ವಿವಾದದಲ್ಲೇ ಮುಳುಗೆದ್ದ ಟಾಪ್ 10 'ದೇವಮಾನವರು'
ಬೆಂಗಳೂರು, ನ. 21 : ಜನರಿಗೆ ಮಂಕು ಬೂದಿ ಎರಚುತ್ತ, ನಮ್ಮ ಬಳಿ ದೈವೀ ಶಕ್ತಿ ಇದೆ ಎಂದು ನಂಬಿಸಿ ಹಣ ಮತ್ತು ಪ್ರಸಿದ್ಧಿ ಗಳಿಸಿದ ಅನೇಕ ಸ್ವಯಂ ಘೋಷಿತ ದೇವಮಾನವರು, ಸ್ವಾಮೀಜಿಗಳು ಜೈಲು ಕಂಬಿ ಎಣಿಸಿದ್ದಾರೆ ಮತ್ತು ಎಣಿಸುತ್ತಿದ್ದಾರೆ.
ದೇಶದಲ್ಲಿ ಪ್ರತಿನಿತ್ಯ ಹುಟ್ಟಿಕೊಳ್ಳುತ್ತಿರುವ ಸ್ವಾಮೀಜಿಗಳಿಗೇನೂ ಕಡಿಮೆಯಿಲ್ಲ. ಕಾವಿಯೊಳಗಿನ ಖದೀಮರ ಕರಾಳ ಮುಖ ಜನರ ಮುಂದೆ ಬಂದಿದ್ದು ಕೆಲವೊಮ್ಮೆ ತಡವಾದರೂ ಕೆಲವರು ಶಿಕ್ಷೆಗೆ ಗುರಿಯಾದ ಉದಾಹರಣೆಗೂ ಇವೆ. ವಿವಾದಗಳಲ್ಲೇ ಬೆಳೆದ ಹತ್ತು 'ಸ್ವಾಮೀಜಿ' ಗಳ 'ಮಹತ್ ಸಾಧನೆ'ಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

1. ನಿತ್ಯಾನಂದ ಸ್ವಾಮಿ
ಬಿಡದಿಯ ಸ್ವಾಮಿ ತನ್ನ ಲೀಲೆಗಳಿಂದ ಕರ್ನಾಟಕ ಮತ್ತು ತಮಿಳು ನಾಡಲ್ಲಿ ತುಂಬಾ ಪ್ರಸಿದ್ಧಿ. ಸಿನಿಮಾ ನಟಿಯೊಂದಿಗಿನ ರಾಸಲೀಲೆ ಪ್ರಕರಣ ಬಯಲಿಗೆ ಬಂದಾಗಿನಿಂದ ಸುದ್ದಿ ಮಾಧ್ಯಮಗಳಿಗೇ ಈತನೇ ಆಹಾರ.
ಅತ್ಯಾಚಾರ, ಶ್ರೀಗಂಧ ಸಂಗ್ರಹ, ಮಾಧ್ಯಮದವರ ಮೇಲೆ ಹಲ್ಲೆ ಈತನ ಮೇಲಿರುವ ಪ್ರಕರಣ. ಕುಂಡಲಿನಿ ಯೋಗದ ಮೂಲಕ ಅನೇಕರಿಗೆ 'ಬೇರೆ ಲೋಕ; ತೋರಿಸಿದ್ದು ನಿತ್ಯಾನಂದನ ಖ್ಯಾತಿ. ತಾನು ಪುರುಷನೇ ಅಲ್ಲ ಎಂದು ಹೇಳಿದ್ದು, ಪುರುಷತ್ವ ಪರೀಕ್ಷೆಗೆ ಸಹಕರಿಸದೇ ಸತಾಯಿಸಿದ್ದು, ಕನ್ನಡಿಗರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದು ನಿತ್ಯಾನಂದನ ವಿವಾದದ ಕೆಲ ಹೈಲೈಟ್ಸ್.[ನಿತ್ಯಾನಂದನ ಸುತ್ತಿದ ಪ್ರಕರಣದ ಸಿಂಹಾವಲೋಕನ]
2. ಅಸಾರಾಮ್ ಬಾಪು
ಗುಜರಾತ್ ಅಹಮದಾಬಾದ್ ನಲ್ಲಿ ತನ್ನನೇ ತಾನು ಸ್ವಯಂ ಘೋಷಿತ ದೇವಮಾನವ ಎಂದು ಕರೆದುಕೊಂಡವ ಅಸಾರಾಮ್ ಬಾಪು. ಭಕ್ತಿ ಯೋಗ, ಜ್ಞಾನ ಯೋಗ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಪಡೆದುಕೊಂಡ ಸ್ವಾಮೀಜಿ.[ಚಿತ್ರಗಳಲ್ಲಿ: ಅಸಾರಮ್ ಬಾಪು 10 ವಿವಾದಗಳು]
ವಾಮಾಚಾರ ಮಾಡಲು ಮಕ್ಕಳ ಕೊಲೆ ಮಾಡಿದ್ದು, ಭೂ ಕಬಳಿಕೆ, ಕೊಲೆ ಯತ್ನ, ದೆಹಲಿ ಅತ್ಯಾಚಾರ, ಮಾಧ್ಯಮ ಮತ್ತು ಮೋದಿ ಮೇಲೆ ಅವಹೇಳನಾಕಾರಿ ಹೇಳಿಕೆ ನೀಡಿದ ವಿವಾದಗಳು ಬಾಪುಗೆ ಸುತ್ತಿಕೊಂಡಿದ್ದವು.

