ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ನೂರಾರು ಕನಸುಗಳಿಗೆ 3 ಮತ್ತೊಂದು ಪ್ರಶ್ನೆ...
ನವದೆಹಲಿ, ಜುಲೈ.29: "ಮಾತೃಭಾಷೆಯಲ್ಲಿ ಅಥವಾ ಸ್ಥಳೀಯ/ಪ್ರಾದೇಶಿಕ ಭಾಷೆಯಲ್ಲಿ 5ನೇ ತರಗತಿ ತನಕ ಎಲ್ಲ ಶಾಲೆಗಳಲ್ಲೂ ಕಲಿಕಾ ಮಾಧ್ಯಮವಾಗಿ ಇರಲಿದೆ" (ಎಂಟನೇ ತರಗತಿ ಮತ್ತು ಅದರ ಆಚೆಗೂ ಆದ್ಯತೆ ನೀಡಬೇಕು ಎನ್ನುತ್ತದೆ ಹೊಸ ನೀತಿ) ಎಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಹೇಳಲಾಗಿದೆ. ಬುಧವಾರ ಈ ಬಗ್ಗೆ ಘೋಷಣೆ ಮಾಡಲಾಗಿದೆ.
ಮೂವತ್ತು ವರ್ಷಗಳ ಹಿಂದೆ ಬದಲಾವಣೆ ಆಗಿದ್ದ ಶಿಕ್ಷಣ ನೀತಿ ಈಗ ಬದಲಾಗಿದೆ. ಎಷ್ಟೋ ರಾಜ್ಯಗಳು ಹತ್ತನೇ ತರಗತಿ ತನಕ ಮಾತೃಭಾಷೆ ಶಿಕ್ಷಣ ಕಡ್ಡಾಯ ಮಾಡಿವೆ. ಕರ್ನಾಟಕದಲ್ಲಿ ಕನಿಷ್ಠ ಏಳನೇ ತರಗತಿ ತನಕ ಆದರೂ ಮಾತೃ ಭಾಷೆಯೇ ಕಲಿಕಾ ಮಾಧ್ಯಮ ಆಗಬೇಕು ಎಂಬುದು ಹಳೇ ಒತ್ತಾಯ ಆಗಿತ್ತು.
ರಾಷ್ಟ್ರೀಯ ಶಿಕ್ಷಣ ನೀತಿ-2020: ಉನ್ನತ ಶಿಕ್ಷಣ ಅಭಿವೃದ್ಧಿಗೆ ಆನೆಬಲ
ಇನ್ನು ಮಕ್ಕಳ ಶಿಕ್ಷಣದ ಹಕ್ಕು 3ನೇ ವಯಸ್ಸಿನಿಂದಲೇ ಶುರುವಾಗುತ್ತದೆ. ಇಷ್ಟು ಸಮಯ ಯಾವುದನ್ನು ಪ್ಲೇ ಹೋಮ್ ಅಂತ ಕರೆಯಲಾಗುತ್ತಿತ್ತೋ ಅಂಥವು ಬಾಗಿಲು ಮುಚ್ಚಬೇಕಾಗಬಹುದು. ಅದು ಕೂಡ ಶಾಲೆಗಳ ವ್ಯಾಪ್ತಿಗೇ ಬರುತ್ತದೆ. ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಎನಿಸುತ್ತದೆ. ಆದರೆ ಕೌಶಲಕ್ಕೆ ಸಂಬಂಧಿಸಿದ ಕೋರ್ಸ್ ಗಳನ್ನು ಆರನೇ ತರಗತಿಯಿಂದಲೇ ಪರಿಚಯಿಸಲಾಗುತ್ತಿದೆ. ಇದರ ಜತೆಗೆ ಇಂಟನ್ ಷಿಪ್ ಕೂಡ ಇರುತ್ತದಂತೆ.
ಕೆಲವು ದೇಶಗಳಲ್ಲಿ ಈಗಾಗಲೇ ಇವೆ:
ಕೆಲವು ದೇಶಗಳಲ್ಲಿ ಈಗಾಗಲೇ ಇರುವಂಥ ಪದ್ಧತಿ ಇದು ಹಾಗೂ ಜನಪ್ರಿಯ ಮಾದರಿ ಎಂಬುದು ಹೌದು. ಎಲ್ಲ ಹಂತದಲ್ಲೂ ಸಂಸ್ಕೃತವನ್ನು ಒಂದು ಭಾಷೆಯನ್ನಾಗಿ ಕಲಿಯಬಹುದು. ಪ್ರೌಢ ಶಿಕ್ಷಣದ ಭಾಗವಾಗಿ ವಿದೇಶೀ ಭಾಷೆಗಳನ್ನು ಕಲಿಯಬಹುದು. "ಯಾವುದೇ ಭಾಷೆಯನ್ನು ವಿದ್ಯಾರ್ಥಿಗಳ ಮೇಲೆ ಹೇರಬಾರದು" ಎನ್ನಲಾಗಿದೆ.
