ಆಮ್ಲಜನಕ ಕೊರತೆ ಕುರಿತು ಕೇಂದ್ರದ ಹೇಳಿಕೆ; ಏಪ್ರಿಲ್, ಮೇ ನೆನಪಿಸಿಕೊಳ್ಳಿ ಎಂದ ವಿರೋಧ ಪಕ್ಷಗಳು
ನವದೆಹಲಿ, ಜುಲೈ 21: ದೇಶದಲ್ಲಿ ಕೊರೊನಾ ಎರಡನೇ ಅಲೆ ಸಂದರ್ಭ ಆಮ್ಲಜನಕದ ಕೊರತೆಯಿಂದ ಕೊರೊನಾ ರೋಗಿಗಳು ಮೃತಪಟ್ಟ ಕುರಿತು ಯಾವುದೇ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿಲ್ಲ ಎಂದು ಮಂಗಳವಾರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪವಾರ್ ಹೇಳಿಕೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ.
ಈ ಹೇಳಿಕೆ ವಿರೋಧಪಕ್ಷಗಳ ಟೀಕೆಗೆ ಕಾರಣವಾಗಿದ್ದು, ಈ ಸಂಬಂಧ ಆಡಳಿತ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರ ನಡೆಯುತ್ತಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, ಕೊರೊನಾ ಎರಡನೇ ಅಲೆಯಲ್ಲಿ ಕೊರೊನಾ ರೋಗಿಗಳು ಏಕಿ ಸಾವನ್ನಪ್ಪಿದರು ಎನ್ನುವ ಕುರಿತು ಕಾರಣಗಳ ಪಟ್ಟಿ ಮಾಡಿದ್ದು, ಕೇಂದ್ರವನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.
They (Centre) will soon say there was no COVID-19. If there were no deaths due to lack of oxygen, then why were hospitals going to High Court for shortages? This is completely false: Delhi Health Minister Satyendar Jain on Centre saying 'no deaths due to lack of oxygen' pic.twitter.com/FTz56X6kUw
— ANI (@ANI) July 21, 2021
"ಕೊರೊನಾ ಎರಡನೇ ಅಲೆಯ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರವು ಆಮ್ಲಜನಕ ರಫ್ತನ್ನು 700% ಏರಿಸಿತು. ದೇಶದಲ್ಲಿ ಬಿಕ್ಕಟ್ಟು ಸೃಷ್ಟಿಯಾದಾಗಲೂ ಆಮ್ಲಜನಕ ಟ್ಯಾಂಕರ್ಗಳ ಸಿದ್ಧತೆ ಮಾಡಲಿಲ್ಲ, ಸಂಸತ್ತಿನ ಸಮಿತಿ ಸಲಹೆಯನ್ನೂ ನಿರ್ಲಕ್ಷಿಸಿ ಆಮ್ಲಜನಕ ಪೂರೈಕೆ ಮಾಡುವಲ್ಲಿ ಸೋತಿತು" ಎಂದು ದೂರಿದ್ದಾರೆ.

ಕೇಂದ್ರದ ಈ ಹೇಳಿಕೆಗೆ ಆಮ್ ಆದ್ಮಿ ಪಕ್ಷವೂ ವಿರೋಧ ವ್ಯಕ್ತಪಡಿಸಿದೆ. "ದೆಹಲಿಯಲ್ಲಿ ಆಮ್ಲಜನಕ ಅಭಾವ ತೀವ್ರವಾಗಿದ್ದ ಸಮಯವನ್ನು ಒಮ್ಮೆ ನೆನಪಿಸಿಕೊಳ್ಳಿ. ಏಪ್ರಿಲ್, ಮೇ ತಿಂಗಳಿನಲ್ಲಿನ ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳಿ. ಎರಡನೇ ಅಲೆಯಲ್ಲಿ, ಹಲವು ದಿನಗಳ ಕಾಲ ಶವಾಗಾರಗಳ ಮುಂದೆ ಮೃತದೇಹಗಳನ್ನು ಅಂತ್ಯಸಂಸ್ಕಾರಕ್ಕಾಗಿ ಕಾದಿರಿಸಿದ್ದ ಚಿತ್ರಣ ಕಣ್ಣಮುಂದಿದೆ. ನೂರಾರು ಮಂದಿ ಆಸ್ಪತ್ರೆಯಲ್ಲಿ ಹಾಸಿಗೆಗಾಗಿ, ಆಮ್ಲಜನಕಕ್ಕಾಗಿ ಪರದಾಡಿದ್ದನ್ನು ಮರೆಯಲು ಸಾಧ್ಯವೇ" ಎಂದು ಟೀಕಿಸಿದೆ.
"ಇನ್ನು ಕೆಲವೇ ದಿನಗಳಲ್ಲಿ ಕೊರೊನಾ ಇಲ್ಲವೇ ಇಲ್ಲ ಎಂದು ಕೇಂದ್ರ ಹೇಳಿಕೆ ನೀಡುತ್ತದೆ. ಆಮ್ಲಜನಕ ಕೊರತೆಯಿಂದ ಯಾವುದೇ ಸಾವು ಸಂಭವಿಸುವುದಿಲ್ಲ ಎನ್ನುವುದು ಹೌದಾದರೆ, ಆಸ್ಪತ್ರೆಗಳೇಕೆ ಆಮ್ಲಜನಕ ಕೊರತೆ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದವು? ಆಮ್ಲಜನಕ ಪೂರೈಕೆ ಕುರಿತು ನಾವು ಆಡಿಟ್ ಮಾಡಿಸಲು ಸಮಿತಿಯನ್ನೇ ರಚಿಸಿದ್ದೇವೆ" ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ.
"ನಾಗರಿಕರ ಆರೋಗ್ಯ ವಿಷಯ ಆಯಾ ರಾಜ್ಯಗಳಿಗೆ ಸಂಬಂಧಿಸಿದ್ದು. ರಾಜ್ಯಗಳು ಕೊರೊನಾ ಪ್ರಕರಣಗಳು ಹಾಗೂ ಕೊರೊನಾದಿಂದ ಸಂಭವಿಸಿದ ಮರಣ ಪ್ರಮಾಣದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿವೆ. ಅದರಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿರುವ ಕುರಿತು ರಾಜ್ಯಗಳಿಂದಾಗಲೀ, ಕೇಂದ್ರಾಡಳಿತ ಪ್ರದೇಶಗಳಿಂದಾಗಲೀ ಪ್ರತ್ಯೇಕ ವರದಿ ಬಂದಿಲ್ಲ" ಎಂದು ಮಂಗಳವಾರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪವಾರ್ ಹೇಳಿಕೆ ನೀಡಿದ್ದರು.












Click it and Unblock the Notifications