ನರೇಂದ್ರ ಮೋದಿ ಭದ್ರತಾ ವೈಫಲ್ಯ; ಪಂಜಾಬ್ ಪೊಲೀಸರ ನಿರ್ಲಕ್ಷ್ಯ!
ನವದೆಹಲಿ, ಜನವರಿ 06; ಭಾರತದ ಪ್ರಧಾನಿ ನರೇಂದ್ರ ಮೋದಿ ಪಂಜಾಬ್ನಲ್ಲಿ 15 ನಿಮಿಷಗಳ ಕಾಲ ಫ್ಲೈ ಓವರ್ನಲ್ಲಿ ಸಿಲುಕಿದ್ದರು. ಈ ವಿಚಾರ ಈಗ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಈ ಘಟನೆ ಬಗ್ಗೆ ಮಾತನಾಡಿದ್ದಾರೆ. ಪಂಜಾಬ್ ಸರ್ಕಾರ ಗುಪ್ತಚರ ಇಲಾಖೆ ವರದಿ ಮತ್ತು ಬ್ಲೂ ಬುಕ್ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಘಟನೆ ಕುರಿತು ಸಚಿವಾಲಯ ಈಗಾಗಲೇ ರಾಜ್ಯ ಸರ್ಕಾರದಿಂದ ವರದಿ ಕೇಳಿದೆ.
ಪ್ರಧಾನಿಗೆ ಭದ್ರತಾ ವೈಫಲ್ಯ; ಪಂಜಾಬ್ ಸರ್ಕಾರವನ್ನು ವಜಾ ಮಾಡಬೇಕು; ಸಿಎಂ ಬೊಮ್ಮಾಯಿ
ಪ್ರಧಾನಿ ಭದ್ರತೆ ನೋಡಿಕೊಳ್ಳುವ ಎಸ್ಪಿಜಿ ತನ್ನದೇ ಆದ ಮಾರ್ಗಸೂಚಿ ಹೊಂದಿದೆ. ಇದನ್ನು ಬ್ಲೂ ಬುಕ್ ಎಂದು ಕರೆಯುತ್ತಾರೆ. ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡುವಾಗ ಬದಲಿ ಮಾರ್ಗವನ್ನು ಸಹ ಪೊಲೀಸರು ತಯಾರು ಮಾಡಿರಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.
ಭದ್ರತಾ ಲೋಪ:15 ನಿಮಿಷ ಫ್ಲೈಓವರ್ನಲ್ಲಿ ಸಿಲುಕಿದ ಪ್ರಧಾನಿ ಮೋದಿ
ಪ್ರಧಾನಿ ಸಾಗುವ ಮಾರ್ಗದಲ್ಲಿ ಪ್ರತಿಭಟನೆಗಳು ನಡೆಯಲಿವೆ ಎಂಬ ಗುಪ್ತಚರ ಇಲಾಖೆ ವರದಿಯನ್ನು ಪಂಜಾಬ್ ಸರ್ಕಾರ ನಿರ್ಲಕ್ಷ್ಯ ಮಾಡಿತ್ತು ಮತ್ತು ಬದಲಿ ಮಾರ್ಗದ ವ್ಯವಸ್ಥೆಯನ್ನು ಸಹ ಪೊಲೀಸರು ಮಾಡಿರಲಿಲ್ಲ.
ಭಾರತದಲ್ಲಿ ಭಯ ಹುಟ್ಟಿಸಿರುವುದು ಏಕೆ ಪಂಜಾಬ್ ಚುನಾವಣೆ!?
ಚುನಾವಣಾ ಸಮಾವೇಶ ರದ್ದು
ಪ್ರಧಾನಿ ನರೇಂದ್ರ ಮೋದಿ ಪಂಜಾಬ್ನ ಫಿರೋಜ್ಪುರದಲ್ಲಿ ನಡೆಯಬೇಕಿದ್ದ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿತ್ತು. ಇದಕ್ಕಾಗಿ ರಸ್ತೆ ಮಾರ್ಗವಾಗಿ ತೆರಳುತ್ತಿದ್ದರು. ಆದರೆ ಪ್ರಧಾನಿ ಮೋದಿ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಾ ರಸ್ತೆ ಬಂದ್ ಮಾಡಿದ್ದ ಕಾರಣ ಫ್ಲೈ ಓವರ್ ಮೇಲೆ ಅವರು 15 ನಿಮಿಷ ಸಿಲುಕಿದ್ದರು. ಬಳಿಕ ಸಮಾವೇಶ ರದ್ದುಗೊಳಿಸಲಾಗಿತ್ತು.
