ಹೊಸ ಸಂಸತ್ ಉದ್ಘಾಟನೆ; ಸೆಂಗೊಲ್ ಪ್ರತಿಷ್ಠಾಪಿಸಿದ ನರೇಂದ್ರ ಮೋದಿ
ನವದೆಹಲಿ, ಮೇ 28; ಹೊಸ ಸಂಸತ್ ಭವನವನ್ನು ಭಾನುವಾರ ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಮತ್ತು ಪವಿತ್ರವಾದ 'ಸೆಂಗೊಲ್' ಅನ್ನು ಪ್ರತಿಷ್ಠಾಪಿಸಿದರು.
ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದ ಅಂಗವಾಗಿ ಭಾನುವಾರ ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ವಿವಿಧ ಕೇಂದ್ರ ಸಚಿವರು ಉಪಸ್ಥಿತರಿದ್ದರು.

ಪೂಜೆಯ ಬಳಿಕ ಐತಿಹಾಸಿಕ ಮತ್ತು ಪವಿತ್ರವಾದ 'ಸೆಂಗೊಲ್' ಅನ್ನು ಪುರೋಹಿತರು ಪ್ರಧಾನಿ ನರೇಂದ್ರ ಮೋದಿಗೆ ಹಸ್ತಾಂತರ ಮಾಡಿದರು. ಭಕ್ತಿಯಿಂದ ಸಾಷ್ಟಾಂಗ ನಮಸ್ಕಾರ ಮಾಡಿದ ಮೋದಿ, 'ಸೆಂಗೊಲ್' ಅನ್ನು ಲೋಕಸಭೆ ಸ್ಪೀಕರ್ ಪೀಠದ ಸಮೀಪ ಪ್ರತಿಷ್ಠಾಪಿಸಿದರು. ಸ್ಪೀಕರ್ ಓಂ ಬಿರ್ಲಾ ಈ ಸಂದರ್ಭದಲ್ಲಿ ಜೊತೆಗಿದ್ದರು.
ಶನಿವಾರ ತಮಿಳುನಾಡಿನಿಂದ ಆಗಮಿಸಿದ್ದ ಪುರೋಹಿತರ ವಿಶೇಷ ನಿಯೋಗ ಚೋಳರ ಕಾಲದ ಚಿನ್ನದ ಸೆಂಗೊಲ್ (ರಾಜದಂಡ)ವನ್ನು ಪ್ರಧಾನಿ ನರೇಂದ್ರ ಮೋದಿಗೆ ಹಸ್ತಾಂತರ ಮಾಡಿತ್ತು. ಭಾನುವಾರ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಪೂಜೆಯ ಬಳಿಕ ಸೆಂಗೊಲ್ ಅನ್ನು ಲೋಕಸಭೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.