3. ಬಾಬಾ ರಾಮ್ ಪಾಲ್
ಜಾಮೀನು ರಹಿತ ವಾರೆಂಟ್ ಇದ್ದರೂ ಆರಾಮವಾಗಿ ಓಡಾಡಿಕೊಂಡಿದ್ದ ಸ್ವಯಂ ಘೋಷಿತ ದೇವಮಾನವ ಹರ್ಯಾಣದ ಬಾಬಾ ರಾಮ್ ಪಾಲ್ ಬಂಧನವಾಗಿದ್ದು ಲೆಟೆಸ್ಟ್ ನ್ಯೂಸ್.
ಕಬೀರ ದಾಸರ ದೋಹೆಗಳ ಮೂಲಕ ಜನರಿಗೆ ಸಲ್ಲದ ಸಲಹೆ ನೀಡುತ್ತಿದ್ದ ರಾಮ್ ಪಾಲ್ ಬಂಧನವೇ ದೊಡ್ಡ ವಿವಾದವಾಗಿ ಮಾರ್ಪಟ್ಟಿತ್ತು. ಹಾಲಿನ ಅಭಿಷೇಕ, ಐಷಾರಾಮಿ ಕಾರುಗಳಲ್ಲಿ ಯಾನ ಇವೆಲ್ಲ ಬಾಬಾ ದಿನಚರಿ.[ಹಾಲಿನ ಅಭಿಷೇಕ; ಅದೇ ಭಕ್ತರಿಗೆ ಪ್ರಸಾದ!]

4. ಇಚ್ಛಾದಾರಿ ಸಂತ
ಚಿತ್ರಕೂಟದ ಸ್ವಾಮಿ ಭೀಮಾನಂದ ಜೈ ಮಹಾರಾಜ್ ತನ್ನನ್ನು ತಾನು ಶ್ರೀ ಸಾಯಿಬಾಬಾ ಅಪರಾವತಾರ ಎಂದು ಹೇಳಿಕೊಂಡು ತಿರುಗಾಡಿದವ. 1988 ರಲ್ಲಿ ನವದೆಹಲಿಗೆ ಬಂದ ಭೀಮಾನಂದ ಮೊದಲಿಗೆ ಸೆಕ್ಯೂರಿಟಿ ಗಾರ್ಡ್ ಆಗಿ ನಂತರ ಮಸಾಜ್ ಪಾರ್ಲರ್ ವೊಂದರಲ್ಲಿ ಕೆಲಸ ಮಾಡಿದ ದಾಖಲೆಗಳಿವೆ.
ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಜೈಲು ಸೇರಿದ ಸ್ವಾಮೀಜಿ ಬಿಡುಗಡೆಗೊಂಡ ನಂತರ ಚಿತ್ರಕೂಟದಲ್ಲಿ 200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದಾನೆ.
5. ಚಂದ್ರಸ್ವಾಮಿ
ಬಿಹಾರದ ಕಾಡಿನಲ್ಲಿ ವಾಸವಿದ್ದು ದೈವಿಶಕ್ತಿ ತನಗೆ ಸಿದ್ಧಿಸಿದೆ ಎಂದು ಜನರಿಗೆ ನಂಬಿಸಿ ಅಪಾರ ಹಣ ಗಳಿಸಿದವ ಚಂದ್ರಸ್ವಾಮಿ ಅಲಿಯಾಸ್ ನೇಮಿ ಚಂದ್ ಜೈನ್. ಮಹಾ ಕಾಳಿ ಉಪಾಸಕನೆಂದು ಹೇಳಿಕೊಂಡು ವಿದೇಶ ಪ್ರವಾಸ ಮಾಡಿದ್ದ ಈತನ ಬಿಲ್ ಸುಮಾರು 1.5 ಕೋಟಿ ರೂ. ಆಗಿತ್ತು!
