ವಾರಾಂತ್ಯದ ಓದುಗರಿಗಾಗಿ ರೋಚಕ ಚಿತ್ರಸುದ್ದಿ
ಬೆಂಗಳೂರು, ಸೆ. 20 : ವಾರದ ದಿನವಾದರೇನು, ವಾರಾಂತ್ಯವಾದರೇನು ಸುದ್ದಿಗಳಿಗೆ ಎಂದೂ ಬರವಿರುವುದಿಲ್ಲ. ಒಂದೆಡೆ ದಕ್ಷಿಣ ಕೊರಿಯಾದಲ್ಲಿ ಭಾರತದ ಕ್ರೀಡಾಪಟುಗಳು ಚಿನ್ನದ ಬೇಟೆ ಆರಂಭಿಸಿದ್ದರೆ, ಮತ್ತೊಂದೆಡೆ ಬೆಂಗಳೂರಿನಲ್ಲಿ ವಿಷಾಹಾರ ಸೇವಿಸಿದ ಮಕ್ಕಳು ಮತ್ತೆ ಅಸ್ವಸ್ಥರಾದ ಕಾರಣ ಅವರನ್ನು ಮತ್ತೆ ಆಸ್ಪತ್ರೆಗೆ ಸೇರಿಸಲಾಗಿದೆ. [ಬಿಸಿಯೂಟ ಸೇವಿಸಿದ ಮಕ್ಕಳು ಅಸ್ವಸ್ಥ]
ವಾರದಲ್ಲಿ ಕೇವಲ ಐದು ದಿನ ಮಾತ್ರ ಕೆಲಸ ಮಾಡುವವರು ರಜಾ ಮಜಾದಲ್ಲಿ ತೊಡಗಿರುವ ಸಂದರ್ಭದಲ್ಲಿ ಭಾರತೀಯ ಸೈನಿಕರು ಬಂದೂಕು ಹಿಡಿದು ಭಾರತದ ಗಡಿ ಕಾಯುವ ಕಾಯಕದಲ್ಲಿ ತೊಡಗಿದ್ದಾರೆ. ಭಾರತದ ಗಡಿಯಲ್ಲಿ 200ಕ್ಕೂ ಹೆಚ್ಚು ಉಗ್ರರು ಹೊಂಚುಹಾಕಿ ಕುಳಿತಿದ್ದಾರಂತೆ. ಈ ಸೈನಿಕರಿಗೆಲ್ಲಿ ವಾರಾಂತ್ಯ? ಎಲ್ಲಿಯ ಮಜಾ?
ಪತ್ರಕರ್ತರು ಕೂಡ ಒಂದು ರೀತಿ ಸೈನಿಕರಿದ್ದ ಹಾಗೆ. ಕೈಯಲ್ಲಿ ಪೆನ್ನು, ಪೇಪರು ಹಿಡಿದು ಸುದ್ದಿಗಾಗಿ ಸದಾ ಸನ್ನದ್ಧರಾಗಿರಬೇಕು. ನಮ್ಮ ಕನ್ನಡದ ಓದುಗರು ಮಾತ್ರ ಎಲ್ಲೇ ಇರಲಿ, ಮೊಬೈಲನ್ನು ಓಪನ್ ಮಾಡಿಕೊಂಡು ಕನ್ನಡ ಸುದ್ದಿಗಾಗಿ ಹುಡುಕಾಡುತ್ತಿರುತ್ತಾರೆ. ಅಂಥವರಿಗಾಗಿ ಇಲ್ಲಿ ಒಂದಿಷ್ಟು ರೋಚಕ ಸುದ್ದಿಗಳನ್ನು ಚಿತ್ರಗಳ ಸಮೇತ ನೀಡುತ್ತಿದ್ದೇವೆ. ಓದಿಕೊಳ್ಳಿ.

ಮೈಸೂರಿನ ಬಳಿ ಕಾಡಲ್ಲಿ ಚಿರತೆ ಮರಿ ಪತ್ತೆ
ಮೈಸೂರು ಜಿಲ್ಲೆಯ ಜೈಪುರಿಯಾ ಎಂಬ ಗ್ರಾಮದಲ್ಲಿ ಶುಕ್ರವಾರ ಸಂಜೆ ಎರಡು ಚಿರತೆ ಮರಿಗಳು ಸಿಕ್ಕಿದ್ದು, ಅವನ್ನು ಮೈಸೂರಿಲ್ಲಿರುವ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಸಾಗಿಸಲಾಗಿದೆ.

