ರೈಲ್ವೇ ಅಧಿಕಾರಿಗಳ ಬೇಜವಾಬ್ದಾರಿಗೆ 23 ಜೀವಗಳು ಬಲಿ
ಲಕ್ನೋ, ಆಗಸ್ಟ್ 20: ಶನಿವಾರ ರಾತ್ರಿ ಮುಝಾಫರ್ ನಗರದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ 23 ಜನರು ಬಲಿಯಾಗಿದ್ದಾರೆ. ಈ ದುರಂತಕ್ಕೆ ಕಾರಣ ಏನು ಎಂಬುದು ಈಗ ತಿಳಿದು ಬಂದಿದೆ.
'ರೈಲ್ವೇ ಹಳಿಯ್ನನು ರಿಪೇರಿ ಮಾಡಲಾಗುತ್ತಿತ್ತು. ಆದರೆ ಈ ಬಗ್ಗೆ ರೈಲ್ವೇ ಚಾಲಕನಿಗೆ ಮಾಹಿತಿಯೇ ನೀಡಿರಲಿಲ್ಲ. ಒಂದೊಮ್ಮೆ ಮಾಹಿತಿ ನೀಡಿದ್ದರೆ ಈ ಅಪಘಾತ ಸಂಭವಿಸುವ ಯಾವ ಸಾಧ್ಯತೆಗಳೂ ಇರಲಿಲ್ಲ.
ಶನಿವಾರ ನಡೆದ ರೈಲ್ವೇ ದುರಂತದ ನಂತರ ನಡೆದ ಪ್ರಾಥಮಿಕ ತನಿಖೆಯಲ್ಲಿ ಈ ಅಂಶಗಳು ಬಯಲಾಗಿವೆ.
ರೈಲ್ವೇ ಅಧಿಕಾರಿಗಳು ಹೇಳುವ ಪ್ರಕಾರ, ಪುರಿ ಹರಿದ್ವಾರ ರೈಲು ಬರುವ ವೇಳೆಗೆ 15 ಮೀಟರ್ ರೈಲ್ವೇ ಟ್ರಾಕ್ ತೆಗೆದಿದ್ದರು. ಇದಕ್ಕೆ ಹೊಸ ಟ್ರಾಕ್ ಜೋಡಿಸಲು ರೈಲ್ವೇ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ನೋಡ ನೋಡುತ್ತಲೇ ರೈಲು ಬಂದುದನ್ನು ನೋಡಿ ರೈಲ್ವೇ ಕಾರ್ಮಿಕರು ಜೀವ ಭಯದಿಂದ ಓಡಿ ಹೋಗಿದ್ದರು.
ವಿಚಿತ್ರವೆಂದರೆ ಕೌಟಿಲ್ಯ ನಿಲ್ದಾಣದ ಸಿಬ್ಬಂದಿಗಳಿಗೆ ರಿಪೇರಿ ಕೆಲಸ ಇನ್ನೂ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿಯೇ ಇರಲಿಲ್ಲ. ಒಂದೊಮ್ಮೆ ಈ ಬಗ್ಗೆ ಸಂದೇಶ ನೀಡಿದ್ದರೆ ಈ ಅಪಘಾತವನ್ನು ತಡೆಯಬಹುದಿತ್ತು.
ಇದೀಗ ರಿಪೇರಿ ಬಗ್ಗೆ ಯಾಕೆ ಮಾಹಿತಿಯೇ ನೀಡಿರಲಿಲ್ಲ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೀರತ್ ಮತ್ತು ಮುಝಾಫರ್ ನಗರಗಳ ಮಧ್ಯೆ ಯಾಕೆ ಯಾವುದೇ ಸಂದೇಶ ನೀಡಲಿಲ್ಲ ಎಂಬ ಬಗ್ಗೆಯೂ ವಿಸ್ತೃತವಾದ ತನಿಖೆ ನಡೆಸಲಾಗುತ್ತಿದೆ.