ಭಾಯಿಯೋ ಔರ್ ಬೆಹೆಣೋ... ಮೋದಿ ಭಾಷಣದ ಮುಖ್ಯಾಂಶಗಳು
45 ನಿಮಿಷಗಳ ಕಾಲ ಮಾಡಿದ ಭಾಷಣದಲ್ಲಿ, ಹೆಚ್ಚಿನ ಭರವಸೆಗಳನ್ನು ನೀಡದೆ, ಅಪನಗದೀರಕಣದ ಬಗ್ಗೆ ಹೆಚ್ಚಿನ ಮಾಹಿತಿ ಹೇಳದೆ, ಭವ್ಯ ಭಾರತದ ಭವಿಷ್ಯಕ್ಕಾಗಿ ಎಲ್ಲರೂ ಒಟ್ಟಿಗೆ ಶ್ರಮಿಸೋಣ ಎಂಬ ಸಂದೇಶ ನೀಡಿ ಮೋದಿ ಭಾಷಣ ಮುಗಿಸಿದರು.
ಬೆಂಗಳೂರು, ಡಿಸೆಂಬರ್ 31 : ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಸಾರಿರುವ ಯುದ್ಧವನ್ನು ನಾವು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂದು ತಮ್ಮ ಭಾಷಣದಲ್ಲಿ ಹೇಳಿರುವ ನರೇಂದ್ರ ಮೋದಿ, ಮಹಿಳೆಯರಿಗಾಗಿ, ಬಡವರಿಗಾಗಿ, ಕಾರ್ಮಿಕರಿಗಾಗಿ ಹಲವಾರು ಘೋಷಣೆಗಳನ್ನು ಘೋಷಿಸಿದ್ದಾರೆ.
ಭಾಯಿಯೋ ಔರ್ ಬೆಹೆಣೋ.... ಎಂದು ಮಾತು ಮಾತಿಗೂ ಭಾಷಣದಲ್ಲಿ ಪ್ರಸ್ತಾಪಿಸುತ್ತಿದ್ದ ನರೇಂದ್ರ ಮೋದಿ, 45 ನಿಮಿಷಗಳ ಕಾಲ ಮಾಡಿದ ಭಾಷಣದಲ್ಲಿ, ಇಂದು ಹೆಚ್ಚಿನ ಭರವಸೆಗಳನ್ನು ನೀಡದೆ, ಅಪನಗದೀರಕಣದ ಬಗ್ಗೆ ಹೆಚ್ಚಿನ ಮಾಹಿತಿ ಹೇಳದೆ, ಭವ್ಯ ಭಾರತದ ಭವಿಷ್ಯಕ್ಕಾಗಿ ಎಲ್ಲರೂ ಒಟ್ಟಿಗೆ ಶ್ರಮಿಸೋಣ ಎಂಬ ಸಂದೇಶ ನೀಡಿ ಭಾಷಣ ಮುಗಿಸಿದರು.
ನವೆಂಬರ್ 8ರಂದು ಸಂಜೆ 8 ಗಂಟೆಗೆ ಮಾಡಿದ ಭಾಷಣ ಇಡೀ ದೇಶದಲ್ಲಿ ಅಲ್ಲೋಲಕಲ್ಲೋಲವೆಬ್ಬಿಸಿತ್ತು. ನೋಟು ನಿಷೇಧದಿಂದ ದೇಶದ ಜನತೆ, ಅದರಲ್ಲೂ ಬಡವರು, ಗ್ರಾಮೀಣ ಪ್ರದೇಶದವರು ಸಾಕಷ್ಟು ಸಂಕಷ್ಟಕ್ಕೀಡಾಗಿದ್ದರೂ, ಅಪನಗದೀಕರಣ ಅರ್ಧ ಸೆಂಚುರಿ ಬಾರಿಸುತ್ತಿದ್ದಂತೆ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ.
ಮೋದಿ ಭಾಷಣದ ಮುಖ್ಯಾಂಶಗಳು ಕೆಳಗಿನಂತಿವೆ.
* ಇಂದು ಮಹಾತ್ಮಾ ಗಾಂಧಿ ಇಲ್ಲದಿರಬಹುದು. ಆದರೆ, ಸತ್ಯದ ಮಾರ್ಗದಲ್ಲಿ ಸಾಗಲು ಅವರ ಮಾತುಗಳು ಸ್ಫೂರ್ತಿ ನೀಡುತ್ತಿದೆ. ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ನಿಗ್ರಹಿಸಲು ನಾವು ಸತ್ಯದ ಮಾರ್ಗದಲ್ಲಿ ಸಾಗಲಿದ್ದೇವೆ.
