ಉಪ ಚುನಾವಣೆ ಗೆಲುವಿಗೆ ಕನ್ನಡದಲ್ಲಿ ಶುಭ ಹಾರೈಸಿದ ಮೋದಿ, ಅಮಿತ್ ಶಾ
ನವದೆಹಲಿ, ನವೆಂಬರ್ 11: ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭೆ ಕ್ಷೇತ್ರಗಳಲ್ಲಿ ಎರಡರಲ್ಲಿಯೂ ಬಿಜೆಪಿ ಜಯಗಳಿಸುವ ಮೂಲಕ ರಾಜ್ಯದ ಸರ್ಕಾರವನ್ನು ಮತ್ತಷ್ಟು ಬಲಪಡಿಸಿವೆ.
ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಯಡಿಯೂರಪ್ಪ ಸರ್ಕಾರವನ್ನು ಅಭಿನಂದಿಸಿದ್ದಾರೆ. ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕನ್ನಡದಲ್ಲಿಯೇ ಟ್ವೀಟ್ ಮಾಡಲಾಗಿದೆ.
'ಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿನಗರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಅತ್ಯಂತ ವಿಶೇಷವಾದದ್ದು. ಕೇಂದ್ರ ಹಾಗೂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರದ ಸುಧಾರಣಾ ಕಾರ್ಯಸೂಚಿಗಳ ಮೇಲೆ ಜನರು ಹೊಂದಿರುವ ಸ್ಥಿರ ವಿಶ್ವಾಸವನ್ನು ಇದು ಪುನಃ ದೃಢೀಕರಿಸುತ್ತದೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಈ ಗೆಲುವಿಗಾಗಿ ಅವರು ಪಕ್ಷದ ಕಾರ್ಯಕರ್ತರು ಮತ್ತು ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 'ನಮ್ಮ ಕಾರ್ಯಕರ್ತರ ಶ್ರಮ ಹಾಗೂ ಜನರ ಬೆಂಬಲಕ್ಕೆ ನನ್ನ ಧನ್ಯವಾದಗಳು' ಎಂದು ಅವರು ಹೇಳಿದ್ದಾರೆ.
'ಬಿಜೆಪಿಗೆ ನಿರಂತರ ಬೆಂಬಲ ನೀಡುತ್ತಿರುವ ಕರ್ನಾಟಕಕ್ಕೆ ಧನ್ಯವಾದಗಳು. ಉಪಚುನಾವಣೆಯಲ್ಲಿನ ಅಭೂತಪೂರ್ವ ಗೆಲುವಿಗಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ನಳಿನ್ ಕುಮಾರ್ ಕಟೀಲ್ ಹಾಗೂ ಕರ್ನಾಟಕ ಬಿಜೆಪಿಯ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಡಿ ರಾಜ್ಯವು ಅಭಿವೃದ್ಧಿ ಸಾಧಿಸಲಿದೆ' ಎಂದು ಅಮಿತ್ ಶಾ ಹೇಳಿದ್ದಾರೆ.

'ನಿಮ್ಮ ಸರಿಸಾಟಿಯಿಲ್ಲದ ಬೆಂಬಲಕ್ಕಾಗಿ ಕರ್ನಾಟಕಕ್ಕೆ ಧನ್ಯವಾದಗಳು. ಈ ಚುನಾವಣೆಯು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲಿನ ಕರ್ನಾಟಕದ ಒಂದಿಷ್ಟೂ ಬದಲಾಗದ ನಂಬಿಕೆಯನ್ನು ಪ್ರತಿಫಲಿಸುತ್ತದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಪಕ್ಷದ ಪ್ರತಿ ಕಾರ್ಯಕರ್ತರಿಗೂ ಅಭಿನಂದನೆಗಳು' ಎಂದು ಜೆಪಿ ನಡ್ಡಾ ಟ್ವೀಟ್ ಮಾಡಿದ್ದಾರೆ.












Click it and Unblock the Notifications