'ಕೇಂದ್ರ ಸೂಚಿಸಿದರೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ'
ನವದೆಹಲಿ, ಜನವರಿ 3: ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಸಲು ಭಾರತೀಯ ಸೇನೆ ಸಜ್ಜಾಗಿದೆ.
ಭಾರತದ ನೂತನ ಭೂಸೇನಾ ಮುಖ್ಯಸ್ಥ ಜನರಲ್ ಮನೋಜ್ ನರವಾಣೆ ಪಾಕಿಸ್ತಾನಕ್ಕೆ ಹೊಸ ಸಂದೇಶ ರವಾನಿಸಿದ್ದಾರೆ. ಕೇಂದ್ರ ಸರ್ಕಾರ ಅನುಮತಿಸಿದರೆ ಅಥವಾ ಸೂಚಿಸಿದರೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಸಲು ಸೇನೆ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ಪಾಕ್ ಆಕ್ರಮಿತ ಕಾಶ್ಮೀರ ನಮ್ಮ ಮುಂದಿನ ಗುರಿ ಎಂದಿರುವ ಕೇಂದ್ರ ಸರ್ಕಾರದ ಮಾತಿಗೆ ಪೂರಕವಾಗಿ ಸೇನಾ ಮುಖ್ಯಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಮ್ಮು ಕಾಶ್ಮೀರ ಹಾಗೂ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆ ಈಗಾಗಲೇ ಸೇನೆಯನ್ನು ಸಜ್ಜುಗೊಳಿಸಿಟ್ಟಿದೆ. ಭಾರತದ ಮುಂದೆ ಸಾಕಷ್ಟು ತಂತ್ರಗಳಿವೆ.

ಆದರೆ ಯಾವುದನ್ನು ಉಪಯೋಗಿಸಬೇಕೆನ್ನುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಸರ್ಕಾರ ಇಂತಹ ಕೆಲಸವನ್ನು ಮಾಡಬೇಕೆಂದು ಸೂಚಿಸಿದರೆ ಅದನ್ನು ಚಾಚೂ ತಪ್ಪದೆ ಸೇನೆ ನಿರ್ವಹಿಸಲಿದೆ.
ಇದು ಯಾವ ರೀತಿಯ ತಂತ್ರಗಾರಿಕೆಯಾಗಿರಲಿದೆ ಎನ್ನುವುದನ್ನು ಮಾಧ್ಯಮದ ಮುಂದೆ ಚರ್ಚಿಸಲು ಸಾಧ್ಯವಿಲ್ಲ ಆದರೆ ಸರ್ಕಾರ ಹೇಳಿದ್ದನ್ನು ಮಾಡಲು ಹಿಂದೆ ಸರಿಯುವುದಿಲ್ಲ ಎಂದು ಜನರಲ್ ನರವಾಣೆ ಸ್ಪಷ್ಟಪಡಿಸಿದ್ದಾರೆ.
ಪಾಕ್ ಆಕ್ರಮಿತ ಪ್ರದೇಶದಲ್ಲಿರುವ ಜನರಿಗೆ ಗಡಿಯತ್ತ ಹೋಗಬೇಡಿ ಎಂದು ಪಾಕಿಸ್ತಾನದ ಪ್ರಧಾನಿಯೇ ಮನವಿ ಮಾಡಿದ್ದಾರೆ. ಇದು ಭಾರತದ ಬಗ್ಗೆ ಪಾಕಿಸ್ತಾನಕ್ಕೆ ಇರುವ ಭಯವನ್ನು ಸೂಚಿಸುತ್ತದೆ. ಹಾಗೆಯೇ ಗಡಿಯತ್ತ ನುಸುಳಿದರೆ ಭಾರತದ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೂ ಗೊತ್ತಾಗಿದೆ.
ಇನ್ನೊಮ್ಮೆ 1965 ಹಾಗೂ 1971ರ ತಪ್ಪನ್ನು ಪಾಕಿಸ್ತಾನ ಮಾಡುವುದಿಲ್ಲ ಎಂಬ ವಿಶ್ವಾಸವಿದೆ. ಒಂದೊಮ್ಮೆ ಅಂತಹ ಉದ್ಧಟತನಕ್ಕೆ ಪಾಕಿಸ್ತಾನ ಮುಂದಾದರೆ ಪಾಕ್ ಆಕ್ರಮಿತ ಪ್ರದೇಶ ಏನಾಗಲಿದೆ ಎಂದು ಭಾರತ ತೋರಿಸಬೇಕಾಗುತ್ತದೆ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ನರವಾಣೆ ತಿಳಿಸಿದ್ದಾರೆ.
ಪಾಕ್ ಆಕ್ರಮಿತ ಪ್ರದೇಶದಲ್ಲಿ ನುಸುಳುಕೋರರ ಸಂಖ್ಯೆ ಹೆಚ್ಚಾಗುವುದು ಹಾಗೂ ಅಲ್ಲಿ ಉಗ್ರರ ನೆಲೆ ಅಥವಾ ಲಾಂಚ್ ಪ್ಯಾಡ್ಗಳನ್ನು ನಿರ್ಮಿಸುವುದನ್ನು ಭಾರತ ಸಹಿಸುವುದಿಲ್ಲ, ಅಗತ್ಯವಿದ್ದಾಗ ಯಾವುದೇ ರೀತಿಯ ದಾಳಿಗೂ ಸೇನೆ ಸಿದ್ಧವಾಗಿದೆ. ಎರಡು ಸರ್ಜಿಕಲ್ ದಾಳಿಗಳು ಭಾರತದ ಸಾಮರ್ಥ್ಯವನ್ನು ಈಗಾಗಲೇ ಪ್ರದರ್ಶಿಸಿದೆ ಎಂದು ಹೇಳಿದ್ದಾರೆ.












Click it and Unblock the Notifications