ರಾಹುಲ್ ಯಾತ್ರೆಯನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ: ರಾಮಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಚ್ಚರಿ ಹೇಳಿಕೆ
ಲಖನೌ, ಡಿಸೆಂಬರ್ 5: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಅಯೋಧ್ಯೆಯ ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಬೆಂಬಲ ನೀಡಿದ ಒಂದು ದಿನದ ನಂತರ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕೂಡ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕನ ಬಗ್ಗೆ ಪ್ರಶಂಸೆ ಮಾತುಗಳನ್ನೂ ಆಡಿದರು.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂಪತ್ ರೈ, ರಾಷ್ಟ್ರವನ್ನು ಒಗ್ಗೂಡಿಸುವ ಉತ್ತಮ ಉದ್ದೇಶಕ್ಕಾಗಿ ನಡೆದ ಯಾತ್ರೆಯನ್ನು ಮೆಚ್ಚಲೇಬೇಕು.
'ನಾನು ಆರ್ಎಸ್ಎಸ್ನೊಂದಿಗೆ ಸಂಬಂಧ ಹೊಂದಿದ್ದೇನೆ. ಯಾತ್ರೆಯನ್ನು ಸಂಘಪರಿವಾರ ಎಂದೂ ಖಂಡಿಸಿಲ್ಲ. ಅದರಲ್ಲಿ ತಪ್ಪೇನಿಲ್ಲ. ಅದನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ' ಎಂದು ರೈ ಬುಧವಾರ ಹೇಳಿದ್ದಾರೆ.
ರಾಹುಲ್ ದೇಶಕ್ಕಾಗಿ ನಡೆಯುವ ಯುವಕ ಎಂದು ಕರೆದಿರುವ ರೈ, ದೇವಸ್ಥಾನದ ಟ್ರಸ್ಟ್ನ ಖಜಾಂಚಿ ಗೋವಿಂದ್ ದೇವ್ ಗಿರಿ ಅವರು ರಾಹುಲ್ ಗಾಂಧಿಯವರ ಪ್ರಯತ್ನವನ್ನು ಶ್ಲಾಘಿಸಿದರು.
'ದೇಶವು ಒಗ್ಗಟ್ಟಾಗಿ ಉಳಿಯಬೇಕು. ಅವರನ್ನು (ರಾಹುಲ್ ಗಾಂಧಿ) ಆಶೀರ್ವದಿಸುವಂತೆ ನಾನು ಭಗವಾನ್ ರಾಮನನ್ನು ಪ್ರಾರ್ಥಿಸುತ್ತೇನೆ' ಎಂದೂ ಹೇಳಿದರು.
ಯಾತ್ರೆಯ ಭಾಗವಾಗುವಂತೆ ಅಯೋಧ್ಯೆಯ ಆಚಾರ್ಯ ಸತ್ಯೇಂದ್ರ ದಾಸ್ ಸೇರಿದಂತೆ ಅನೇಕ ಸಂತರು ಮತ್ತು ದಾರ್ಶನಿಕರಿಗೆ ಕಾಂಗ್ರೆಸ್ ಆಹ್ವಾನ ಕಳುಹಿಸಿದೆ. ಆದರೆ, ರಾಮ ಮಂದಿರದ ಪ್ರಧಾನ ಅರ್ಚಕರು ಯಾತ್ರೆಗೆ ಬರಲು ನಿರಾಕರಿಸಿದ್ದಾರೆ. ಆದರೆ ರಾಹುಲ್ಗೆ ಶುಭ ಹಾರೈಸುವ ಪತ್ರವನ್ನು ಬರೆದಿದ್ದಾರೆ.
ಮಂಗಳವಾರ ಬಾಗ್ಪತ್ನ ಮಾವಿಕಲನ್ ಗ್ರಾಮದಲ್ಲಿ ರಾತ್ರಿ ನಿಲುಗಡೆಯ ನಂತರ ಯಾತ್ರೆ ಬುಧವಾರ ಬೆಳಿಗ್ಗೆ 6 ಗಂಟೆಗೆ ತನ್ನ ಪ್ರಯಾಣವನ್ನು ಪುನರಾರಂಭಿಸಿತು. ಯಾತ್ರೆಯು ಬುಧವಾರ ಸಂಜೆಯ ವೇಳೆಗೆ ಶಾಮ್ಲಿಯನ್ನು ತಲುಪಲಿದೆ. ಜಿಲ್ಲೆಯ ಐಲುಮ್ ಪಟ್ಟಣದಲ್ಲಿ ಸ್ಥಗಿತಗೊಳ್ಳಲಿದೆ.
ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್, ಸಲ್ಮಾನ್ ಖುರ್ಷಿದ್, ಯುಪಿ ಕಾಂಗ್ರೆಸ್ ಮುಖ್ಯಸ್ಥ ಬ್ರಿಜ್ಲಾಲ್ ಖಬ್ರಿ, ಮಾಜಿ ರಾಜ್ಯ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಮತ್ತು ರಾಷ್ಟ್ರೀಯ ಲೋಕದಳದ ಕೆಲವು ನಾಯಕರು ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯು ಗಮನ ಸೆಳೆಯುತ್ತಿದೆ. ಈಗಾಗಲೇ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ ಹಾಗೂ ದೆಹಲಿಗಳಲ್ಲಿ ಯಾತ್ರೆ ಸಂಚರಿಸಿದೆ. ಪ್ರಸ್ತುತ ಉತ್ತರ ಪ್ರದೇಶದಲ್ಲಿ ಯಾತ್ರೆ ಸಾಗುತ್ತಿದೆ. ಯಾತ್ರೆ ಅಪಾರ ಜನಬೆಂಬಲವೂ ದೊರೆತಿದೆ. ಕಲಾವಿದರು, ಸಾಮಾಜಿಕ ಹೋರಾಟಗಾರರು, ಕಾರ್ಮಿಕರು, ವಿಕಲಚೇತನರು, ವಿದ್ಯಾರ್ಥಿಗಳು, ಯುವಕರು ಸೇರಿದಂತೆ ಲಕ್ಷಾಂತರ ಜನರು ಯಾತ್ರೆಯಲ್ಲಿ ಭಾಗವಹಿಸಿ ರಾಹುಲ್ ಗಾಂಧಿ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ದೆಹಲಿಯಲ್ಲಿ ಸಾಗಿದ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭಾಗವಹಿಸಿದ್ದರು. ತಮಿಳು ನಾಡಿನ ಕನ್ಯಾಕುಮಾರಿಯಿಂದ ಶುರುವಾಗಿರುವ ಯಾತ್ರೆಯು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಳ್ಳಲಿದೆ. ಯಾತ್ರೆಗೆ ವಿರೋಧ ಪಕ್ಷಗಳ ನಾಯಕರನ್ನೂ ಆಹ್ವಾನಿಸಲಾಗಿದೆ.