Delhi MCD Election Results: ಪ್ರಧಾನಿ ಮೋದಿ ಆಶೀರ್ವಾದ ಕೋರಿದ ಕೇಜ್ರಿವಾಲ್
ನವದೆಹಲಿ, ಡಿಸೆಂಬರ್ 07: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್(MCD) ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು(AAP) ಭರ್ಜರಿ ಗೆಲುವು ಸಾಧಿಸಿದೆ.
ಈ ಸಂದರ್ಭದಲ್ಲಿ ಎಎಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದವನ್ನು ಕೋರಿದರು.
ರಾಷ್ಟ್ರ ರಾಜಧಾನಿಯಲ್ಲಿ ಎಎಪಿ ಕಾರ್ಯಕರ್ತರ ಸಂಭ್ರಮಾಚರಣೆ ಬಳಿಕ ಮಾತನಾಡಿದ ಕೇಜ್ರಿವಾಲ್, 'ನಾವು ಭ್ರಷ್ಟಾಚಾರವನ್ನು ಕೊನೆಗೊಳಿಸಬೇಕು. ದೆಹಲಿಯನ್ನು ಸ್ವಚ್ಛಗೊಳಿಸಬೇಕು. ನಮಗೆ ಮತ ನೀಡಿದವರಿಗೆ ನಾನು ಕೃತಜ್ಞನಾಗಿದ್ದೇನೆ. ನಮಗೆ ಮತ ಹಾಕದವರ ಸಮಸ್ಯೆಗಳನ್ನು ನಾವು ಮೊದಲು ಪರಿಹರಿಸುತ್ತೇವೆ' ಎಂದು ಅವರು ಭರವಸೆ ನೀಡಿದರು.

'ನಾನು ಕೇಂದ್ರಕ್ಕೆ ಮನವಿ ಮಾಡುತ್ತೇನೆ ಮತ್ತು ದೆಹಲಿಯನ್ನು ಸುಧಾರಿಸಲು ಪ್ರಧಾನಿ ಮೋದಿಯವರ ಆಶೀರ್ವಾದವನ್ನು ಕೇಳುತ್ತೇನೆ' ಎಂದು ಕೇಜ್ರಿವಾಲ್ ಹೇಳಿದರು.
ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 'ನೀವು ಇನ್ನು ಮುಂದೆ ಕೇವಲ ಪಕ್ಷದ ಸದಸ್ಯರಲ್ಲ. ನೀವು ವಾರ್ಡ್ ಮತ್ತು ಮಹಾನಗರ ಪಾಲಿಕೆಗೆ ಸೇರಿದವರು. ನಾವೀಗ ಒಟ್ಟಾಗಿ ಕೆಲಸ ಮಾಡಬೇಕು. ಆರೋಗ್ಯ ಮತ್ತು ಶಿಕ್ಷಣದಂತಹ ಸಮಸ್ಯೆಗಳು ಕೂಡ ನಿರ್ಣಾಯಕ ಎಂಬುದನ್ನು ದೆಹಲಿ ತೋರಿಸಿಕೊಟ್ಟಿದೆ' ಎಂದು ಕೇಜ್ರಿವಾಲ್ ಪ್ರತಿಪಾದಿಸಿದರು.
ಈ ವೇಳೆ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ರಾಜ್ಯಸಭೆ ಸದಸ್ಯ ರಾಘವ್ ಚಡ್ಡಾ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಕೇಜ್ರಿವಾಲ್, 'ಈ ಮಹಾ ವಿಜಯಕ್ಕಾಗಿ ದೆಹಲಿಯ ಜನತೆಗೆ ಧನ್ಯವಾದಗಳು ಮತ್ತು ಎಲ್ಲರಿಗೂ ಅಭಿನಂದನೆಗಳು. ಈಗ ನಾವೆಲ್ಲರೂ ಒಟ್ಟಾಗಿ ದೆಹಲಿಯನ್ನು ಸ್ವಚ್ಛ ಮತ್ತು ಸುಂದರವಾಗಿ ಮಾಡಬೇಕಾಗಿದೆ' ಎಂದು ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿನ 250 ವಾರ್ಡ್ಗಳ ಪೈಕಿ 134 ವಾರ್ಡ್ಗಳಲ್ಲಿ ಎಎಪಿ ಗೆಲುವು ಸಾಧಿಸಿದೆ. ಬಿಜೆಪಿಯು 104 ಸ್ಥಾನಗಳಲ್ಲಿ ಜಯ ಗಳಿಸಿದೆ. ಇದರಿಂದ ಬಿಜೆಪಿಯ ಸುಮಾರು 15 ವರ್ಷಗಳ ಸುದೀರ್ಘ ಆಡಳಿತ ಕೊನೆಗೊಂಡಂತಾಗಿದೆ.












Click it and Unblock the Notifications