* ಇಂದು ಎಲ್ಲ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ರಾಜನೀತಿಯಲ್ಲಿ ಪಾರದರ್ಶಕತೆ ತರಬೇಕು. ಮತ್ತು ಅದಕ್ಕಾಗಿ ಸರಿಯಾದ ಕೆಲಸ ಮಾಡಬೇಕು.
* ಹಿರಿಯ ನಾಗರಿಕರಿಗೆ ಹೊಸ ಯೋಜನೆ : ಬ್ಯಾಂಕ್ ನಲ್ಲಿ 7.5 ಲಕ್ಷ ರುಪಾಯಿವರೆಗೆ ಹಿರಿಯರು 10 ವರ್ಷಗಳವರೆಗೆ ಹಣ ಠೇವಣಿ ಇಟ್ಟರೆ 8ರಷ್ಟು ಬಡ್ಡಿದರ ನೀಡಬೇಕು.
* ಗರ್ಭವತಿಯರಿಗೆ ವಿಶೇಷ ಯೋಜನೆ : ಪೌಷ್ಟಿಕ ಆಹಾರಕ್ಕಾಗಿ 6000 ರು. ಆರ್ಥಿಕ ಸಹಾಯ ನೀಡುತ್ತದೆ. ಇದನ್ನು ನೇರವಾಗಿ ಅವರ ಬ್ಯಾಂಕ್ ಅಕೌಂಟಿಗೆ ವರ್ಗಾವಣೆ ಮಾಡಲಾಗುವುದು.
* ಸಣ್ಣ ವರ್ತಕರಿಗೆ ಬ್ಯಾಂಕ್ ಗಳಿಂದ ನೀಡಲಾಗುವ ಸಾಲಕ್ಕೆ ಕೇಂದ್ರವೇ ಸರಕಾರವೇ ಗ್ಯಾರಂಟಿ ನೀಡುತ್ತದೆ. ಅವರಿಗೆ ನೀಡುವ ಸಾಲವನ್ನು ಶೇ.20ರಿಂದ ಶೇ.25ಕ್ಕೆ ಏರಿಸಬೇಕು.
* ಸಹಕಾರಿ ಬ್ಯಾಂಕ್ ಗಳಲ್ಲಿ ರೈತರಿಗೆ ಬಂಪರ್ ಕೊಡುಗೆ. ರುಪೇ ಕಾರ್ಡ್ ಬಳಸಿ ಖರೀದಿಗೆ ಅವಕಾಶ. ಮುಂದಿನ ಮೂರು ದಿನಗಳಲ್ಲಿ 3 ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ ರುಪೇ ಕಾರ್ಡ್ ಆಗಿ ಬದಲಾಯಿಸಲಾಗುವುದು.
* ಪ್ರಧಾನಿ ನಿವಾಸ ಯೋಜನೆಯಡಿಯಲ್ಲಿ ಬಡವರು ನಗರ ಪ್ರದೇಶದಲ್ಲಿ ಮನೆ ಕಟ್ಟಲು 9 ಲಕ್ಷ ರು. ಸಾಲವನ್ನು ಶೇ.4ರಷ್ಟು ಬಡ್ಡಿದರದಲ್ಲಿ ರಿಯಾಯಿತಿ ನೀಡಲಾಗುವುದು.
* ಗ್ರಾಮೀಣ ಪ್ರದೇಶದಲ್ಲಿ ಬಡವರು, ಕೆಳಮಧ್ಯಮ ಮತ್ತು ಮಧ್ಯಮ ವರ್ಗದವರು ಹೊಸ ಮನೆ ಕೊಳ್ಳಲು 12 ಲಕ್ಷ ರು. ಸಾಲ ತೆಗೆದುಕೊಂಡವರಿಗೆ 3 ಪ್ರತಿಶತದಷ್ಟು ಬಡ್ಡಿಯಲ್ಲಿ ರಿಯಾಯಿತಿ ದೊರೆಯಲಿದೆ.