ಮಧ್ಯಾಹ್ನದ ಬಿಸಿಯೂಟ : ಮಕ್ಕಳು ಮತ್ತೆ ಅಸ್ವಸ್ಥ
ಬೆಂಗಳೂರಿನ ಡಿಜೆ ಹಳ್ಳಿಯಲ್ಲಿರುವ ಸರಕಾರಿ ಉರ್ದು ಶಾಲೆಯಲ್ಲಿ ಇಸ್ಕಾನ್ ನೀಡಿದ ಮಧ್ಯಾಹ್ನದ ಬಿಸಿಯೂಟ ಮಾಡಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು. ಊಟದಲ್ಲಿ ಹಲ್ಲಿ ಬಿದ್ದಿದ್ದರಿಂದ ಈ ಘಟನೆ ಸಂಭವಿಸಿತ್ತು. ಆದರೆ, ಶನಿವಾರ ಕೂಡ 35 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಅವರನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಟ್ಟ ಗುರಿಯನ್ನು ತಪ್ಪದ ಭಾರತದ ಗುರಿಕಾರ
ದ.ಕೊರಿಯಾದಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ 50 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ದಕ್ಕಿಸಿಕೊಟ್ಟ ಜಿತು ರೈಗೆ ಅಭಿನಂದನೆ.

ಅಲಹಾಬಾದ್ ನಲ್ಲಿ ಬ್ರಾಹ್ಮಣರಿಂದ ಪಿಂಡ ಪ್ರದಾನ
ಪಿತೃಪಕ್ಷದಲ್ಲಿ ಅಗಲಿದ ಹಿರಿಯರಿಗೆ ಪಿಂಡ ಪ್ರದಾನ ಮಾಡುವುದು ವಾಡಿಕೆ. ಅಲಹಾಬಾದ್ ಸಂಗಮದಲ್ಲಿ ಪಿಂಡಪ್ರದಾನ ಕರ್ಮದಲ್ಲಿ ತೊಡಗಿರುವ ಬ್ರಾಹ್ಮಣರು.

ನವರಾತ್ರಿಗಾಗಿ ಸಿದ್ಧರಾಗುತ್ತಿರುವ ಸುಂದರಿಯರು
ನವರಾತ್ರಿ ಆರಂಭಕ್ಕೆ ಇನ್ನು ಕೆಲವೇ ದಿನ. ಈ ಸಂಭ್ರಮವನ್ನು ಎದುರುನೋಡುತ್ತಿರುವ ಅಹ್ಮದಾಬಾದಿನ ಸುಂದರ ಯುವತಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಚಿನ್ನದ ಕೊಳ್ಳೆ ಹೊಡೆಯುವುದೆ ಭಾರತ ತಂಡ?
ದಕ್ಷಿಣ ಕೊರಿಯಾದಲ್ಲಿ ಆರಂಭವಾಗಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸುತ್ತಿರುವ ಭಾರತೀಯ ಕ್ರೀಡಾಪಟುಗಳು ತ್ರಿವರ್ಣ ಧ್ವಜ ಹಿಡಿದು ಕೈಬೀಸುತ್ತಿರುವುದು. ಭಾರತ ಶೂಟಿಂಗ್ ನಲ್ಲಿ ಮೊದಲ ಚಿನ್ನದ ಪದಕ ಗೆದ್ದಿದೆ.

ಬ್ಯಾಟ್ ಬಿಟ್ಟು ಬ್ಯಾಡ್ಮಿಂಟನ್ ಹಿಡಿದ ಧೋನಿ
ಸಕಲ ಕ್ರೀಡಾವಲ್ಲಭ ಎಂಎಸ್ ಧೋನಿ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಬ್ಯಾಟ್ ಹಿಡಿದದ್ದು ಮಾತ್ರವಲ್ಲ, ಡಬಲ್ಸ್ ನಲ್ಲಿ ಗೆದ್ದರು ಕೂಡ. (ಚಿತ್ರ : ಒನ್ಇಂಡಿಯಾ)

ಪಟಾಕಿ ತಯಾರಿಕಾ ಫ್ಯಾಕ್ಟರಿಯಲ್ಲಿ ಸ್ಫೋಟ
ಉತ್ತರಪ್ರದೇಶದ ಲಖನೌನ ಮೋಹನಲಾಲ್ ಗಂಜ್ ಎಂಬ ಪ್ರದೇಶದಲ್ಲಿ ಪಟಾಕಿ ತಯಾರಿಕಾ ಫ್ಯಾಕ್ಟರಿಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಸ್ಫೋಟದಲ್ಲಿ 5 ಜನ ಸತ್ತು, 14 ಜನರು ಗಾಯಗೊಂಡಿದ್ದಾರೆ.












Click it and Unblock the Notifications