ಏರ್ ಸುವಿಧಾ ಸ್ಥಗಿತ: ವಿದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಹೊಸ ನಿಯಮ
ನವದೆಹಲಿ, ನವೆಂಬರ್ 21: ಭಾರತಕ್ಕೆ ಬರುವ ವಿದೇಶಿ ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ನೀಡಿದೆ. ಏರ್ ಸುವಿಧಾ ಪೋರ್ಟಲ್ನಲ್ಲಿ ಕೋವಿಡ್ ವ್ಯಾಕ್ಸಿನೇಷನ್ಗಾಗಿ ಸ್ವಯಂ ಘೋಷಣೆಯ ನಮೂನೆಗಳನ್ನು ಇನ್ನು ಮುಂದೆ ಭರ್ತಿ ಮಾಡುವ ಅಗತ್ಯವಿರುವುದಿಲ್ಲ ಎಂದು ಸರ್ಕಾರ ಹೇಳಿದೆ. ಅಲ್ಲದೆ ಈ ನಿರ್ಧಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಇಂದು ಸಂಜೆ ನಾಗರಿಕ ವಿಮಾನಯಾನ ಸಚಿವಾಲಯದ ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಕೋವಿಡ್ 19 ಸೋಂಕಿತರ ಸಂಖ್ಯೆ ನಿರಂತರವಾಗಿ ಕ್ಷೀಣಿಸುತ್ತಿದೆ ಮತ್ತು ಜಾಗತಿಕವಾಗಿ ಮತ್ತು ಭಾರತದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. ಆದ್ದರಿಂದ ವಿದೇಶದಿಂದ ಬರುವ ಪ್ರಯಾಣಿಕರಿಗೆ ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಪ್ರವಾಸಿಗರೇ ಎಚ್ಚರ; ಗೋವಾ ಪ್ರವಾಸೋದ್ಯಮದಲ್ಲಿ ಹೊಸ ಬದಲಾವಣೆಗಳು
ಆರೋಗ್ಯ ಸಚಿವಾಲಯದ ಪರಿಷ್ಕೃತ ಮಾರ್ಗಸೂಚಿಗಳನ್ನು ಪರಿಗಣಿಸಿ ಆನ್ಲೈನ್ ಏರ್ ಸುವಿಧಾ ಪೋರ್ಟಲ್ನಲ್ಲಿ ಸ್ವಯಂ ಘೋಷಣೆ ನಮೂನೆಯನ್ನು ಸಲ್ಲಿಸುವುದನ್ನು ನಿಲ್ಲಿಸಲಾಗಿದೆ ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ. ಆದರೆ, ಕೋವಿಡ್ ಪರಿಸ್ಥಿತಿಯ ದೃಷ್ಟಿಯಿಂದ ಅಗತ್ಯವಿದ್ದರೆ ನಿಯಮವನ್ನು ಪರಿಶೀಲಿಸಬಹುದು ಎಂದು ಸೂಚಿಸಲಾಗಿದೆ.
ಈ ಹಿಂದೆ ಭಾರತೀಯ ವಿಮಾನಯಾನ ಸಚಿವಾಲಯದ ಏರ್ ಸುವಿಧಾ ಪೋರ್ಟಲ್ನಲ್ಲಿ ಭಾರತಕ್ಕೆ ವಿದೇಶದಿಂದ ಬರುವ ಪ್ರಯಾಣಿಕರಿಗೆ ಅದರಲ್ಲಿ ಪ್ರಯಾಣಿಕರು ಪಡೆದ ಲಸಿಕೆಗಳ ಸಂಖ್ಯೆ ಮತ್ತು ಅದರ ದಿನಾಂಕಗಳನ್ನು ಒಳಗೊಂಡಂತೆ ತಮ್ಮ ವ್ಯಾಕ್ಸಿನೇಷನ್ ಸ್ಥಿತಿಯನ್ನು ಕಡ್ಡಾಯವಾಗಿ ಘೋಷಿಸಬೇಕಾಗಿತ್ತು. ಇದು ಬಹುತೇಕ ರಾಷ್ಟ್ರಗಳಲ್ಲಿನ ನಿಯಮಗಳಿಗೆ ಅನುಗುಣವಾಗಿತ್ತು.
ಪ್ರಯಾಣಿಕರಿಗೆ ಸಂಪೂರ್ಣವಾಗಿ ಲಸಿಕೆ ಹಾಕಲು ಆದ್ಯತೆ ನೀಡಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ಗಳ ಬಳಕೆ ಮತ್ತು ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ಗಾಗಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಸಚಿವಾಲಯ ಹೇಳಿದೆ. ಕಳೆದ ವಾರ ವಿಮಾನಯಾನ ಸಚಿವಾಲಯವು ವಿಮಾನ ಪ್ರಯಾಣದ ಸಮಯದಲ್ಲಿ ಮಾಸ್ಕ್ಗಳ ಬಳಕೆಯನ್ನು ಇನ್ನು ಮುಂದೆ ಕಡ್ಡಾಯವಲ್ಲ ಎಂದು ಹೇಳಿತ್ತು. ಆದರೂ ಕೊರೋನಾ ವೈರಸ್ನ ಮತ್ತೊಂದು ಅಲೆಯನ್ನು ತಡೆಯಲು ಪ್ರಯಾಣಿಕರು ಅವುಗಳನ್ನು ಬಳಸಬೇಕು ಎನ್ನಲಾಗಿತ್ತು.
ಅಲ್ಲಿಯವರೆಗೆ ವಿಮಾನಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯವಾಗಿತ್ತು. ಕೋವಿಡ್-19 ನಿರ್ವಹಣೆಗೆ ಶ್ರೇಣೀಕೃತ ವಿಧಾನದ ಸರ್ಕಾರದ ನೀತಿಗೆ ಅನುಗುಣವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕಳೆದ ವಾರಗಳಲ್ಲಿ ಕೋವಿಡ್ ಪ್ರಕರಣಗಳು ಕುಗ್ಗುತ್ತಿವೆ. ಪ್ರಸ್ತುತ, ಸಕ್ರಿಯ ಪ್ರಕರಣಗಳು (6,402) ಒಟ್ಟು ಸೋಂಕುಗಳ 0.01 ಪ್ರತಿಶತವನ್ನು ಒಳಗೊಂಡಿವೆ ಎಂದು ಸೋಮವಾರ ಬೆಳಿಗ್ಗಿನ ಅಧಿಕೃತ ಮಾಹಿತಿಯು ತೋರಿಸಿದೆ. ರಾಷ್ಟ್ರೀಯ ಚೇತರಿಕೆ ದರವು 98.8 ಪ್ರತಿಶತಕ್ಕೆ ಏರಿದೆ.