ರುದ್ರರಮಣೀಯ ಹಿಮಾಲಯದಲ್ಲಿ ಮೋದಿ ಧ್ಯಾನದ ಮತ್ತೊಂದು ಚಿತ್ರ
ನವದೆಹಲಿ, ಮೇ 20 : ಕೇದಾರನಾಥದ ಪುಟ್ಟ ಗುಹೆಯಲ್ಲಿ ಬೆಚ್ಚಗಿರಲು ಎಲ್ಲ ತಯಾರಿ ಮಾಡಿಕೊಂಡು ಧ್ಯಾನಕ್ಕೆ ಕುಳಿತಿದ್ದಾರೆ ಎಂದು ಪ್ರತಿಪಕ್ಷಗಳು ಸೇರಿದಂತೆ, ನರೇಂದ್ರ ಮೋದಿಯವರನ್ನು ದ್ವೇಷಿಸುವವರು ಅಪಹಾಸ್ಯ ಮಾಡುತ್ತಿರುವ ಹೊತ್ತಿನಲ್ಲೇ ಮೋದಿಯವರು ಮತ್ತೊಂದು ಅದ್ಭುತ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
ಅದು ಯಾವುದೇ ಗುಹೆಯಲ್ಲಿ ಅಲ್ಲ, ಸುತ್ತಲೂ ಹಿಮ ಆವರಿಸಿಕೊಂಡಿರುವ ಹಿಮಾಲಯದ ತಪ್ಪಲಿನಲ್ಲಿ ಕೇಸರಿ ಶಾಲನ್ನು ಹೊದ್ದ ನರೇಂದ್ರ ಮೋದಿಯವರು, ಅತ್ಯಂತ ತನ್ಮಯತೆಯಿಂದ ಧ್ಯಾನ ಮಾಡುತ್ತಿರುವ ಚಿತ್ರವದು. ಧ್ಯಾನಕ್ಕೂ ಬದಲಾಗಿ ಪ್ರಕೃತಿ ಸೌಂದರ್ಯ ಸೆಳೆಯುವಂತಿದೆ.
ಆ ಸ್ಥಳ ಮತ್ತು ಪ್ರಕೃತಿಯನ್ನು ನರೇಂದ್ರ ಮೋದಿಯವರು, "ಅಮೋಘ, ವೈಭವೋಪೇತವಾಗಿದೆ. ಸ್ನಿಗ್ಧ ಸೌಂದರ್ಯವೂ ಇದೆ, ದೈವಿಕತೆಯೂ ಇದೆ. ಈ ಹಿಮಾಲಯದ ಬಗ್ಗೆ ಏನೋ ಅನೂಹ್ಯವಾದ ವಿಶೇಷತೆಯಿದೆ. ಹಿಮಾಲಯದ ಬೆಟ್ಟಕ್ಕೆ ಮರಳುವುದರಲ್ಲಿ ಏನೋ ವಿಶಿಷ್ಟಬಗೆಯ ಆನಂದವಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಎಂದಿನಂತೆ ಪರ-ವಿರೋಧದ ಟೀಕೆಗಳು, ಟಿಪ್ಪಣಿಗಳು, ತಮಾಷೆಯ, ಹುಡುಕಾಟಿಕೆ, ದ್ವೇಷ ಕಾರುವ, ವಿಡಂಬನಾತ್ಮಕ ಹೇಳಿಕೆಗಳು ಹರಿಹರಿದು ಬಂದಿವೆ. ಅವರವರ ಭಾವಕ್ಕೆ ತಕ್ಕಂತೆ ಭಾಷಾಪ್ರಯೋಗ ಮಾಡುತ್ತಿದ್ದಾರೆ. ಇದು ಸ್ವತಂತ್ರ ದೇಶವಾದ್ದರಿಂದ, ಯಾವುದೇ ರೀತಿಯ ಹೇಳಿಕೆ ನೀಡಲು ಯಾವುದೇ ನಿರ್ಬಂಧ ಇಲ್ಲದಿರುವುದರಿಂದ ತರಹೇವಾರಿ ನುಡಿಗಳು ತುಂಬಿಕೊಂಡಿವೆ.
