ನಾಸಿಕ್ ಕುಂಭಮೇಳಕ್ಕೆ ರಾಧೇ ಮಾಗೆ ಪ್ರವೇಶ ನಿಷೇಧ!
ಮುಂಬೈ, ಆಗಸ್ಟ್ 05: ಅಸಾರಾಮ್ ಬಾಪು ಸೇರಿದಂತೆ ಹಲವಾರು ಸ್ವಯಂ ಘೋಷಿತ ಬಾಬಾಗಳನ್ನು ಧಾರ್ಮಿಕ ಮೇಳಗಳಿಂದ ನಿಷೇಧಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಈ ಸಾಲಿಗೆ ಮತ್ತಿಬ್ಬರು ಸೇರ್ಪಡೆಯಾಗಿದ್ದಾರೆ.
ಭಾರತದಲ್ಲಿ ದೇವಮಾನವ ಸಂಖ್ಯೆಗೇನು ಕಡಿಮೆಯಿಲ್ಲ, ಇತ್ತೀಚೆಗೆ ದೇವಮಹಿಳೆಯರ ಸಂಖ್ಯೆಯೂ ಹೆಚ್ಚುತ್ತಿದೆ. ಭಕ್ತರ ಇಷ್ಟಾರ್ಥಗಳನ್ನು ದೇವರಿಗೆ ನೇರವಾಗಿ ತಲುಪಿಸುವ ಏಜೆಂಟ್ ಗಳಿಗೆ ಕಡಿವಾಣ ಹಾಕಿದರೂ ಋತು ಬದಲಾದಂತೆ ನಾಯಿಕೊಡೆಗಳಂತೆ ಮೇಲೇಳುತ್ತಿರುತ್ತಾರೆ. ಇಂಥವರಿಂದ ಪ್ರಾಮಾಣಿಕ ಸಂತ, ಸನ್ಯಾಸಿಗಳ ಮಾನವೂ ಹಾನಿಯಾಗುತ್ತಿರುವುದು ಸುಳ್ಳಲ್ಲ. ಇಷ್ಟೆಲ್ಲ ಪೀಠಿಕೆ ಹೇಳಲು ಕಾರಣ ರಾಧೇ ಮಾ. [ಚಿತ್ರಗಳಲ್ಲಿ: ಅಸಾರಮ್ ಬಾಪು 10 ವಿವಾದಗಳು]
ಸ್ವಯಂಘೋಷಿತ ದೇವ ಮಾನವರ ಸಾಲಿಗೆ ಸೇರ್ಪಡೆಗೊಂಡಿರುವ ರಾಧೇ ಮಾ ಹಾಗೂ ಬಿಲ್ಡರ್ ಬಾಬಾಗೆ ನಾಸಿಕ್ ಕುಂಭಮೇಳದಿಂದ ನಿಷೇಧ ಹೇರಲಾಗಿದೆ. ರಾಧೇ ಮಾ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ಬುಕ್ ಆಗಿದೆ. ಬಿಲ್ಡರ್ ಬಾಬಾ ಸಚ್ಚಿದಾನಂದ್ ಗಿರಿ ಅವರು ಮದ್ಯಮಾರಾಟ ಹಗರಣ ಹಾಗೂ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ ಆರೋಪ ಹೊತ್ತಿದ್ದಾರೆ.

ದೆಹಲಿ ಎನ್ ಸಿಆರ್ ಪ್ರದೇಶದಲ್ಲಿ ಬಿಯರ್ ಬಾರ್ ಹೊಂದಿದ್ದ ಸಚಿನ್ ದತ್ತಾ ಈಗ ಸಚ್ಚಿದಾನಂದ ಗಿರಿ ಎನಿಸಿಕೊಂಡಿದ್ದಾರೆ. ಪಂಜಾಬ್ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅವರ ವಿರುದ್ಧ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾಗಿದೆ.
ಇನ್ನೊಂದೆಡೆ ರಾಧೇ ಮಾ ಅವರು ವರದಕ್ಷಿಣೆಗಾಗಿ ಸೊಸೆಯೊಬ್ಬರಿಗೆ ಕಿರುಕುಳ ನೀಡುತ್ತಿರುವ ಅತ್ತೆಗೆ ಸಹಾಯ ಮಾಡಿದ ಆರೋಪ ಹೊತ್ತಿದ್ದಾರೆ. ಇದಲ್ಲದೆ ಸತ್ಸಂಗದ ವೇಳೆ ಬಾಲಿವುಡ್ ಹಾಡುಗಳಿಗೆ ಅಶ್ಲೀಲವಾಗಿ ನೃತ್ಯ ಮಾಡಿದ ಅಪಕೀರ್ತಿಯೂ ರಾಧೇ ಮಾ ಮೇಲಿದೆ. [ವಿವಾದದಲ್ಲೇ ಮುಳುಗೆದ್ದ ಟಾಪ್ 10 'ದೇವಮಾನವರು']
ಇಷ್ಟೆಲ್ಲ ಆರೋಪವಿರುವ ಕಾರಣ ರಾಧೇ ಮಾ ಹಾಗೂ ಸಚ್ಚಿದಾನಂದ ಗಿರಿ ಅವರ ಮೇಲೆ ನಿಷೇಧ ಹೇರಲಾಗಿದೆ ಎಂದು ಅಖಿಲ ಭಾರತೀಯ ಅಖಾರ ಪರಿಷತ್ ಹೇಳಿದೆ.
ನಾಸಿಕ್ ತ್ರಯಂಬಕೇಶ್ವರ್ ನಲ್ಲಿ ಕುಂಭಮೇಳ ಮಾಘ ಮಾಸದಲ್ಲಿ ನಡೆಯಲಿದೆ. ಹರಿದ್ವಾರ, ಅಲಹಾಬಾದಿನ ಪ್ರಯಾಗ ಹಾಗೂ ಉಜ್ಜಯಿನಿಗಳಲ್ಲೂ ಕುಂಭಮೇಳ ಆಯೋಜನೆಗೊಂಡಿದೆ.












Click it and Unblock the Notifications