ಸಾವನ್ನಪ್ಪಿದ್ದಾರೆ. ಬ್ರಜ್ ಮಂಡಲ್ ಮತ್ತು ಅಲಿಗಢದಲ್ಲಿ ತಲಾ ನಾಲ್ವರು ಸಾವನ್ನಪ್ಪಿದ್ದಾರೆ. ಬುಲಂದ್ಶಹರ್ನಲ್ಲಿ ಮನೆ ಕುಸಿದು ಹದಿಹರೆಯದವರು ಮತ್ತು ಮಹಿಳೆ ಸಾವನ್ನಪ್ಪಿದ್ದಾರೆ. ಪಿಲಿಭಿತ್, ಬದೌನ್ ಮತ್ತು ಶಹಜಹಾನ್ಪುರದಲ್ಲಿ ಸಿಡಿಲು ಮತ್ತು ಗೋಡೆ ಕುಸಿದು ಒಂದು ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.
15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ
ಉತ್ತರ ಪ್ರದೇಶದಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಕಾರಣ, ಗಾಜಿಯಾಬಾದ್, ಗೌತಮ್ ಬುದ್ಧ ನಗರ, ರಾಜಧಾನಿ ಲಕ್ನೋ, ರಾಂಪುರ ಮತ್ತು ಮೀರತ್ ಸೇರಿದಂತೆ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಕ್ಟೋಬರ್ 10 ರಂದು ಅಂದರೆ ಸೋಮವಾರದಂದು ಶಾಲಾ-ಕಾಲೇಜುಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ. ಈ ಜಿಲ್ಲೆಗಳಲ್ಲಿ ಒಂದರಿಂದ 12ನೇ ತರಗತಿವರೆಗಿನ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಹವಾಮಾನ ಇಲಾಖೆ ಮುಂದಿನ 24 ಗಂಟೆಗಳಲ್ಲಿ 52 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಿದೆ. 24 ಗಂಟೆಗಳಲ್ಲಿ ಇಡೀ ರಾಜ್ಯದಲ್ಲಿ 22.4 ಮಿ.ಮೀ ಮಳೆ ದಾಖಲಾಗಿದೆ.
6 ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ
ಗುರುಗ್ರಾಮದ ಕೊಳದಲ್ಲಿ ಸ್ನಾನಕ್ಕೆ ತೆರಳಿದ್ದ 6 ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಸೆಕ್ಟರ್-111ರಲ್ಲಿ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಎಲ್ಲ ಮಕ್ಕಳ ಶವಗಳನ್ನು ಹೊರತೆಗೆದಿದ್ದಾರೆ. ಮಕ್ಕಳೆಲ್ಲರೂ ಸಮೀಪದ ಶಂಕರ್ ವಿಹಾರ್ ಕಾಲೋನಿ ನಿವಾಸಿಗಳಾಗಿದ್ದರು. ಸಂಬಂಧಿಕರಿಗೆ ಮಾಹಿತಿ ನೀಡಿದ ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
|
ದೆಹಲಿಯಲ್ಲಿ ಹೆಣ್ಣು ಮಗು ಸಾವು
ರಾಜಧಾನಿ ದೆಹಲಿಯ ಲಾಹೋರಿ ಗೇಟ್ನ ಫರಾಶ್ ಖಾನಾ ಪ್ರದೇಶದಲ್ಲಿ ಕಟ್ಟಡವೊಂದು ಕುಸಿದಿದೆ. ಈ ಮಾಹಿತಿ ಮೇರೆಗೆ 5 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಅವಶೇಷಗಳಡಿ ಸಿಲುಕಿದ್ದ ಜನರನ್ನು ರಕ್ಷಿಸಲಾಗಿದೆ. ಈ ಅಪಘಾತದಲ್ಲಿ ಪುಟ್ಟ ಮಗು ಸಾವನ್ನಪ್ಪಿದ ಘಟನೆ ನಡೆದಿದೆ.