* ಈ ಸರಕಾರ ಸಜ್ಜನರ ಪರವಾಗಿದೆ ಮತ್ತು ದುರ್ಜನರು ಸರಿದಾರಿಗೆ ತರಲು ಉಪಯುಕ್ತ ವಾತಾವರಣವನ್ನು ತಯಾರು ಮಾಡಲಿದೆ.
* ಲಾಲ್ ಬಹಾದ್ದೂರ್ ಶಾಸ್ತ್ರೀ, ರಾಮ್ ಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ ಅವರು ಇಂದು ಬದುಕಿದ್ದರೆ ಇಂದು ನಿಜಕ್ಕೂ ಹೆಮ್ಮೆ ಪಡುತ್ತಿದ್ದರು.
* ದೇಶದಲ್ಲಿ 24 ಲಕ್ಷ ಜನರ ಮಾತ್ರ ಆದಾಯ ತಿಂಗಳಿಗೆ 10 ಲಕ್ಷಕ್ಕಿಂತ ಹೆಚ್ಚಿದೆ ಎಂದು ಘೋಷಿಸಿದ್ದಾರೆ. ಇವರ ಸಂಖ್ಯೆ ಇಷ್ಟೇ ಇರಬೇಕೆ? ಈ ಯುದ್ಧದಿಂದಾಗಿ ಇವರ ಸಂಖ್ಯೆ ಇನ್ನೂ ಹೆಚ್ಚುತ್ತದೆ.
* ಭ್ರಷ್ಟಾಚಾರ, ಕಪ್ಪುಹಣ ಮತ್ತು ನಕಲಿ ನೋಟಿನ ವಿರುದ್ಧ ಸಾರಲಾಗಿರುವ ಯುದ್ಧದಿಂದ ನೀವು ಒಂದು ಹೆಜ್ಜೆಯನ್ನು ಹಿಂದಿಡಲು ನೀವು ಇಚ್ಛಿಸುವುದಿಲ್ಲ. ಇದು ನನಗೆ ನೀವು ಕೊಟ್ಟಿರುವ ಆಶೀರ್ವಾದ.
* ನಗದಿನ ಅಭಾವ ಆರ್ಥಿಕ ವ್ಯವಸ್ಥೆಯ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಆದರೆ, ಇದೇ ನಗದು ಆರ್ಥಿಕ ವ್ಯವಸ್ಥೆಯ ಭಾಗವಾಗಿದ್ದರೆ ದೇಶದ ಅಭಿವೃದ್ಧಿಯಾಗುತ್ತದೆ.
* ಭ್ರಷ್ಟಾಚಾರ, ಕಪ್ಪು ಹಣದಿಂದಾಗಿ ಪ್ರಾಮಾಣಿಕ ವ್ಯಕ್ತಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಇದರಿಂದ ಮುಕ್ತಿ ಹೇಗೆ ಎಂದು ದಾರಿ ಹುಡುಕುತ್ತಿದ್ದಾರೆ.
* ದೀಪಾವಳಿಯ ನಂತರ ಕಪ್ಪು ಹಣಕ್ಕೆ ಕಡಿವಾಣ ಹಾಕಲು ನಮ್ಮ ಸರಕಾರ ಅತ್ಯಂತ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತು. ಇದರ ಲಾಭ ಮುಂದಿನ ದಿನಗಳಲ್ಲಿ ಜನರಿಗೆ ಲಭಿಸಲಿದೆ.
* ಭಾರತದ ಭವಿಷ್ಯಕ್ಕಾಗಿ ಜನರು ಸಂಕಷ್ಟ ಎದುರಿಸಿದ್ದಾರೆ. ಸಂಕಲ್ಪ, ಧೈರ್ಯದೊಂದಿಗೆ ಭ್ರಷ್ಟಾಚಾರದ ವಿರುದ್ಧ, ಕಪ್ಪು ಹಣದ ವಿರುದ್ಧ ಯುದ್ಧ ಸಾರಿದ್ದಾರೆ.
* ನನಗೆ ಗೊತ್ತಿದೆ ತಮ್ಮ ಹಣವನ್ನು ಬ್ಯಾಂಕಿನಿಂದ ಹಿಂತೆಗೆದುಕೊಳ್ಳಲು ಜನರು ಗಂಟೆಗಟ್ಟಲೆ ಕ್ಯೂ ನಿಂತಿದ್ದಾರೆ. ತಮ್ಮ ಸಂಕಷ್ಟಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ.