ಎನ್ಆರ್ಸಿ-ಎನ್ಪಿಆರ್: ಮೋದಿ ಹೇಳಿದ ಮೂರು ಸುಳ್ಳುಗಳು
ನವದೆಹಲಿ, ಡಿಸೆಂಬರ್ 27: ಸಿಎಎ-ಎನ್ಆರ್ಸಿ-ಎನ್ಪಿಆರ್ ಬಗ್ಗೆ ದೇಶದೆಲ್ಲೆಡೆ ಚರ್ಚೆ ಎದ್ದಿದೆ. ಕೆಲವರು ಪರವಾಗಿ ಕೆಲವು ವಿರುದ್ಧವಾಗಿ ವಾಗ್ವಾದಗಳು, ಲೇಖನಿ ಯುದ್ಧಗಳು ನಡೆಯುತ್ತಲೇ ಇವೆ. ರಸ್ತೆಗಳಲ್ಲೂ ಪರ-ವಿರೋಧ ಪ್ರತಿಭಟನೆಗಳು ನಡೆಯುತ್ತಿವೆ.
ಸಿಎಎ ಅಫ್ಗಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದಿಂದ ಬರುವ ಮುಸ್ಲಿಮೇತರ ನಿರಾಶ್ರಿತರಿಗೆ ನಾಗರೀಕತೆ ನೀಡುವ ಕಾಯ್ದೆಯಾಗಿದೆ. ಇದು ಭಾರತದ ನಾಗರೀಕರಿಗೆ ನೇರ ಸಂಬಂಧವಿಲ್ಲದ್ದಾಗಿದೆ. ಆದರೆ ಎನ್ಆರ್ಸಿ ಮತ್ತು ಎನ್ಪಿಆರ್ ಹಾಗಲ್ಲ. ಈ ಎರಡರ ನಡುವೆ ಬಹು ಸೂಕ್ಷ್ಮವಾದ ವ್ಯತ್ಯಾಸವಿದೆ. ಇದರ ವ್ಯಾಖ್ಯಾನ, ಅರ್ಥ ಮಾಡಿಸುವಿಕೆ ಸುಲಭದ್ದಲ್ಲ.
ಎನ್ಆರ್ಸಿ ಬಗೆಗೆ ಸಾಮಾನ್ಯ ಜನರಿಗಿರಲಿ, ಸರ್ಕಾರದ ಪ್ರಮುಖ ಸ್ಥಾನಗಳಲ್ಲಿ ಕೂತವಿರಗೇ ಗೊಂದಲ ಇದ್ದಂತಿದೆ. ಮೊನ್ನೆಯಷ್ಟೆ ಎನ್ಆರ್ಸಿ ಬಗ್ಗೆ ಮೋದಿ ಒಂದು ಹೇಳಿಕೆ ನೀಡಿದ್ದರೆ, ಅಮಿತ್ ಶಾ ಸಂಸತ್ನಲ್ಲಿ ಬೇರೆಯದೇ ಹೇಳಿಕೆ ನೀಡಿದ್ದರು.
ದೆಹಲಿಯಲ್ಲಿ ಭಾಷಣ ಮಾಡಿದ ಮೋದಿ, ಎನ್ಆರ್ಸಿ-ಎನ್ಪಿಆರ್ ಮತ್ತು ಡಿಟೆನ್ಶನ್ ಕ್ಯಾಂಪ್ಗಳ ಬಗ್ಗೆ ಮಾತನಾಡಲು ಸಾಕಷ್ಟು ಸಮಯ ಮೀಸಲಿಟ್ಟರು. ಆದರೆ ಇದರಲ್ಲಿ ಮೂರು ಪ್ರಮುಖ ತಪ್ಪು ಅಥವಾ ಸುಳ್ಳನ್ನು ಮೋದಿ ಹೇಳಿದರು. ಅದರ ಪಟ್ಟಿ ಇಲ್ಲಿದೆ ನೋಡಿ...