ರಾಜೀವ್ ಗಾಂಧಿ ಹತ್ಯೆಯಲ್ಲೂ ಚಂದ್ರಸ್ವಾಮಿ ಕೈವಾಡವಿದೆ ಎಂದ ಸಿಬಿಐ ಆರೋಪ ಪಟ್ಟಿ ದಾಖಲಿಸಿತ್ತು. ತನಗೆ ಅತಿಮಾನುಷ ಶಕ್ತಿಯಿದೆ ಎಂದು ಹೇಳಿಕೊಳ್ಳುವ ಈತನ ಮೇಲೆ ಅನೇಕ ಚೀಟಿಂಗ್ ಪ್ರಕರಣಗಳು ದಾಖಲಾಗಿದ್ದವು.
6. ಗುರುಮೀತ್ ರಾಮ್ ರಹೀಮ್
ಅತ್ಯಾಚಾರ ಪ್ರಕರಣ ಆರೋಪದಲ್ಲಿ ಸಿಬಿಐ ತನಿಖೆ ಎದುರಿಸಿದ ಹರ್ಯಾಣದ ಸ್ವಾಮೀಜಿ. 'ದೇರಾ ಸಚ್ಛಾ ಸೌದಾ' ಸಂಘಟನೆಯ ಮುಖ್ಯಸ್ಥನಾಗಿದ್ದ ಸ್ವಾಮಿ ಮೇಲೆ ಕೊಲೆ ಆರೋಪವೂ ಇದೆ. ತನ್ನ ಸಂಸ್ಥೆಯ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದು, ಮ್ಯಾನೇಜರ್ ಒಬ್ಬನನ್ನು ಕೊಲೆ ಮಾಡಿಸಿದ್ದು ಕಾವಿಯೊಳಗಿನ 'ಸಂತ'ನ ಪರಾಕ್ರಮ.
7. ಸ್ವಾಮಿ ಸದಾಚಾರಾರಿ
ಮಾಜಿ ಪ್ರಧಾನಿ ಇಂದಿರಾಗಾಂಧಿಗೆ ಜ್ಯೋತಿಷ್ಯ ಹೇಳಿದ್ದ ಸ್ವಾಮಿ ಸದಾಚಾರಿ ಮೇಲೆ ಅನೇಕ ವಂಚನೆ ಪ್ರಕರಣ ದಾಖಲಾಗಿದ್ದವು. ಅಧಿಕಾರದಲ್ಲಿದ್ದವರಿಂದ ಸಮಾಜ ಘಾತುಕ ಕೆಲಸಕ್ಕೆ ನೆರವು ಪಡೆದುಕೊಳ್ಳಲು ಯತ್ನಿಸಿದ್ದ ಆರೋಪವೂ ಈತನ ಮೇಲಿತ್ತು.
8. ಸ್ವಾಮಿ ಪ್ರೇಮಾನಂದ
ಸತ್ಯ ಸಾಯಿ ಬಾಬಾರ ಅಪರಾವತಾರ ಎಂದು ನಂಬಿಸಿದ್ದ ಸ್ವಾಮಿ ಮೇಲೆ 13 ಜನರ ಮೇಲೆ ಅತ್ಯಾಚಾರ, ಶ್ರೀಲಂಕಾ ಪ್ರಜೆ ಕೊಲೆ ಸೇರಿದಂತೆ ಅನೇಕ ಆರೋಪಗಳು ದಾಖಲಾಗಿದ್ದವು. ಪ್ರಕರಣದ ವಿಚಾರಣೆ ಮತ್ತು ವೈದ್ಯಕೀಯ ಪರೀಕ್ಷೆಗಳ ನಂತರ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 2011 ರಲ್ಲಿ ತಮಿಳುನಾಡಿನ ಜೈಲಲ್ಲೇ ಸಾವನ್ನಪ್ಪಿದ.
9. ಸ್ವಾಮಿ ಶ್ರದ್ಧಾನಂದ
ಹೆಂಡತಿನ್ನು ಬೆಂಕಿ ಹಚ್ಚಿ ಸುಟ್ಟಿದ ಸ್ವಾಮಿ ಶ್ರದ್ಧಾನಂದನಿಗೆ ಸುಪ್ರೀಂ ಕೋರ್ಟ್ ಜೀವಾವಧಿ ವಿಧಿಸಿತ್ತು. ಬೆಂಗಳೂರಲ್ಲಿ ವಾಸವಿದ್ದ ಸ್ವಾಮಿ 2008ರಲ್ಲಿ ಹೆಂಡತಿಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದ.
10. ಸ್ವಾಮಿ ಜ್ಞಾನಚೈತನ್ಯ
ಲೈಂಗಿಕ ದೌರ್ಜನ್ಯ ಆರೋಪದಡಿ ಕೇರಳದ ಸ್ವಾಮೀಜಿ ಜ್ಞಾನಚೈತನ್ಯಗೆ ಜೀವಾವಧಿ ವಿಧಿಸಲಾಗಿತ್ತು. ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದು ವಿಚಾರಣೆಗಳ ನಂತರ ಸಾಬೀತಾಗಿತ್ತು.












Click it and Unblock the Notifications