ಶಿರಡಿ ಬಾಬಾ ಆಶೀರ್ವಾದ ಪಡೆದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಮೋದಿ
ಶಿರಡಿ, ಅಕ್ಟೋಬರ್ 19: ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಬಡತನ ಹೋಗಲಾಡಿಸಲು ಕೇಂದ್ರ ಬಿಜೆಪಿ ಸರ್ಕಾರ ಮಾಡುತ್ತಿರುವ ಅತಿ ದೊಡ್ಡ ಪ್ರಯತ್ನ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಶಿರಡಿಗೆ ಭೇಟಿ ನೀಡಿದ್ದ ಅವರು, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಮನೆ ಬೀಗಗಳನ್ನು ವಿತರಿಸಿದರು. ಅಲ್ಲದೆ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೂ ಇದೇ ಸಮಯದಲ್ಲಿ ಅವರು ಭೇಟಿ ನೀಡಿದರು.
ನಿಮ್ಮ ಮುಂದಿನ ಪೀಳಿಗೆಯನ್ನು ಬಡತನದಿಂದ ಮುಕ್ತಗೊಳಿಸಲು ಅವರಿಗೆ ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕು ಎಂದು ಆವಾಸ್ ಯೋಜನೆ ಫಲಾನುಭವಿಗಳಿಗೆ ಮೋದಿ ಅವರು ಮನವಿ ಮಾಡಿದರು.
ಮರಾಠಾವಾಡ ಮತ್ತು ಉತ್ತರ ಮಹಾರಾಷ್ಟ್ರದಲ್ಲಿ ಉಂಟಾಗಿರುವ ಬರ ಎದುರಿಸಲು ಕೇಂದ್ರ ಸರ್ಕಾರವು ನೆರವು ನೀಡುತ್ತದೆ ಎಂದು ಮಹಾರಾಷ್ಟ್ರ ರಾಜ್ಯದ ಜನರಿಗೆ ಪ್ರಧಾನಿ ಮೋದಿ ಭರವಸೆ ನೀಡಿದರು.

ಕಾಂಗ್ರೆಸ್ ಮೇಲೆ ಆಕ್ರೋಶ
ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಮೇಲೂ ಹರಿಹಾಯ್ದ ಅವರು, ಇಷ್ಟು ವರ್ಷ ಸರ್ಕಾರಿ ಯೋಜನೆಗಳು ಕೇವಲ ಒಂದು ಕುಟುಂಬದ ಉದ್ಧಾರಕ್ಕಾಗಿ ಮಾತ್ರವೇ ಮೀಸಲಾಗಿದ್ದವು ಆದರೆ ಬಿಜೆಪಿಯು ಬಡಜನರಿಗಾಗಿ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.

ಆರೋಗ್ಯ ಭೀಮಾ ಯೋಜನೆಗೂ ಅರ್ಹರು
ಆವಾಸ್ ಯೋಜನೆಯಲ್ಲಿ ನಿವಾಸ ಪಡೆದ ಕುಟುಂಬಗಳು ಆರೋಗ್ಯ ಭೀಮಾ ಯೋಜನೆಯ ಫಲಾನುಭವಿಗಳೂ ಆಗಿರುತ್ತಾರೆ ಅವರಿಗೆ ಸರ್ಕಾರವು ಉಚಿತ ಆರೋಗ್ಯ ಹಾಗೂ ಜೀವ ವಿಮೆ ನೀಡುತ್ತದೆ ಎಂದು ಇದೇ ಸಂದರ್ಭದಲ್ಲಿ ಅವರು ಘೋಷಿಸಿದರು.

ಒಂದು ಕುಟುಂಬಕ್ಕಾಗಿ ಯೋಜನೆಗಳು
ಇಷ್ಟು ವರ್ಷ ಇದ್ದ ಸರ್ಕಾರ ಕೇವಲ ಒಂದು ಕುಟುಂಬದ ಉದ್ಧಾರಕ್ಕೆ ಯೋಜನೆಗಳನ್ನು ಮಾಡಿತ್ತು. ಆ ಸರ್ಕಾರವು ನಿಮಗೆ ಉದ್ಯೋಗ ನೀಡಲಿಲ್ಲ, ನಿಮಗೆ ಶೌಚಾಲಯ ಕಟ್ಟಿಸಿಕೊಡಲಿಲ್ಲ, ನಿಮಗೆ ಮನೆ ಕಟ್ಟಿಸಿಕೊಡಲಿಲ್ಲ, ನಿಮಗೆ ಯಾವುದೇ ಸಹಾಯ ಮಾಡಿರಲಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ಇದ್ದಿದ್ದರೆ 20 ವರ್ಷ ಹೆಚ್ಚು ಬೇಕಾಗಿತ್ತು
ಇದೇ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಈಗ ನಾವು ಬಡವರಿಗೆಂದು ಕಟ್ಟಿಸುತ್ತಿರುವ ಮನೆಗಳನ್ನು ಕಟ್ಟಿಸಲು ಅದಕ್ಕೆ 20 ವರ್ಷ ಬೇಕಾಗುತ್ತಿತ್ತು. ಅಂದರೆ ಉತ್ತಮ ಮನೆಗಾಗಿ ಬಡವರು ಇನ್ನೂ 20 ವರ್ಷ ಶ್ರಮಪಡಬೇಕಾಗುತ್ತಿತ್ತು ಎಂದು ಮೋದಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.












Click it and Unblock the Notifications