ಎನ್ಆರ್ಸಿ ಬಗ್ಗೆ ಮಾತೇ ಆಡಿರಲಿಲ್ಲ ಎಂದಿದ್ದರು ಮೋದಿ
2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ನಾವು ಎನ್ಆರ್ಸಿ ಅನ್ನು ದೇಶದಾದ್ಯಂತ ಜಾರಿ ಮಾಡುವ ಬಗ್ಗೆ ಚರ್ಚೆಯೇ ಮಾಡಿಲ್ಲ, ಎಂದಿದ್ದರು ಮೋದಿ. ಆದರೆ ಇದು ಸುಳ್ಳು, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಣಾಳಿಕೆಯಲ್ಲಿಯೇ ಎನ್ಆರ್ಸಿ ವಿಷಯವಿತ್ತು. ದೇಶದೆಲ್ಲೆಡೆ ಎನ್ಆರ್ಸಿ ಜಾರಿ ಮಾಡುವುದಾಗಿ ಬಿಜೆಪಿ ಹೇಳಿತ್ತು. ಅಮಿತ್ ಶಾ ಸಹ ಪಶ್ಚಿಮ ಬಂಗಾಳದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಹಿಂದೆಯೇ ಎನ್ಆರ್ಸಿ ಅನ್ನು ದೇಶದ ಎಲ್ಲೆಡೆ ಜಾರಿ ಮಾಡುವುದಾಗಿ ಹೇಳಿದ್ದರು.

ಡಿಟೆನ್ಶನ್ ಸೆಂಟರ್ ನಿರ್ಮಿಸುತ್ತಿಲ್ಲ ಎಂದಿದ್ದ ಮೋದಿ
ಡಿಟೆನ್ಶನ್ ಸೆಂಟರ್ಗಳನ್ನು ನಿರ್ಮಿಸಿ ಎನ್ಆರ್ಸಿ ಯಲ್ಲಿ ಭಾರತೀಯರೆಂದು ಸಾಬೀತು ಮಾಡಲಾಗದವರನ್ನು ಬಂಧಿಸಲಾಗುತ್ತದೆ ಎಂಬುದು ಶುದ್ಧ ಸುಳ್ಳು, ಈ ಸುಳ್ಳನ್ನು ಕಾಂಗ್ರೆಸ್ ಮತ್ತು ನಗರ ನಕ್ಸಲರು ಹರಡುತ್ತಿದ್ದಾರೆ ಎಂದು ಮೋದಿ ಹೇಳಿದ್ದರು. ಆದರೆ ಡಿಟೆನ್ಶನ್ ಸೆಂಟರ್ಗ ನಿರ್ಮಾಣ ಈಗಾಗಲೇ ಹಲವು ರಾಜ್ಯಗಳಲ್ಲಿ ಪ್ರಾರಂಭವಾಗಿಬಿಟ್ಟಿವೆ. ನೆಲಮಂಗಲದಲ್ಲಿ ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್ ಅನ್ನು ಡಿಟೆನ್ಶನ್ ಕ್ಯಾಂಪ್ ಆಗಿ ಬದಲಾಯಿಸಲಾಗಿದೆ. ಅಸ್ಸಾಂ ನಲ್ಲಿ ಈಗಾಗಲೇ ಡಿಟೆನ್ಶನ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ. ಮುಂಬೈ ನಲ್ಲೂ ಡಿಟೆನ್ಶನ್ ಸೆಂಟರ್ ನಿರ್ಮಿಸಲಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಡಿಟೆನ್ಶನ್ ಸೆಂಟರ್ ನಿರ್ಮಿಸಲಾಗುತ್ತಿದೆ.