ಈಗ ಶಿಕ್ಷಣವನ್ನು ನಾಲ್ಕು ಭಾಗವಾಗಿ ವಿಂಗಡಿಸಲಾಗಿದೆ. ಮೂರರಿಂದ ಎಂಟನೇ ವಯಸ್ಸಿನ ತನಕ ಅಡಿಪಾಯದ ಹಂತ. ಅದರಾಚೆಗೆ ಮೂರು ವರ್ಷ ಪೂರ್ವ ಪ್ರಾಥಮಿಕ (ಎಂಟರಿಂದ ಹನ್ನೊಂದು), ಪೂರ್ವಸಿದ್ಧತಾ ಹಂತ (ಹನ್ನೊಂದರಿಂದ ಹದಿನಾಲ್ಕು) ಮತ್ತು ಪ್ರೌಢಶಿಕ್ಷಣ (ಹದಿನಾಲ್ಕರಿಂದ ಹದಿನೆಂಟು ವರ್ಷ).
ಪ್ರಧಾನಿ ನರೇಂದ್ರ ಮೋದಿ ಅವರಿಂದ ಕ್ರಾಂತಿಕಾರಿ ಹೆಜ್ಜೆ
ಇನ್ನು ಮುಂದೆ ಪಿಯುಸಿ ಎಂಬುದು ಇರೋದೇ ಇಲ್ಲ. ಜಾಗತಿಕ ಮಟ್ಟದಲ್ಲಿ ಮೂರರಿಂದ ಆರನೇ ವಯಸ್ಸನ್ನು ಕಲಿಕೆಗೆ ಬಹಳ ಮುಖ್ಯ ಘಟ್ಟ ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ ನಮ್ಮ ದೇಶದಲ್ಲೂ ಪರಿಗಣಿಸಿ, ಪಠ್ಯಕ್ರಮ ಹಾಗೂ ಕಲಿಕೆ ರೂಪಿಸಲಾಗುತ್ತದೆ.
ಪ್ರತಿ ವರ್ಷ ಪರೀಕ್ಷೆಗಳು ಇರುವುದಿಲ್ಲ:
ಪ್ರತಿ ವರ್ಷ ಪರೀಕ್ಷೆಗಳನ್ನು ನಡೆಸುವ ಬದಲಿಗೆ ಮೂರು, ಐದು ಹಾಗೂ ಎಂಟನೇ ತರಗತಿಯಲ್ಲಿ ಮಾತ್ರ ಪರೀಕ್ಷೆ ಇರುತ್ತದೆ. ಮಕ್ಕಳ ಬುದ್ಧಿಮತ್ತೆ, ಸಾಮರ್ಥ್ಯ, ವಿಶ್ಲೇಷಣಾ ಗುಣ, ಆಲೋಚನಾ ಸಾಮರ್ಥ್ಯ ಇತ್ಯಾದಿಗಳನ್ನು ಅಳೆಯಲಾಗುತ್ತದೆ.
ಮಾನವಸಂಪನ್ಮೂಲ ಸಚಿವಾಲಯ(HRD)ದ ಹೆಸರು ಬದಲಾಯಿಸಿದ ಕೇಂದ್ರ ಸರ್ಕಾರ
ಹತ್ತು ಮತ್ತು ಹನ್ನೆರಡನೇ ತರಗತಿಗೆ ಪರೀಕ್ಷಾ ಮಂಡಳಿಗಳಿಂದಲೇ ಪರೀಕ್ಷೆ ನಡೆಯುತ್ತದೆ. ಆದರೆ ಬೆಳವಣಿಗೆಯನ್ನು ಅಳೆಯುವ ಮಾನದಂಡವೇ ಬದಲಾಗುತ್ತದೆ. ಇದಕ್ಕಾಗಿ ಗುಣಮಟ್ಟವನ್ನು ರಾಷ್ಟ್ರೀಯ ಮಟ್ಟದಲ್ಲಿ ನಿಗದಿ ಮಾಡಲಾಗುತ್ತದೆ. ಅದಕ್ಕೆ PARAKH (ಪರ್ಫಾರ್ಮೆನ್ಸ್ ಅಸೆಸ್ ಮೆಂಟ್, ರೀವ್ಯೂವ್, ಅನಾಲಿಸಿಸ್ ಆಫ್ ನಾಲೆಡ್ಜ್ ಫಾರ್ ಹೋಲಿಸ್ಟಿಕ್ ಡೆವಲಪ್ ಮೆಂಟ್) ಎನ್ನಲಾಗಿದೆ.
ಬಹುಶಿಸ್ತೀಯ, ಬಹುಭಾಷೆ ಕಲಿಯುವಂತಾಗಬೇಕು ಮಕ್ಕಳು ಅನ್ನೋದು ಸರ್ಕಾರದ ಈ ನೀತಿಯ ಗುರಿ. ಕಲೆ ಮತ್ತು ವಿಜ್ಞಾನ ವಿಷಯಗಳು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು, ಕೌಶಲ ಹಾಗೂ ಶೈಕ್ಷಣಿಕ ವಿಷಯಗಳ ಮಧ್ಯೆ ತುಂಬ ಕಠಿಣವಾದ ವ್ಯತ್ಯಾಸ ಇರುವುದಿಲ್ಲ.
