ನೇತಾಜಿ, ಆರ್ ಎಸ್ ಎಸ್ ಕನಸು ಒಂದೇ.. ಅದು ಭಾರತವನ್ನು ಶ್ರೇಷ್ಠವಾಗಿಸುವ ಗುರಿ : ಮೋಹನ್ ಭಾಗವತ್
ಕೋಲ್ಕತ್ತಾ, ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಆರ್ಎಸ್ಎಸ್ ಒಂದೇ ಗುರಿಯನ್ನ ಹೊಂದಿದೆ, ಅದು ಭಾರತವನ್ನು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುವುದು ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಆರ್ಎಸ್ಎಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ನಮ್ಮ ಕನಸುಗಳು ಪರಸ್ಪರ ಪೂರಕವಾಗಿದೆ ಎಂದಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಅವರ ಪಾತ್ರ ಅವಿಸ್ಮರಣೀಯ. ನೇತಾಜಿ ಅವರ ಆದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡುವ ಮೂಲಕ, ಭಾರತವನ್ನು ವಿಶ್ವಗುರುವನ್ನಾಗಿಸಲು ಶ್ರಮಿಸಬೇಕು ಎಂದು ಮೋಹನ್ ಭಾಗವತ್ ಇದೇ ವೇಳೆ ಕರೆ ನೀಡಿದರು.

ನಾವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ಮರಿಸುತ್ತೇನೆ ಏಕೆಂದರೆ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆಗಳಿಂದ ಮಾತ್ರ ಮಹಾನ್ ವ್ಯಕ್ತಿಯಾಗಿಲ್ಲ. ಅವರ ಗುಣಧರ್ಮದಿಂದಲೂ, ಅವರ ಆದರ್ಶಗಳಿಂದಲೂ ಅವರು ದೇಶವಾಸಿಗಳ ಮನದಲ್ಲಿ ನೆಲೆಸಿದ್ದಾರೆ. ನೇತಾಜಿ ಅವರ ಕನಸಿನ ಭಾರತದ ಆಶಯ ಇಂದಿಗೂ ಕೂಡಾ ಈಡೇರಿಲ್ಲ. ನಾವು ಭಾರತವನ್ನು ಮಹಾನ್ ರಾಷ್ಟ್ರವನ್ನಾಗಿ ಮಾಡಲು ತುಂಬ ಶ್ರಮಿಸಬೇಕಿದೆ. ಸನ್ನಿವೇಶಗಳು ಮತ್ತು ಮಾರ್ಗಗಳು ಭಿನ್ನವಾಗಿರಬಹುದು, ಆದರೆ ಗಮ್ಯಸ್ಥಾನವು ಒಂದೇ ಆಗಿರುತ್ತದೆ ಎಂದು ಮೋಹನ್ ಭಾಗವತ್ ಅವರು ಭಿಪ್ರಾಯಪಟ್ಟರು.
ಸುಭಾಷ್ ಚಂದ್ರ ಬೋಸ್ ಅವರು ಮೊದಲು ಕಾಂಗ್ರೆಸ್ನಲ್ಲಿದ್ದರು. ಈ ವೇಳೆ ಅವರು ಸತ್ಯಾಗ್ರಹ ಹಾಗೂ ಆಂದೋಲನದ ಹಾದಿಯಲ್ಲಿ ಸಾಗಿದರು. ಆ ನಂತರ ಅವರಿಗೆ ಸ್ವಾತಂತ್ರ್ಯಕ್ಕಾಗಿ ಕೇವಲ ಸತ್ಯಾಗ್ರಹವಷ್ಟೇ ಸಾಕಾಗುವುದಿಲ್ಲ ಎಂಬುದು ಅರಿವಾಯಿತು. ಸ್ವಾತಂತ್ರ್ಯ ಪಡೆಯಲು ಅವರು ಅನ್ಯ ಮಾರ್ಗದತ್ತ ಹೊರಳಿದರು. ಕಾಂಗ್ರೆಸ್ ಮತ್ತು ನೇತಾಜಿ ಅವರ ಮಾರ್ಗಗಳು ಬೇರೆ ಬೇರೆಯಾದರೂ, ಅವರ ಗುರಿ ಮಾತ್ರ ಸ್ವಾತಂತ್ರ್ಯ ಪಡೆಯುವುದೇ ಆಗಿತ್ತು ಎಂದು ಹೇಳಿದರು.
ಸುಭಾಷ್ ಚಂದ್ರ ಭೋಸ್ ಅವರ ಸಿದ್ದಾಂತ ಇದು ನಮ್ಮ ಮುಂದಿದೆ. ಅವರ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ನಾವು ಅವರಿಗೆ ನಿಜವಾದ ಗೌರವ ಸಲ್ಲಿಸಬೇಕು. ನೇತಾಜಿ ಮಾರ್ಗ ಅತ್ಯಂತ ಕಠಿಣವಾಗಿದ್ದು, ಈ ಮಾರ್ಗದಲ್ಲಿ ನಡೆಯಲು ಅಪಾರವಾದ ಬದ್ಧತೆ ಬೇಕು. ಭಾರತವು ಪ್ರಪಂಚದ ಒಂದು ಸಣ್ಣ ಆವೃತ್ತಿಯಾಗಿದೆ ಮತ್ತು ಭಾರತವು ಜಗತ್ತಿಗೆ ಪರಿಹಾರವನ್ನು ನೀಡಬೇಕು ಎಂದು ನೇತಾಜಿ ಹೇಳಿದ್ದರು. ನಾವೆಲ್ಲರೂ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥರು ಹೇಳಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಕೇವಲ ಸ್ವಾತಂತ್ರ್ಯದ ಕನಸನ್ನು ಮಾತ್ರ ಹೊಂದಿರಲಿಲ್ಲ. ಬದಲಿಗೆ ಸ್ವಾತಂತ್ರ್ಯೋತ್ತರ ಭಾರತವನ್ನು ಹೇಗೆ ನಿರ್ಮಾಣ ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಹೊಂದಿದ್ದರು. ಭಾರತ ವಿಶ್ವಗುರುವಾಗಿ ರಾರಾಜಿಸುವುದನ್ನು ನೋಡಲು ನೇತಾಜಿ ಬಯಸಿದ್ದರು. ಆರ್ಎಸ್ಎಸ್ ನೇತಾಜಿ ಅವರ ಈ ಕನಸನ್ನು ಸಾಕಾರಗೊಳಿಸಲು ಶ್ರಮಿಸುತ್ತಿದೆ ಎಂದು ಮೋಹನ್ ಭಾಗವತ್ ಸ್ಪಷ್ಟಪಡಿಸಿದರು.












Click it and Unblock the Notifications