ಭಾರತೀಯ ಮುಸ್ಲೀಮರಿಗೂ ಎನ್ಆರ್ಸಿಗೂ ಸಂಬಂಧವಿಲ್ಲ ಎಂದಿದ್ದ ಮೋದಿ
ಸಿಎಎ ಮತ್ತು ಎನ್ಆರ್ಸಿ ಇಂದ ಭಾರತೀಯ ಮುಸ್ಲೀಮರಿಗೆ ಯಾವುದೇ ತೊಂದರೆ ಇಲ್ಲ ಎಂದು ಮೋದಿ ಹೇಳಿದ್ದರು. ಆದರೆ ಇದು ಕೇವಲ ಅರ್ಧ ಸತ್ಯ. ಸಿಎಎ ಜೊತೆಗೆ ಭಾರತೀಯ ಮುಸ್ಲೀಮರಿಗೆ ಸಂಬಂಧ ಇಲ್ಲದೇ ಇರಬಹುದು, ಆದರೆ ಎನ್ಆರ್ಸಿ ಗೂ ಭಾರತೀಯ ಮುಸ್ಲೀಮರಿಗೆ ಮಾತ್ರವಲ್ಲ ಎಲ್ಲ ಭಾರತೀಯರಿಗೂ ಸಂಬಂಧವಿದೆ. ಎನ್ಆರ್ಸಿ ಜಾರಿಯಾದಾಗ ಭಾರತದಲ್ಲಿ ವಾಸಿಸುತ್ತಿರುವ ಎಲ್ಲರೂ ನಾವು ಭಾರತೀಯರೇ ಎಂಬುದಕ್ಕೆ ದಾಖಲೆ ಕೊಡಬೇಕು, ಹಾಗೊಂದು ವೇಳೆ ದಾಖಲೆ ನೀಡಲು ವಿಫಲವಾದರೆ ಅವರನ್ನು ಭಾರತ ಬಿಟ್ಟು ಹೊರಗೆ ಕಳುಹಿಸಲಾಗುವುದು. ಅದು ಮುಸಲ್ಮಾನರೇ ಆಗಿರಬಹುದು ಅಥವಾ ಬೇರೆ ಯಾವ ಧರ್ಮದವರಾದರೂ ಆಗಿರಬಹುದು.

ಬಟ್ಟೆಯಿಂದ ಗುರುತಿಸಬಹುದು ಎಂದಿದ್ದ ಮೋದಿ
ಮೇಲ್ಕಂಡ ಸುಳ್ಳು ಮಾಹಿತಿ ಹೊರತಾಗಿ ಮೋದಿ ಅವರು ಹಲವು ಗುರುತರ ಟೀಕೆಗಳನ್ನು ದೆಹಲಿ ಭಾಷಣದಲ್ಲಿ ಮಾಡಿದರು. ಸಿಎಎ-ಎನ್ಆರ್ಸಿ ವಿರುದ್ಧ ಪ್ರತಿಭಟನೆ ಮಾಡುತ್ತಿರುವವನ್ನು 'ಬಟ್ಟೆಯಿಂದ ಗುರುತಿಸಬಹುದು' ಎಂದು ಮೋದಿ ಹೇಳಿದ್ದರು. ಮುಸ್ಲಿಂ ಅವರನ್ನೇ ಗುರಿಯಾಗಿಟ್ಟುಕೊಂಡು ಮೋದಿ ಈ ಮಾತು ಹೇಳಿದ್ದಾರೆ ಎಂಬುದು ಸ್ಪಷ್ಟ. ಆದರೆ ಈ ಹೋರಾಟದಲ್ಲಿ ಮುಸ್ಲಿಂ ಮಾತ್ರವಲ್ಲದೆ ಎಲ್ಲ ಹಿಂದೂಗಳೂ ಭಾಗಿಯಾಗಿದ್ದಾರೆ. ವಿದ್ಯಾರ್ಥಿಗಳು ಹೋರಾಟದ ಮುನ್ನೆಲೆಯಲ್ಲಿದ್ದಾರೆ.












Click it and Unblock the Notifications