ಇಂಧೋರ್ ಮಸೀದಿಯಲ್ಲಿ ಮೋದಿ ಭಾಷಣ: ಬೊಹರಾ ಸಮುದಾಯದ ಗುಣಗಾನ
Recommended Video

ಇಂಧೋರ್, ಸೆಪ್ಟೆಂಬರ್ 14: ಇಂಧೋರ್ನ ಸೈಫಿ ಮಸೀದಿಯಲ್ಲಿ ಬೊಹರಾ ಸಮುದಾಯದ ಮುಸ್ಲಿಂರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ಸರ್ಕಾರದ ವಿಕಾಸದ ಮಿಶನ್ಗೆ ಬೊಹರಾ ಸಮುದಾಯ ಹೆಗಲು ಕೊಟ್ಟಿದೆ ಎಂದರು.
ವ್ಯಾಪಾರ, ವ್ಯವಹಾರವನ್ನೇ ಪ್ರಮುಖ ಉದ್ಯೋಗ ಮಾಡಿಕೊಂಡಿರುವ ಬೊಹರಾ ಸಮುದಾಯವನ್ನು ಹಾಡಿ ಹೊಗಳಿದ ಮೋದಿ, ಬೊಹರಾ ಸಮುದಾಯ ತಮಗೆ ನೀಡಿದ ಪ್ರೀತಿ, ಹಾಗೂ ಗುಜರಾತ್ ಹಾಗೂ ದೇಶದ ಅಭಿವೃದ್ಧಿಯನ್ನು ಅವರು ನೀಡಿದ ಕಾಣ್ಕೆಗಳ ಬಗ್ಗೆ ಅವರು ಮನತುಂಬಿ ಮಾತನಾಡಿದರು.
ಮಸೀದಿಯಲ್ಲಿ, ಮುಸಲ್ಮಾನ ಸಮುದಾಯವನ್ನುದ್ದೇಶಿಸಿ ಮೋದಿ ಅವರು ಮಾಡುತ್ತಿರುವ ಭಾಷಣ ಇದಾಗಿದ್ದ ಕಾರಣ ಈ ಕಾರ್ಯಕ್ರಮ ಗಮನ ಸೆಳೆದಿತ್ತು. ತಮ್ಮ ಭಾಷಣದಲ್ಲಿ ಬೊಹರಾ ಸಮುದಾಯವನ್ನು ಹೊಗಳುವ ಜೊತೆಗೆ ತಮ್ಮ ಸರ್ಕಾರದ ಸಾಧನೆಗಳು ಮತ್ತು ಮಾಡಲಿರುವ ಕಾರ್ಯಗಳ ಬಗ್ಗೆಯೂ ಅವರು ಹೇಳಿದರು.

ಸೆಪ್ಟೆಂಬರ್ 15ರಿಂದ ಸ್ವಚ್ಛತೆಯೇ ಸೇವೆ ಅಭಿಯಾನ
ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2ರ ಗಾಂಧಿ ಜಯಂತಿ ವರೆಗೆ 'ಸ್ವಚ್ಛತಾ ಹೀ ಸೇವಾ' (ಸ್ವಚ್ಚತೆಯೇ ಸೇವೆ) ಎಂಬ ಆಂದೋಲನ ನಡೆಸುತ್ತಿದ್ದು. ಏಕಕಾಲಕ್ಕೆ ಒಂದು ಕೋಟಿಗೂ ಹೆಚ್ಚು ಜನ ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ. ರಾಷ್ಟ್ರದ ಬಹುತೇಕ ಎಲ್ಲ ಖ್ಯಾತನಾಮರ ಜೊತೆ ವಿಡಿಯೋ ಸಂವಾದ ನಡೆಸುವ ಮೂಲಕ ಅವರನ್ನು ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗುವಂತೆ ಮನವಿ ಮಾಡುತ್ತೇನೆ ಎಂದೂ ಅವರು ಈ ಸಮಯದಲ್ಲಿ ಹೇಳಿದರು.

ಬೊಹರಾ ಸಮಾಜವನ್ನು ಶ್ಲಾಘಿಸಿದ ಮೋದಿ
ತಾವು ಎಲ್ಲೇ ಹೋದರು ಶಾಂತಿ ಮತ್ತು ವಿಕಾಸದ ಬಗ್ಗೆಯೇ ಮಾತನಾಡುವುದಾಗಿ ಪುನರ್ ಉಚ್ಚರಿಸಿದ ಅವರು. ನಿಯಮ, ಕಾನೂನುಬದ್ಧವಾಗಿ ಜೀವನ ನಡೆಸಿಯೂ ಅತ್ಯುತ್ತಮ ಜೀವನ ನಡೆಸಬಹುದು ಎಂಬುದನ್ನು ಬೊಹರಾ ಸಮಾಜ ತೋರಿಸಿಕೊಟ್ಟಿದೆ. ಎಲ್ಲ ಸಮುದಾಯದವರೂ ಬೊಹರಾ ಸಮುದಾಯವನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು ಎಂದರು.

ರಾಷ್ಟ್ರಭಕ್ತಿಗೆ ಬೊಹರಾ ಸಮುದಾಯ ಉದಾಹರಣೆ
ಶಾಂತಿ, ಸದ್ಭಾವ, ಸತ್ಯಾಗ್ರಹ, ರಾಷ್ಟ್ರಭಕ್ತಿಯನ್ನು ಕಣಕಣದಲ್ಲಿ ತುಂಬಿಕೊಂಡಿರುವ ಬೊಹರಾ ಸಮುದಾಯ ಸಮಾಜಕ್ಕೆ ನೀಡಿರುವ ಕಾಣಿಕೆ ದೊಡ್ಡದು ಎಂದ ಮೋದಿ. ಮಾತೃಭೂಮಿಗೆ ಹೇಗೆ ನಿಷ್ಠರಾಗಿರಬೇಕು, ದೇಶ, ನಿಯಮ, ಕಾನೂನಿನ ಅನುಸಾರ ಬದುಕಬೇಕು ಎಂಬುದನ್ನು ಬೊಹರಾ ಸಮುದಾಯ ತೋರಿಸಿಕೊಟ್ಟಿದೆ ಎಂದರು.

ದಂಡಿ ಯಾತ್ರೆ ನೆನಪು
ಬೊಹರಾ ಸಮುದಾಯದ ಹಿರಿಯರು ಸ್ವಾತಂತ್ರ್ಯ ಹೋರಾಟದಲ್ಲಿ ನೀಡಿದ ಸಹಕಾರದ ಬಗ್ಗೆ ಮಾತನಾಡಿದ ಅವರು, ದಂಡಿ ಯಾತ್ರೆ ಸಮಯದಲ್ಲಿ ಮಹಾತ್ಮಾ ಗಾಂಧಿ ಅವರು ಸಯದ್ನಾ ಸಾಬ್ ಅವರ ಸೈಪಿ ಬಂಗಲೆಯಲ್ಲೇ ವಾಸ್ತವ್ಯ ಹೂಡಿದ್ದರು. ಸ್ವಾತಂತ್ರ್ಯದ ನಂತರ ಸಯದ್ನಾ ಸಾಬ್ ಅವರು ಸೈಫಿ ಬಂಗಲೆಯನ್ನು ರಾಷ್ಟ್ರಕ್ಕೆ ಬಿಟ್ಟುಕೊಟ್ಟರು ಎಂದು ಅವರು ನೆನಸಿಕೊಂಡರು.











Click it and Unblock the Notifications