ಐತಿಹಾಸಿಕ ಸೆಂಗೊಲ್; ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಈ ಪವಿತ್ರ 'ಸೆಂಗೊಲ್' ಅನ್ನು ಬ್ರಿಟಿಷರು ಭಾರತಕ್ಕೆ ಅಧಿಕಾರದ ಹಸ್ತಾಂತರದ ಸಂಕೇತವಾಗಿ ಹಸ್ತಾಂತರ ಮಾಡಿದ್ದರು. ಐದು ಅಡಿ ಎತ್ತರವಿರುವ ಇದರ ತುದಿಯಲ್ಲಿ ಚಿಕ್ಕ ನಂದಿಯ ವಿಗ್ರಹವಿದೆ. ಹೊಸ ಸಂಸತ್ ಕಟ್ಟಡ ನಿರ್ಮಾಣದ ಸಂಕೇತವಾಗಿ ಇದನ್ನು ಲೋಕಸಭೆ ಸ್ಪೀಕರ್ ಪೀಠದ ಸಮೀಪ ಪ್ರತಿಷ್ಠಾಪಿಸಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, "ಹೊಸ ಸಂಸತ್ ಭವನವನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಭಾನುವಾರ ಇತಿಹಾಸ ಮರುಕಳಿಸಲಿದೆ. ಈ ದಿನದಂದು, ಪ್ರಧಾನಮಂತ್ರಿ ನರೇಂದ್ರ ಮೋದಿ ನ್ಯಾಯಯುತ ಮತ್ತು ಸಮಾನ ಆಡಳಿತದ ಪವಿತ್ರ ಸಂಕೇತವಾದ ಸೆಂಗೊಲ್ ಅನ್ನು ಸ್ವೀಕರಿಸುತ್ತಾರೆ ಮತ್ತು ಅದನ್ನು ಹೊಸ ಸಂಸತ್ತಿನ ಭವನದಲ್ಲಿ ಸ್ಥಾಪಿಸುತ್ತಾರೆ" ಎಂದು ಹೇಳಿದ್ದರು.
"ಸೆಂಗೊಲ್ ಅನ್ನು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಆಗಸ್ಟ್ 14ರ ರಾತ್ರಿ ತಮ್ಮ ನಿವಾಸದಲ್ಲಿ ಹಲವಾರು ನಾಯಕರ ಸಮ್ಮುಖದಲ್ಲಿ ಸ್ವೀಕರಿಸಿದ್ದರು. ನಾವು ಸ್ವಾತಂತ್ರ್ಯ ಎಂದು ಆಚರಿಸುತ್ತಿರುವುದನ್ನು ವಾಸ್ತವವಾಗಿ ಸೆಂಗೊಲ್ ಹಸ್ತಾಂತರಿಸುವ ಕ್ಷಣದಿಂದ ಗುರುತಿಸಲಾಗಿದೆ' ಎಂದು ಅಮಿತ್ ಶಾ ವಿವರಣೆ ನೀಡಿದ್ದರು.
'ಸೆಂಗೊಲ್' ಅರ್ಥದಲ್ಲಿ ಆಳವಾದದ್ದು, ಇದು ತಮಿಳು ಪದ 'ಸೆಮ್ಮೈ' ನಿಂದ ಬಂದಿದೆ. ಅಂದರೆ 'ಸದಾಚಾರ'. ಇದು ತಮಿಳುನಾಡಿನ ಪ್ರಮುಖ ಧಾರ್ವಿುಕ ಮಠದ ಪ್ರಧಾನ ಅರ್ಚಕರಿಂದ ಆಶೀರ್ವಾದ ಪಡೆದಿದೆ. ಸೆಂಗೊಲ್ ತುದಿಯಲ್ಲಿರುವ ನಂದಿಯ ವಿಗ್ರಹ 'ನ್ಯಾಯ'ದ ವೀಕ್ಷಕನಂತೆ. ಸೆಂಗೊಲ್ ಮೇಲ್ಭಾಗದಲ್ಲಿ ಅದನ್ನು ಕೈಯಿಂದ ಕೆತ್ತಲಾಗಿದೆ.
ಬಹು ಮುಖ್ಯವಾಗಿ ಸೆಂಗೊಲ್ ಸ್ವೀಕರಿಸುವವರು ನ್ಯಾಯಯುತವಾಗಿ ಮತ್ತು ನ್ಯಾಯಯುತವಾಗಿ ಆಡಳಿತ ನಡೆಸಲು 'ಆದೇಶ' (ತಮಿಳಿನಲ್ಲಿ "ಆನೈ") ಹೊಂದಿರುತ್ತಾರೆ. ಇದು ಅತ್ಯಂತ ಆಕರ್ಷಕವಾಗಿದೆ, ಏಕೆಂದರೆ ಜನರ ಸೇವೆಗಾಗಿ ಆಯ್ಕೆಯಾದವರು ಇದನ್ನು ಎಂದಿಗೂ ಮರೆಯಬಾರದು.
ಸೆಂಗೋಲ್ ಅನ್ನು ಲೋಕಸಭೆಯಲ್ಲಿ ಸ್ಪೀಕರ್ ಪೀಠದ ಹತ್ತಿರದಲ್ಲಿ ಸ್ಥಾಪನೆ ಮಾಡಲಾಗಿದೆ. ಇದನ್ನು ರಾಷ್ಟ್ರವು ನೋಡುವುದಕ್ಕಾಗಿ ಪ್ರದರ್ಶಿಸಲಾಗುತ್ತದೆ ಮತ್ತು ವಿಶೇಷ ಸಂದರ್ಭಗಳಲ್ಲಿ ಹೊರತೆಗೆಯಲಾಗುತ್ತದೆ. ಐತಿಹಾಸಿಕ ಸೆಂಗೊಲ್ ಅನ್ನು ಸ್ಥಾಪಿಸಲು ಸಂಸತ್ ಭವನವು ಅತ್ಯಂತ ಸೂಕ್ತವಾದ ಮತ್ತು ಪವಿತ್ರ ಸ್ಥಳವಾಗಿದೆ ಎಂದು ನರೇಂದ್ರ ಮೋದಿ ತೀರ್ಮಾನ ಕೈಗೊಂಡಿದ್ದರು.
ಭಾರತದ ಸ್ವಾತಂತ್ರ್ಯದ ಸಂದರ್ಭದಲ್ಲಿ ಅಧಿಕಾರದ ಹಸ್ತಾಂತರದ ಸಮಯದಲ್ಲಿ ಪಂ. ಜವಾಹರಲಾಲ್ ನೆಹರು ಅವರಿಗೆ ಸೆಂಗೊಲ್ ಹಸ್ತಾಂತರವಾಗಿತ್ತು. ಆಗಸ್ಟ್ 14, 1947ರ ರಾತ್ರಿ ಭಾರತದ ಸ್ವಾತಂತ್ರ್ಯವನ್ನು ಆಚರಿಸುವ ವಿಶೇಷ ಸಂದರ್ಭವಾಗಿತ್ತು. ಈ ರಾತ್ರಿ ಜವಾಹರಲಾಲ್ ನೆಹರು ತಮಿಳುನಾಡಿನ ತಿರುವಾಡುತುರೈ ಅಧೀನಂ (ಮಠ) ಅಧೀನಮ್ (ಅರ್ಚಕರು) ಅವರಿಂದ 'ಸೆಂಗೊಲ್' ಸ್ವೀಕರಿಸಿದ್ದರು.











Click it and Unblock the Notifications