ಪಂಜಾಬ್ ಪೊಲೀಸರ ನಿರ್ಲಕ್ಷ್ಯ
ಪ್ರಧಾನಿ ನರೇಂದ್ರ ಮೋದಿ ಸಾಗುವ ಮಾರ್ಗದಲ್ಲಿ ಪ್ರತಿಭಟನೆ ನಡೆಯುವ ನಿರೀಕ್ಷೆ ಇದೆ ಎಂಬ ಗುಪ್ತಚರ ಇಲಾಖೆ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯ ಪಂಜಾಜ್ ಪೊಲೀಸರ ಜೊತೆ ಹಂಚಿಕೊಂಡಿತ್ತು. ಪೊಲೀಸರು ಎಲ್ಲಾ ಅಗತ್ಯ ಕ್ರಮಗಳನ್ನು ವಿಐಐಪಿ ಭದ್ರತೆಗಾಗಿ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಗೃಹ ಸಚಿವಾಲಯದ ಮಾಹಿತಿಯನ್ನು ಪೊಲೀಸರು ನಿರ್ಲಕ್ಷ್ಯ ಮಾಡಿದ್ದು, ಪ್ರಧಾನಿ ಭದ್ರತೆಯಲ್ಲಿ ಲೋಪವಾಗಿದೆ.
ಬ್ಲೂ ಬುಕ್ ನಿಯಮ ಪಾಲಿಸಿಲ್ಲ
ಬ್ಲೂ ಬುಕ್ ನಿಯಮಗಳ ಅನ್ವಯ ಎಸ್ಪಿಜಿಗೆ ರಾಜ್ಯ ಪೊಲೀಸರು ಯಾವುದೇ ತಕ್ಷಣದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಬೇಕು. ಆಗ ಎಸ್ಪಿಜಿ ತಂಡ ಪ್ರಧಾನಿ ಸಂಚಾರ, ಭದ್ರತೆಯ ವಿಚಾರದಲ್ಲಿ ಬದಲಾವಣೆ ಮಾಡುತ್ತದೆ. ಈ ಕುರಿತು ರಾಜ್ಯ ಪೊಲೀಸರಿಗೆ ಬ್ಲೂ ಬುಕ್ ನಿಯಮಗಳನ್ನು ತಿಳಿಸಲಾಗಿತ್ತು. ಆದರೆ ಪ್ರಧಾನಿ ಸಾಗುವ ಮಾರ್ಗದಲ್ಲಿ ರಸ್ತೆ ಬಂದ್ ಆಗಿದ್ದರೂ ಪೊಲೀಸರು ಮಾಹಿತಿ ನೀಡಲೇ ಇಲ್ಲ.
ಭಾರತ-ಪಾಕಿಸ್ತಾನ ಗಡಿ
ಪ್ರಧಾನಿ ನರೇಂದ್ರ ಮೋದಿ ಭಾರತ-ಪಾಕಿಸ್ತಾನ ಗಡಿಯ ಕೆಲವು ಕಿಲೋಮೀಟರ್ ದೂರದಲ್ಲಿಯೇ 15 ನಿಮಿಷಗಳ ಕಾಲ ಸಿಲುಕಿದ್ದರು. 2021ರಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಸುಮಾರು 150 ಡ್ರೋನ್ ಹೊಡೆದುರುಳಿಸಲಾಗಿದೆ. ಇವುಗಳಲ್ಲಿ ಕೆಲವು ಡ್ರೋಣ್ಗಳಲ್ಲಿ ಬಾಂಬ್, ಗ್ರನೇಡ್ಗಳಿದ್ದವು. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಪ್ರಧಾನಿ ಭದ್ರತಾ ವೈಫಲ್ಯ ಆಗಿರುವ ಕುರಿತು ಭಾರೀ ಚರ್ಚೆಯಾಗುತ್ತಿದೆ.
ಭದ್ರತಾ ಲೋಪ ಆಗಿಲ್ಲ; ಸಿಎಂ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ, "ಪ್ರಧಾನಿ ನರೇಂದ್ರ ಮೋದಿ ಪ್ರಯಾಣಕ್ಕೆ ಅಡ್ಡಿ ಆಗಿರುವುದಕ್ಕೆ ವಿಷಾದವಿದೆ. ಆದರೆ ಇಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ" ಎಂದು ಹೇಳಿದ್ದಾರೆ.
"ಪ್ರಧಾನಿ ಸಮಾವೇಶಕ್ಕೆ ಭದ್ರತೆಗಾಗಿ ಮನವಿ ಮಾಡಲಾಗಿತ್ತು. ಅದಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಪ್ರಧಾನಿ ರಸ್ತೆ ಮಾರ್ಗದ ಮೂಲಕ ಹುಸೈನಿವಾಲಾಕ್ಕೆ ಹೋಗುವ ಕಾರ್ಯಕ್ರಮ ಮೂಲ ಪಟ್ಟಿಯಲ್ಲಿ ಇರಲಿಲ್ಲ. ಕೊನೆ ಕ್ಷಣದಲ್ಲಿ ರಸ್ತೆ ಮಾರ್ಗದ ಮೂಲಕ ಹೊರಟರು. ಪ್ರತಿಭಟನೆ ತೆರವು ಮಾಡಲು 20 ನಿಮಿಷವಾದರೂ ಬೇಕಿತ್ತು" ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ.
Recommended Video