ದೆಹಲಿ: ವಾಹನಗಳ ವಿಮೆ ನವೀಕರಣಕ್ಕೆ ಮಾಲಿನ್ಯ ಪ್ರಮಾಣಪತ್ರ ಕಡ್ಡಾಯ
ದೆಹಲಿಯಲ್ಲಿನ್ನು ವಾಹನಗಳ ವಿಮೆ ನವೀಕರಣಕ್ಕೆ ಪರಿಸರ ಮಾಲಿನ್ಯ ಪ್ರಮಾಣ ಪತ್ರ ಕಡ್ಡಾಯ. ಸುಪ್ರೀಂ ಕೋರ್ಟ್ ನಿಂದ ಮಹತ್ವದ ಆದೇಶ. ದೆಹಲಿ ಮಾಲಿನ್ಯ ತಡೆಗಟ್ಟಲು ತಾನೇ ನೇಮಿಸಿದ್ದ ಸಮಿತಿ ನೀಡಿದ್ದ ಶಿಫಾರಸಿನನ್ವಯ ಆದೇಶ ನೀಡಿದ ಸುಪ್ರೀಂ ಕೋರ್ಟ್.
ನವದೆಹಲಿ, ಆಗಸ್ಟ್ 10: ದೆಹಲಿ ಮತ್ತು ರಾಜಧಾನಿ ವಲಯದಲ್ಲಿರುವ ಎಲ್ಲಾ ವಾಹನ ಚಾಲಕರೂ ಇನ್ನು ಪರಿಸರ ಮಾಲಿನ್ಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಮಾಡಿಸಬೇಕೆಂದು ಸುಪ್ರೀಂ ಕೋರ್ಟ್ ಗುರುವಾರ ತಾಕೀತು ಮಾಡಿದೆ.
ದೆಹಲಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿದರೆ 5 ಸಾವಿರ ರೂ. ದಂಡ
ವಾಹನಗಳ ವಿಮೆಯನ್ನು ನವೀಕರಣ ಮಾಡುವ ಸಂದರ್ಭದಲ್ಲಿ ಮಾಲಿನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕೆಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ಆದೇಶಿಸಿದೆ. ನ್ಯಾಯಮೂರ್ತಿಗಳಾದ ಎಂಬಿ ಲೋಕುರ್ ಹಾಗೂ ದೀಪಕ್ ಗುಪ್ತಾ ಅವರುಳ್ಳ ನ್ಯಾಯಪೀಠ ಈ ಬಗ್ಗೆ ಆದೇಶ ನೀಡಿದರು.
ಕಳೆದ ವರ್ಷ, ದೆಹಲಿಯು ವಾಹನಗಳ ಹೊಗೆ ದಟ್ಟಣೆಯಿಂದಾಗಿ ತೀವ್ರ ಕುಖ್ಯಾತಿಗೆ ಒಳಗಾಗಿತ್ತು. ಆಗಿನಿಂದಲೂ, ಅಲ್ಲಿ ಪರಿಸರ ಕಾಳಜಿ ಕಡೆಗೆ ಅತಿ ಹೆಚ್ಚು ಮಹತ್ವ ನೀಡಲಾಗುತ್ತಿದೆ.
ಸುಪ್ರೀಂ ಕೋರ್ಟ್ ನಿಂದ ನೇಮಿಸಲಾಗಿದ್ದ ಪರಿಸರ ಮಾಲಿನ್ಯ ಆಯೋಗ (ಇಪಿಸಿಎ) ನ್ಯಾಯಪೀಠಕ್ಕೆ ಈ ಶಿಫಾರಸ್ಸನ್ನು ನೀಡಿತ್ತು. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿರಲಿಲ್ಲ. ವಿಮೆ ನವೀಕರಣ ವರ್ಷಕ್ಕೊಮ್ಮೆ ಮಾತ್ರ ಮಾಡಲಾಗುತ್ತದೆ. ಹಾಗಾಗಿ, ವರ್ಷ ಪೂರ್ತಿ ವಾಹನ ಮಾಲೀಕರು ಮಾಲಿನ್ಯ ಪ್ರಮಾಣ ಪತ್ರ ಮಾಡಿಸಿಲ್ಲವಾದರೂ, ವಿಮೆ ನವೀಕರಣ ಮಾಡಿಸುವಾಗ ಮಾತ್ರ ಮಾಡಿಸುವಂತಾಗುತ್ತದೆ ಎಂದು ಅದು ವಾದಿಸಿತ್ತು.
ಆದರೆ, ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಈ ರೀತಿಯ ಆದೇಶವನ್ನು ನೀಡಿದೆ.