ಸಿಕ್ಸರ್ ಸಿಧು ಚುನಾವಣೆ ಫೀಲ್ಡ್ ನಿಂದ ಹೊರಕ್ಕೆ!
ನವದೆಹಲಿ, ಮಾ.16 : ಮಾಜಿ ಕ್ರಿಕೆಟರ್ ಬಿಜೆಪಿ ಮುಖಂಡ ನಜ್ಯೋತ್ ಸಿಂಗ್ ಸಿಧು ಅವರು ಅಮೃತಸರ್ ಸೀಟು ಕಳೆದುಕೊಳ್ಳುವ ಭೀತಿಯೊಂದಿಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಬಾರಿ ಚುನಾವಣೆ ಫೀಲ್ಡ್ ಗೆ ಇಳಿಯುವುದೇ ಇಲ್ಲ ಎಂದು ಮೂರು ಬಾರಿಗೆ ಸಂಸದರಾಗಿರುವ ಸಿಧು ಘೋಷಿಸಿದ್ದಾರೆ. ಇದೆಲ್ಲವೂ ಪಕ್ಷದ ಹಿತಕ್ಕಾಗಿ, ರಾಜಕೀಯ ಗುರು ಅರುಣ್ ಜೇಟ್ಲಿಗಾಗಿ ಎಂದು ಸಿಧು ಹೇಳಿದ್ದಾರೆ.
ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದ ಸಿಧು ಅವರು ಪಂಜಾಬಿನ ಯಾವುದೇ ಕ್ಷೇತ್ರದಿಂದ ನಾನು ಸ್ಪರ್ಧಿಸಲು ಸಿದ್ದವಿಲ್ಲ ಎಂದಿದ್ದಾರೆ. ಇದಕ್ಕೆ ಒಪ್ಪಿದ ಬಿಜೆಪಿ ಹೈ ಕಮಾಂಡ್ ಸಿಧು ಅವರ ಮುಂದೆ ದೆಹಲಿ, ಚಂಡೀಗಢ ಅಥವಾ ಕುರುಕ್ಷೇತ್ರದಿಂದ ಸ್ಪರ್ಧಿಸುವಂತೆ ಆಫರ್ ನೀಡಿದೆ. ಅಮೃತಸರ್ ಕ್ಷೇತ್ರದಿಂದ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರನ್ನು ಬಿಜೆಪಿ ಕಣಕ್ಕಿಳಿಸುತ್ತಿದೆ. ಗುರು ಜೇಟ್ಲಿ ಅವರಿಗಾಗಿ ನಾನು ಕ್ಷೇತ್ರ್ತ ಬಿಟ್ಟುಕೊಡಲು ಸಿದ್ಧ ಎಂದು ಸಿಧು ಹೇಳಿದ್ದಾರೆ.

ಅಮೃತಸರ್ ನನ್ನ ಕರ್ಮಭೂಮಿ. ನನ್ನ ಗುರು ಅರುಣ್ ಜೇಟ್ಲಿ ಹಾಗೂ ಬಿಜೆಪಿ ಜತೆಗಿನ ನನ್ನ ಸಂಬಂಧ ಪವಿತ್ರವಾಗಿದೆ. ಆತ ನನ್ನ ಗುರು. ಪವಿತ್ರ ಬಂಧನದಲ್ಲಿ ತ್ಯಾಗಕ್ಕೆ ಮಹತ್ವದ ಸ್ಥಾನವಿದೆ. ನಾನು ನನ್ನ ಕ್ಷೇತ್ರ ಬಿಟ್ಟುಕೊಡುತ್ತೇನೆ. ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಬೇರೆ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವ ಮನಸ್ಸಿಲ್ಲ ಎಂದು ಸಿಧು ತಿಳಿಸಿದ್ದಾರೆ.
ಸಿಧು ರಾಜಕೀಯ ಭವಿಷ್ಯ: ಹಾಲಿ ಸಂಸದ, ಮಾಜಿ ಕ್ರಿಕೆಟರ್ ನವಜ್ಯೋತ್ ಸಿಂಗ್ ಸಿಧು ಅವರ ಪತ್ನಿ ಕೌರ್ ಈ ಹಿಂದೆ ಫೇಸ್ ಬುಕ್ ನಲ್ಲಿ ತೋಡಿಕೊಂಡ ದುಃಖ ಈಗ ಸಿಧು ರಾಜಕೀಯ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿತೆ ಎಂಬ ಪ್ರಶ್ನೆ ಮತ್ತೆ ಎದ್ದಿದೆ. ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಸಿಧು ಅವರಿಗೆ ಮುಂದಿನ ಬಾರಿ ಬಿಜೆಪಿ ಟಿಕೆಟ್ ಸಿಗುವುದು ಕಷ್ಟ ಎನಿಸಿತ್ತು. 2014ರ ಚುನಾವಣೆಗೆ ಬಿಜೆಪಿಯ ಸಂಸದೀಯ ಮಂಡಳಿಯಲ್ಲಿ ನವಜ್ಯೋತ್ ಸಿಂಗ್ ಸಿಧು ಅವರಿಗೆ ಅವಕಾಶ ನೀಡಿಲ್ಲ. ಭ್ರಷ್ಟಾಚಾರಿಗಳಿಗೆ ಬೆಂಬಲ ನೀಡುವಂತೆ ಸಿಧುಗೆ ಒತ್ತಡ ಹೇರಲಾಗುತ್ತಿದೆ ಎಂದು ಕೌರ್ ಆರೋಪಿಸಿದ್ದರು.(ಪಿಟಿಐ)












Click it and Unblock the Notifications