ಅವಿಶ್ವಾಸ ಗೊತ್ತುವಳಿಯನ್ನು ಎದುರಿಸಲು ಎನ್ಡಿಎ ಸನ್ನದ್ದ: ಅನಂತಕುಮಾರ್
ನವದೆಹಲಿ ಜುಲೈ 19: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ, ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿಯನ್ನು ಸಮರ್ಥವಾಗಿ ಎದುರಿಸಲಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಹೇಳಿದ್ದಾರೆ.
ಮುಂಗಾರು ಅಧಿವೇಶನದ ಮೊದಲ ದಿನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಎನ್ ಡಿ ಎ ಪಕ್ಷಗಳು ಒಗ್ಗಟ್ಟಾಗಿದ್ದು, ನಾವೆಲ್ಲರೂ ಅವಿಶ್ವಾಸ ಗೊತ್ತುವಳಿಯನ್ನು ಎದುರಿಸಲು ಸಜ್ಜಾಗಿದ್ದೇವೆ, ಅಲ್ಲದೆ, ಎನ್ ಡಿ ಎ ಹೊರತುಪಡಿಸಿ ಇನ್ನುಳಿದ ಪಕ್ಷಗಳ ಬೆಂಬಲವನ್ನೂ ಪಡೆಯಲಿದ್ದೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಸಂಸತ್ತಿನ ಉಭಯ ಸದನಗಳ ಸಂಖ್ಯಾಬಲ ಎಷ್ಟಿದೆ?
ಬಜೆಟ್ ಅಧಿವೇಶನದ ವೇಳೆ ಅವಿಶ್ವಾಸ ಗೊತ್ತುವಳಿಯನ್ನು ಏಕೆ ಸ್ವೀಕರಿಸಿರಲಿಲ್ಲಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅವಿಶ್ವಾಸ ಗೊತ್ತುವಳಿಯನ್ನು ಸ್ವೀಕರಿಸುವ ಮೊದಲ ಮಾನದಂಡ ಸದನ ಸಮರ್ಪಕವಾಗಿ ನಡೆಯುವುದು.

ಆದರೆ ಕಳೆದ ಅಧಿವೇಶನದಲ್ಲಿ ಪ್ರತಿಪಕ್ಷಗಳು ಸದನ ಸರಿಯಾಗಿ ನಡೆಯಲು ಬಿಡಲಿಲ್ಲಾ. ಈ ಹಿನ್ನಲೆಯಲ್ಲಿ ಕಳೆದ ಬಾರಿಯ ಅಧಿವೇಶನದಲ್ಲಿ ಈ ಗೊತ್ತುವಳಿಯನ್ನು ಸಭಾಪತಿಗಳು ಸ್ವೀಕರಿಸಿರಲಿಲ್ಲ. ಬಿಜೆಪಿ ನೇತೃತ್ವದ ಎನ್ ಡಿ ಎ ಕಳೆದ ಬಾರಿಯೂ ಈ ಪರೀಕ್ಷೆಗೆ ಸಿದ್ದವಾಗಿತ್ತು, ಈ ಬಾರಿಯೂ ಈ ಗೊತ್ತುವಳಿಯನ್ನು ಸಮರ್ಥವಾಗಿ ಎದುರಿಸಲಿದೆ ಎಂದು ಉತ್ತರಿಸಿದರು.
ಅತಿಹೆಚ್ಚು ಮತಗಳಿಂದ ಈ ಅವಿಶ್ವಾಸ ಗೊತ್ತುವಳಿಯನ್ನು ಸೋಲಿಸುವ ಮೂಲಕ ಪ್ರತಿಪಕ್ಷಗಳಿಗೆ ಸರಿಯಾದ ಉತ್ತರ ನೀಡಲಿದ್ದೇವೆ ಎಂದರು.
ರಾಜ್ಯಸಭೆಯ ಉಪಸಭಾಪತಿ ಸ್ಥಾನದ ಚುನಾವಣೆಯ ದಿನಾಂಕ ಹಾಗೂ ಸಮಯವನ್ನು ನಿರ್ಧರಿಸುವುದು ರಾಜ್ಯಸಭೆಯ ಸಭಾಪತಿ ಅವರ ನಿರ್ಧಾರಕ್ಕೆ ಬಿಟ್ಟಿದ್ದು, ಅವರು ಸರಿಯಾದ ಸಮಯದಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಿದ್ದಾರೆ ಎಂದರು.












Click it and Unblock the Notifications