ವಾದ್ರಾ ಸುತ್ತ ಇದ್ದ ರಕ್ಷಣಾ ಕವಚ ಕಳಚಿದ ಕೇಂದ್ರ ಸರ್ಕಾರ
ನವದೆಹಲಿ, ಸೆಪ್ಟೆಂಬರ್. 16: ಅಂತೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹೆಸರನ್ನುವಿವಿಐಪಿ ಪಟ್ಟಿಯಿಂದ ಕೇಂದ್ರ ಸರ್ಕಾರ ಬುಧವಾರ ತೆಗೆದು ಹಾಕಿದೆ.
ಇನ್ನು ಮುಂದೆ ವಾದ್ರಾ ವಿಮಾನ ನಿಲ್ದಾಣಗಳಲ್ಲಿ ಸಾಮಾನ್ಯ ನಾಗರಿಕರಂತೆ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಈ ನಿರ್ಧಾರವನ್ನು ಸ್ವಾಗತಿಸಿರುವ ವಾದ್ರಾ , ಸಣ್ಣ ವಿಷಯ ಇಲ್ಲಿಗೆ ಮುಗಿದಂತೆ ಆಗಿದೆ ಎಂದು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಯುಪಿಎ ಸರ್ಕಾರವಿದ್ದಾಗಲೇ ವಾದ್ರಾಗೆ ಯಾಕೆ ವಿವಿಐಪಿ ಪಟ್ಟ? ಎಂಬ ಕೂಗು ಎದ್ದಿತ್ತು. ಇದೀಗ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಇಂತದ್ದೊಂದು ಕ್ರಮ ತೆಗೆದುಕೊಂಡಿದೆ. ವಾದ್ರಾ ಅವರನ್ನು ಪಟ್ಟಿಯಿಂದ ಕೈ ಬಿಟ್ಟಿರುವ ಬಗ್ಗೆ ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲೂ ವಿಭಿನ್ನ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.[ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಹಿನ್ನೆಲೆ ಇದು]
ರಾಬರ್ಟ್ ವಾದ್ರಾ ಬಿಗ್ ಬಾಸ್ ಸಿಸನ್ ಗೆ ಯಾಕೆ ಬರಬಾರದು, ಬಿಜೆಪಿ ಸರ್ಕಾರದ ಉದಾರ ನೀತಿಯನ್ನು ಮೆಚ್ಚಿಕೊಳ್ಳಲೇಬೇಕು. ಅಬ್ಬಾ.. ಭಾರತದಲ್ಲಿ ಬದಲಾವಣೆ ಆರಂಭವಾಯಿತು. ಷೇರು ಮಾರುಕಟ್ಟೆ ಕುಸಿಯಲು ವಾದ್ರಾ ಕಾರಣ ಎಂದು ಇನ್ನು ಮುಂದೆ ಹೇಳುವ ಹಾಗಿಲ್ಲ.. ಈ ರೀತಿಯ ನೂರಾರು ಕಮೆಂಟ್ ಗಳು ಟ್ವಿಟ್ಟಿಗರಿಂದ ವ್ಯಕ್ತವಾಗಿದೆ.
ಲಲಿತ್ ಮೋದಿ ಹಗರಣ
ವಾದ್ರಾ ಹೆಸರು ಲಲಿತ್ ಮೋದಿ ಹಗರಣದಲ್ಲೂ ಕೇಳಿ ಬಂದಿತ್ತು. ಲಂಡನ್ ನಲ್ಲಿದ್ದ ಲಲಿತ್ ಮೋದಿ ಅವರೊಂದಿಗೆ ವಾದ್ರಾ ಕಾಣಿಸಿಕೊಂಡ ಫೋಟೋಗಳು ಜಾಲತಾಣದಲ್ಲಿ ಹರಿದಾಡಿದ್ದವು.
ಯೋಚನೆಯಿಲ್ಲ ಎಂದಿದ್ದ ಕೇಂದ್ರ
ವಾದ್ರಾ ಅವರ ತಪಾಸಣೆ ವಿನಾಯಿತಿಯನ್ನು ತೆಗೆದು ಹಾಕುವ ಬಗ್ಗೆ ಯಾವುದೇ ಯೋಚನೆಯಿಲ್ಲ ಎಂದು ಕೇಂದ್ರ ಸರ್ಕಾರ ಸೆಪ್ಟೆಂಬರ್ 10ರಂದು ಹೇಳಿತ್ತು. ಆದರೆ ಇದೀಗ ದಿಢೀರ್ ಎಂದು ಆದೇಶ ಹೊರಡಿಸಿದೆ.
ವಾದ್ರಾ ಫೇಸ್ ಬುಕ್ ಸ್ಟೇಟಸ್
ಕೇಂದ್ರ ಸರ್ಕಾರ ಇನ್ನು ಕೆಲವೇ ದಿನದಲ್ಲಿ ಎಲ್ಲ ವಿಮಾನ ನಿಲ್ದಾಣಗಳಲ್ಲಿ ನನ್ನ ಹೆಸರಿನ ಮೇಲೆ ಬಿಳಿಯ ಪಟ್ಟಿ ಅಂಟಿಸಲಿದೆ ಎಂದು ವಾದ್ರಾ ಎರಡು ದಿನಗಳ ಹಿಂದ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು.
ಡಿಎಲ್ ಎಫ್
ರಿಯಲ್ ಎಸ್ಟೇಟ್ ಉದ್ಯಮ ಸಂಸ್ಥೆ ಡಿಎಲ್ ಎಫ್ ನಲ್ಲಿ ಅಪಾರ ಪ್ರಮಾಣದ ಷೇರು ಹೊಂದಿದ್ದ ವಾದ್ರಾ ಮೇಲೆ ಕಾನೂನು ಕುಣಿಕೆ ಸುತ್ತಿಕೊಂಡಿತ್ತು. ಕಡಿಮೆ ಬೆಲೆಗೆ ಭೂಮಿ ಪಡೆದುಕೊಂಡ ದೂರುಗಳು ಕೇಳಿಬಂದಿದ್ದವು.
|
ಬಿಗ್ ಬಾಸ್ ಗೆ ಯಾಕಿಲ್ಲ
ರಾಬರ್ಟ್ ವಾದ್ರಾ ಬಿಗ್ ಬಾಸ್ ಗೆ ಬರಲು ಇದು ಸಕಾಲ, ಇನ್ನು ಯಾಕೆ ಆ ಬಗ್ಗೆ ಯೋಚನೆ ಮಾಡಿಲ್ಲ ಎಂದು ಟ್ವಿಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ.