ನರೇಂದ್ರ ಮೋದಿ ಮನ್ ಕೀ ಬಾತ್; ಮುಖ್ಯಾಂಶಗಳು
ನವದೆಹಲಿ, ಆಗಸ್ಟ್ 30: "ದೇಶದ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಕೇವಲ ತಮ್ಮ ಆರೋಗ್ಯ ಬಗ್ಗೆ ಮಾತ್ರವಲ್ಲ. ಇತರರ ಆರೋಗ್ಯದ ಬಗ್ಗೆಯೂ ಕಾಳಜಿ ಹೆಚ್ಚಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಮನ್ ಕೀ ಬಾತ್ ಸರಣಿಯ 68ನೇ ಕಾರ್ಯಕ್ರಮ ಇದಾಗಿತ್ತು.
"ದೇಶದ ಜನರಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಕೋವಿಡ್ ಭೀತಿಯ ನಡುವೆಯೇ ನಾವು ಗಣೇಶೋತ್ಸವ ಆಚರಣೆ ಮಾಡಿದ್ದೇವೆ. ಹಬ್ಬವನ್ನು ಆಚರಣೆ ಮಾಡುವಾಗ ನಾವು ಕೋವಿಡ್ ನಿಯಮಗಳನ್ನು ಪಾಲನೆ ಮಾಡಿದ್ದೇವೆ" ಎಂದು ಮೋದಿ ಹೇಳಿದರು.
"ದೇಶದ ಜನರು ಕೊರೊನಾ ಜೊತೆಗೆ ಬದುಕುತ್ತಿದ್ದಾರೆ. ಕೋವಿಡ್ ಕಾರಣದಿಂದಾಗಿ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹಬ್ಬವನ್ನು ಆಚರಣೆ ಮಾಡಿದರು" ಎಂದು ಹೇಳಿದ ಮೋದಿ ಶಿಸ್ತು ಪಾಲಿಸಿದ ಜನರಿಗೆ ಮೋದಿ ಧನ್ಯವಾದ ಅರ್ಪಿಸಿದರು.
"ದೇಶಾದ್ಯಂತ ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದೆ. ಪ್ರಕೃತಿಯೊಂದಿಗೆ ಜನರ ಸಂಬಂಧ ಮತ್ತಷ್ಟು ಬಿಗಿಯಾಗಿದೆ. ಉತ್ತಮವಾದ ಮಳೆಯಾಗಿದೆ. ಮುಂದಿನ ಬಾರಿ ಉತ್ತಮ ಫಲಸು ದೊರೆಯುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ" ಎಂದರು.

ಹೊಸ ಶಿಕ್ಷಣ ನೀತಿ, ಆಟ
"ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಟಿಕೆಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ. ಅದರಲ್ಲೂ ದೇಶಿಯ ಆಟಿಕೆಗಳ ಮಾರುಕಟ್ಟೆ ಬಹಳ ದೊಡ್ಡದಿದೆ. ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಆಟಿಕೆಗಳನ್ನು ಮನ್ ಕೀ ಬಾತ್ನಲ್ಲಿ ನರೇಂದ್ರ ಮೋದಿ ಪ್ರಸ್ತಾಪಿಸಿದರು.

ಸ್ಟಾರ್ಟ್ ಅಪ್ಗಳಿಗೆ ಹೆಚ್ಚಿನ ಆದ್ಯತೆ
ಆತ್ಮ ನಿರ್ಭರ ಭಾರತದ ಬಗ್ಗೆ ಚಿಂತಿಸುವ ಕಾಲವಿದು ಎಂದು ಹೇಳಿದ ಮೋದಿ ಗಾಂಧೀಜಿ ಸಹ ಸ್ವದೇಶಿ ಉದ್ಯಮಕ್ಕೆ ಆದ್ಯತೆ ನೀಡಲು ಕರೆ ನೀಡಿದ್ದರು. ಎಲ್ಲರೂ ಒಟ್ಟಾಗಿ ಸ್ವಾವಲಂಭಿ ಭಾರತವನ್ನು ನಾವು ಕೊಟ್ಟೋಣ. ದೇಶದ ಯುವಕರಿಗೆ ಉದ್ಯೋಗ ಸಿಗಬೇಕಿದೆ ಎಂದು ಮೋದಿ ಹೇಳಿದರು. ಸ್ಟಾರ್ಟ್ ಅಪ್ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು.

ದೇಶಿ ತಳಿಯ ನಾಯಿಗಳು
ದೇಶದ ಭದ್ರತಾ ಪಡೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ನಾಯಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ವಿವಿಧ ಕಾರ್ಯಾಚರಣೆಯಲ್ಲಿ ಪ್ರಾಣತ್ಯಾಗ ಮಾಡಿದ ನಾಯಿಗಳಿಗೆ ಪ್ರಧಾನಿ ನರೇಂದ್ರ ಮೋದಿ ವಂದನೆ ಸಲ್ಲಿಸಿದರು. ಭಾರತದ ನಾಯಿಯ ತಳಿಗಳ ಬಗ್ಗೆ ಮಾತನಾಡಿದ ಮೋದಿ ಹಲವಾರು ದೇಶಿ ತಳಿಯ ನಾಯಿಗಳು ಸೇನೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿವೆ. ನಾಯಿ ಸಾಕುವವರು ದೇಶಿ ತಳಿಯ ನಾಯಿಗಳನ್ನು ಸಾಕಿ, ಇವುಗಳ ನಿರ್ವಹಣಾ ವೆಚ್ಚ ಸಹ ಕಡಿಮೆ ಎಂದರು.

ಆಟಿಕೆಗಳದ್ದು ದೊಡ್ಡ ಉದ್ಯಮ
ಪ್ರಧಾನಿ ನರೇಂದ್ರ ಮೋದಿ ಆಟಿಕೆಗಳ ಬಗ್ಗೆ ಮಾತನಾಡಿದರು. ಕೊವೀಡ್ ಸಂದರ್ಭದಲ್ಲಿ ಮಕ್ಕಳು ಹೆಚ್ಚು ಸಕ್ರಿಯರಾಗಿದ್ದಾರೆ. ಮಕ್ಕಳು ದೇಶಿ ಆಟಿಕೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ. ದೇಶಿಯ ಕ್ರೀಡೆಗಳ ಮೂಲಕ ಮಕ್ಕಳಲ್ಲಿ ಭೇದಭಾವ ಕಡಿಮೆಯಾಗಿದೆ. ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಆಟಿಕೆಗಳ ಪಾತ್ರವೂ ಹೆಚ್ಚಿದೆ ಎಂದರು.












Click it and Unblock the Notifications