34 ವರ್ಷಗಳ ನಂತರ 21ನೇ ಶತಮಾನಕ್ಕಾಗಿ ಹೊಸ ಶಿಕ್ಷಣ ನೀತಿ
ಆದರೆ, ಕೆಲವು ಪ್ರಶ್ನೆಗಳಿವೆ:
ಈ ತನಕ ಸರ್ಕಾರ ತಿಳಿಸಿದ ನೀತಿ ಆಯಿತು. ಈ ಹಂತದಿಂದ ಕೆಲವು ಪ್ರಶ್ನೆಗಳಿಗೆ ಉತ್ತರ ಕೇಳಿಕೊಳ್ಳಬೇಕಿದೆ.
ದೇಶದಾದ್ಯಂತ ಏಕರೂಪ ಶಿಕ್ಷಣದ ಬಗ್ಗೆ ಏನಾದರೂ ಹೇಳಲಾಗಿದೆಯಾ? ಕಾಶ್ಮೀರದಿಂದ ಕನ್ಯಾಕುಮಾರಿ ತನಕದ ಎಲ್ಲ ಮಗು ಒಂದೇ ಗುಣಮಟ್ಟದ ಶಿಕ್ಷಣ ಪಡೆಯುತ್ತದೆಯೇ? ಸ್ಟೇಟ್ ಸಿಲಿಬಸ್, ಸಿಬಿಎಸ್ ಇ, ಐಸಿಎಸ್ ಇ, ಐಜಿಸಿಎಸ್ ಇ ಹೀಗೆ ಕೂದಲು ಸೀಳುತ್ತಾ ಮತ್ತೆ ಅದರಲ್ಲಿ ಗುಣಮಟ್ಟದ ಶಿಕ್ಷಣ ಬರುತ್ತದಾ?
ಈ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡುವ ಬಗ್ಗೆ, ಅದರಲ್ಲೂ ಆಡಳಿತ, ಹಣಕಾಸು ವಿಚಾರದಲ್ಲಿ ಸ್ವಂತ ತೀರ್ಮಾನ ತೆಗೆದುಕೊಳ್ಳುವ ಹಕ್ಕಿದೆ. ಇದರ ಅರ್ಥ ಏನು ಎಂಬುದು ಮುಂಬರುವ ದಿನಗಳಲ್ಲಿ ಹೆಚ್ಚು ಸ್ಪಷ್ಟವಾಗಬೇಕು. ಏಕೆಂದರೆ, ಶುಲ್ಕ ಮತ್ತೊಂದು ನಿಗದಿ ಮಾಡುವ ಹಕ್ಕು ಆಯಾ ಶಿಕ್ಷಣ ಸಂಸ್ಥೆಯದೇ ಆದ ಮೇಲೆ ಜನ ಸಾಮಾನ್ಯರ ಪಾಲಿಗೆ ಶಿಕ್ಷಣ ಕೈಗೆಟುಕುತ್ತದೆಯೇ?
ಮೂರನೇ ವರ್ಷದಿಂದ ಶಿಕ್ಷಣ ಆರಂಭಿಸುವುದಕ್ಕೆ ಸರ್ಕಾರದ ಶಾಲೆಗಳಲ್ಲಿ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬಹುದು? ಒಂದನೇ ತರಗತಿಯಿಂದ ಮಾತ್ರ ಸರ್ಕಾರಿ ಶಾಲೆಗಳಿದ್ದಲ್ಲಿ ಮಕ್ಕಳನ್ನು ಅಲ್ಲಿಗೆ ಕಳುಹಿಸುತ್ತಾರಾ ಪೋಷಕರು? ಮೂರನೇ ವಯಸ್ಸಿನಿಂದ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿದರೆ ಅವುಗಳನ್ನು ನಿಭಾಯಿಸುವಷ್ಟು ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಇದ್ದಾರಾ?
ಡೆಹ್ರಾಡೂನ್ ನಲ್ಲಿ ಇರುವ ಡೂನ್ ಸ್ಕೂಲ್, ಮುಂಬೈನಲ್ಲಿ ಇರುವ ಧೀರೂಭಾಯಿ ಇಂಟರ್ ನ್ಯಾಷನಲ್ ಸ್ಕೂಲ್, ಅಷ್ಟೇ ಏಕೆ ಬೆಂಗಳೂರಿನಲ್ಲೇ ಇರುವ ಅದೆಷ್ಟೋ ಇಂಟರ್ ನ್ಯಾಷನಲ್ ಸ್ಕೂಲ್ ಗಳ ಸಮಕ್ಕೆ ಬನಶಂಕರಿಯೋ, ಬಸವನಗುಡಿಯಲ್ಲೋ ಇರುವ ಮಧ್ಯಮ, ಕೆಳ ಮಧ್ಯಮ ಹಾಗೂ ಕೆಳ ವರ್ಗದ ಮಕ್ಕಳು ಸಹ ಕಲಿಯುವಂತಾಗಬಹುದಾ?