ತಮಿಳುನಾಡಿನಲ್ಲಿ ಈ ವರ್ಷ ಜಲ್ಲಿಕಟ್ಟು ಆಚರಣೆ ಇಲ್ಲ
ನವದೆಹಲಿ, ಜ. 12: 'ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ' ಎಂಬ ಪರಿಸ್ಥಿತಿಯನ್ನು ಜಲ್ಲಿಕಟ್ಟು ಆಚರಣೆ ಮಾಡುವ ತಮಿಳುನಾಡಿನ ಜನರು ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಅನುಮತಿ ನೀಡಲು ಸುಪ್ರೀಂಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ.
ಪ್ರಾಣಿ ಪ್ರಿಯ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ತಮಿಳುನಾಡಿನ ಸಾಂಪ್ರದಾಯಿಕ ಹೋರಿ ಕಾಳಗ (ಜಲ್ಲಿ ಕಟ್ಟು) ಕ್ಕೆ ಜನವರಿ 08ರಂದು ಕೇಂದ್ರ ಪರಿಸರ ಖಾತೆ ಸಚಿವಾಲಯ ಅನುಮತಿ ನೀಡಿತ್ತು.
ಆದರೆ, ಕೇಂದ್ರ ಸರ್ಕಾರದ ಆದೇಶದ ವಿರುದ್ಧ ಪ್ರಾಣಿಪ್ರಿಯ ಸಂಘಟನೆಗಳು ಅರ್ಜಿ ಸಲ್ಲಿಸಿದವು. ಆರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ದೀಪಕ್ ಮಿಸ್ರಾ, ಎನ್ ವಿ ರಮಣ ಅವರು ಪ್ರಾಣಿ ದಯಾ ಸಂಘದ ಅರ್ಜಿಯನು ಪುರಸ್ಕರಿಸಿ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದ್ದಾರೆ. [ಜಲ್ಲಿಕಟ್ಟು,ಅಪಾಯಕಾರಿ ರೋಮಾಂಚನಕಾರಿ : ಟ್ವೀಟ್ಸ್ ]

ಜಲ್ಲಿಕಟ್ಟು ನಿಷೇಧಕ್ಕೆ ಕುರಿತಂತೆ 2014ರಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ಜನವರಿ 15ರಂದು ಜಲ್ಲಿಕಟ್ಟು ಆಚರಣೆ ಮಾಡದಂತೆ ತಡೆ ನೀಡಲಾಗಿದೆ. ಈ ಆದೇಶದ ವಿರುದ್ಧ ಪ್ರತಿ ಅರ್ಜಿ ಸಲ್ಲಿಸಲು ತಮಿಳುನಾಡು ಹಾಗೂ ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶವಿರುತ್ತದೆ.
ಈ ಹಿಂದೆ ಜಲ್ಲಿಕಟ್ಟು ಆಚರಣೆಗೆ ನಿಷೇಧ ಹೇರಿ ಆದೇಶ ನೀಡಿದ್ದ ಮದ್ರಾಸ್ ಹೈಕೋರ್ಟಿನ ಮದುರೈ ಬೆಂಚ್ ನ ಜಡ್ಜ್ ಆರ್ ಬಾನುಮತಿ ಅವರು ಸುಪ್ರೀಂಕೋರ್ಟಿನಲ್ಲಿ ಈ ಕೇಸಿನಿಂದ ಹಿಂದೆ ಸರಿದಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಇಲ್ಲದ ಆಚರಣೆ ಓ ಬಾರಿ ಏಕೆ ಎಂದು ಜಸ್ಟೀಸ್ ದೀಪಕ್ ಪ್ರಶ್ನಿಸಿದ್ದಾರೆ.
ಪೊಂಗಲ್(ಸಂಕ್ರಾಂತಿ) ಹಬ್ಬದ ಮುಖ್ಯ ಭಾಗವಾದ "ಜಲ್ಲಿಕಟ್ಟು" ಅಥವಾ "ಮಂಜು ವೀರಟ್ಟು" ಸಾಹಸ ಪ್ರಧಾನ ರೋಮಾಂಚನಕಾರಿ ಆಟವಾಗಿದೆ. ಆದರೆ, ತಮಿಳುನಾಡು ಅಸೆಂಬ್ಲಿ ಚುನಾವಣೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಘಟಕ ಒತ್ತಡ ಹೇರಿ ಕೇಂದ್ರ ಸರ್ಕಾರದ ಸಮ್ಮತಿ ಪಡೆದಿದೆ ಎಂಬ ಕೂಗು ಕೇಳಿ ಬಂದಿದೆ. ಪ್ರಾಣಿಗಳಿಗೆ ಹಿಂಸೆ ನೀಡುವ ಆಚರಣೆ ಬೇಡ ಎಂದು ಪರಿಸರ ಹಾಗೂ ಪ್ರಾಣಿ ಪ್ರಿಯ ಸಂಘಟನೆಗಳು ಕಾನೂನು ಸಮರ ನಡೆಸುತ್ತಿವೆ.












Click it and Unblock the Notifications