ಕೆಲ ತಿಂಗಳ ಹಿಂದೆ ಹ್ಯೂಮನ್ಸ್ ಆಫ್ ಬಾಂಬೆ ಸಾಮಾಜಿಕ ಜಾಲತಾಣಕ್ಕೆ ನೀಡಿದ್ದ ಸಂದರ್ಶನದಲ್ಲಿ, ತಾವು 17 ವರ್ಷದ ಬಾಲಕನಾಗಿದ್ದಾಗ ಸ್ವಯಂ ಸಾಕ್ಷಾತ್ಕಾರಕ್ಕಾಗಿ ಹಿಮಾಲಯಕ್ಕೆ ಹೋಗಿದ್ದು, ಹಲವಾರು ಸಾಧು ಸಂತರನ್ನು ಭೇಟಿ ಮಾಡಿದ್ದು, ಆಂತರ್ಯದ ಹುಡುಕಾಟ ಆರಂಭಿಸಿದ್ದರ ಬಗ್ಗೆ ಸವಿವರವಾಗಿ ನರೇಂದ್ರ ಮೋದಿಯವರು ಹೇಳಿದ್ದರು.
ತಾವು ಆಗ ನಸುಕಿನಲ್ಲಿ, ಕೊರೆಯುವ ಚಳಿಯಲ್ಲಿ ತಣ್ಣೀರ ಸ್ನಾನ ಮಾಡುತ್ತಿದ್ದುದಾಗಿ, ಒಂದು ಜಲಪಾತದ ಸದ್ದಿನಲ್ಲಿಯೂ ಶಾಂತಿ, ಏಕಾಂತ ಮತ್ತು ಧ್ಯಾನವನ್ನು ಕಂಡುಕೊಳ್ಳಬಹುದು ಎಂಬುದನ್ನು ಕಲಿತಿದ್ದಾಗಿ ಹೇಳಿದ್ದರು. ಹಿಮಾಲಯದಂತಹ ಅಗಾಧತೆಯ ಎದುರು ಯಾವಾಗ ಶರಣಾಗತರಾಗಿ ನಿಲ್ಲುತ್ತೇವೆಯೋ ಆಗ ಸಮಸ್ತ ವಿಶ್ವದ ಎದುರು ಕುಬ್ಜರಾಗಿ ಕಾಣಿಸುತ್ತೇವೆ. ಇದನ್ನು ನಾವು ಅರಿತಾಗ ನಮ್ಮಲ್ಲಿನ ಅಹಂಕಾರವೆಲ್ಲ ಹಿಮಕರಗಿ ನೀರಾದಂತೆ ಭಾಸವಾಗುತ್ತದೆ ಎಂದು ಅವರು ವಿವರಿಸಿದ್ದರು.
Majestic and magnificent.
— Chowkidar Narendra Modi (@narendramodi) May 19, 2019
Serene and spiritual.
There is something very special about the Himalayas.
It is always a humbling experience to return to the mountains. pic.twitter.com/o01iPJ5dl3
ಎಡೆಬಿಡದ ಚುನಾವಣಾ ಪ್ರಚಾರದಿಂದ ಬಳಲಿದ್ದ ನರೇಂದ್ರ ಮೋದಿಯವರು, ಇಂಥದೇ ಆತ್ಮಸಾಕ್ಷಾತ್ಕಾರಕ್ಕಾಗಿ ಹಿಮಾಲಯಕ್ಕೆ ಹೋಗಿ ಧ್ಯಾನ ಮಾಡಿದರಾ? ಏನೋ ಒಂದು. ಆದರೆ, ಹಿಮಾಲಯದ ಪರ್ವತ ಶ್ರೇಣಿಯಲ್ಲಿ ಕುಳಿತು ಧ್ಯಾನ ಮಾಡಿದ್ದು ಅವರ ವಿರೋಧಿಗಳಿಗೆ ನಾಟಕದಂತೆ ಕಂಡರೂ ಅಚ್ಚರಿಯಿಲ್ಲ.
ದೇಶದಲ್ಲಿ ಲೋಕಸಭೆ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ ಬರುವುದಕ್ಕೆ ಮೊದಲೇ ಈ ಚಿತ್ರವನ್ನು ನರೇಂದ್ರ ಮೋದಿಯವರು ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದರು. ಬಹುತೇಕ ಎಕ್ಸಿಟ್ ಪೋಲ್ ಗಳು ನರೇಂದ್ರ ಮೋದಿಯವರು ಮತ್ತೆ ಜಯಭೇರಿ ಬಾರಿಸಲಿದ್ದಾರೆ, ಮತ್ತೊಂದು ಅವಧಿಗೆ ಪ್ರಧಾನಿಯಾಗಿ ದೇಶ ಮುನ್ನಡೆಸಲಿದ್ದಾರೆ ಎಂದು ಹೇಳಿವೆ. ಚುನಾವಣೆಯ ಫಲಿತಾಂಶ ಮೇ 23ರಂದು ಪ್ರಕಟವಾಗಲಿದೆ. ಯಾರ ಅಹಂಕಾರ ಹಿಮದಂತೆ ಕರಗಿ ನೀರಾಗುತ್ತದೋ ಕಾದು ನೋಡೋಣ.












Click it and Unblock the Notifications