ಅರ್ಧ ಆಸ್ತಿ ದಾನ ಮಾಡಲು ನಂದನ್ ನಿಲೇಕಣಿ ದಂಪತಿ ನಿರ್ಧಾರ
Recommended Video

ಬೆಂಗಳೂರು, ನವೆಂಬರ್ 21: ತಮ್ಮ ದುಡಿಮೆಯ ಅರ್ಧ ಭಾಗ ಆಸ್ತಿಯನ್ನು ದಾನ ಮಾಡಲು ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಮತ್ತು ರೋಹಿಣಿ ನಿಲೇಕಣಿ ದಂಪತಿ ನಿರ್ಧರಿಸಿದ್ದಾರೆ.
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಮಿಲಿಂದಾ ಗೇಟ್ಸ್ ಅವರ ಗಿವಿಂಗ್ ಪ್ಲೆಡ್ಜ್ ಅಭಿಯಾನದಡಿ ತಮ್ಮ ಆಸ್ತಿ ದಾನ ಮಾಡಲು ನಿಲೇಕಣಿ ದಂಪತಿಗಳು ನಿರ್ಧರಿಸಿದ್ದಾರೆ.
ನಿಲೇಕಣಿ ದಂಪತಿಗಳು ಸುಮಾರು 11,000 ಕೋಟಿ ಆಸ್ತಿ ಹೊಂದಿದ್ದು ಇದರಲ್ಲಿ ಅರ್ಧ ಪಾಲು ಅಂದರೆ ಸುಮಾರು 5,500 ಕೋಟಿ ರೂಪಾಯಿಗಳನ್ನು ದಾನ ಮಾಡಲಿದ್ದಾರೆ.
ಈಗಾಗಲೇ ವಿಪ್ರೋಂ ಅಧ್ಯಕ್ಷ ಅಜೀಂ ಪ್ರೇಮ್ ಜೀ, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ, ಶೋಭಾ ಲಿಮಿಟೆಡ್ ಅಧ್ಯಕ್ಷ ಪಿ.ಎನ್.ಸಿ ಮೆನನ್ ಇದೇ ರೀತಿ ತಮ್ಮ ಆಸ್ತಿಯ ಅರ್ಧ ಭಾಗವನ್ನು ಲೋಕೋಪಯೋಗಿ ಕಾರ್ಯಕ್ಕೆ ವಿನಿಯೋಗಿಸಲು ತೀರ್ಮಾನಿಸಿದ್ದಾರೆ.
ತಮ್ಮ ನಿರ್ಧಾರದ ಬಗ್ಗೆ ಹೇಳಿಕೆ ನೀಡಿರುವ ನಿಲೇಕಣಿ ದಂಪತಿ, "ಹಲವು ದೇಶಗಳಲ್ಲಿ ಅಸಮಾನತೆ ತೀವ್ರವಾಗಿ ಹೆಚ್ಚಾಗುತ್ತಿದೆ. ಈ ಅಂತರ್ ಸಂಪರ್ಕದ ಜಗತ್ತಲ್ಲಿ ಯುವಕರು ಮತ್ತು ನಿರಂತರ ದುಡಿಮೆ ಮಾಡುವವರನ್ನು ನಾವು ನೋಡುತ್ತೇವೆ. ಅವರಿಗೆ ತಮ್ಮ ಭವಿಷ್ಯದ ಬಗ್ಗೆ ಖಚಿತತೆಯಿಲ್ಲ. ಅವರೆಲ್ಲಾ ಹೆಚ್ಚು ಬಯಸುತ್ತಾರೆ. ಆದರೆ ತುಂಬಾ ಕಡಿಮೆ ಪಡೆಯುತ್ತಾರೆ. ನಾವು ವಿರೋಧಾಭಾಸದ, ವಿಭಜನೆಯ ರಾಜಕೀಯ ವಿಚಾರಗಳನ್ನು ನೋಡುತ್ತಿದ್ದೇವೆ. ಇದರಿಂದ ಪ್ರಪಂಚಕ್ಕೆ ಉಸಿರುಗಟ್ಟಿದಂತೆ ಭಾಸವಾಗುತ್ತಿದೆ," ಎಂದು ವಿಶ್ಲೇಷಿಸಿದ್ದಾರೆ.
"ಈ ಸಮಯದಲ್ಲಿ ನಾವು ಏನು ಮಾಡಬೇಕು? ಈ ಪ್ರಶ್ನೆಯನ್ನು ಪ್ರತಿಯೊಬ್ಬ ನಾಗರಿಕರೂ ಕೇಳಬೇಕಾಗಿದೆ. ನಮ್ಮ ಎಲ್ಲಾ ಬೇಡಿಕೆಗಳನ್ನು ಮೀರಿದ ಸಂಪತ್ತನ್ನು ಹೊಂದಿರುವವರು ನಮ್ಮನ್ನು ನಾವು ತೀವ್ರವಾಗಿ ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಹೊಣೆಗಾರಿಕೆಯೊಂದಿಗೆ ಈ ಸಂಪತ್ತು ನಮ್ಮಲ್ಲಿಗೆ ಬಂದಿದೆ. ಮತ್ತು ಇದಕ್ಕೆ ಮಹತ್ತರ ಸಾರ್ವಜನಿಕ ಹಿತಾಸಕ್ತಿಯಿದೆ. ಹಾಗಾಗಿ ಆಗರ್ಭ ಶ್ರೀಮಂತರು ಏನು ಮಾಡಬೇಕು? " ಎಂದು ಅವರು ತಮ್ಮಲ್ಲೇ ಪ್ರಶ್ನಿಸಿಕೊಂಡಿದ್ದಾರೆ.
|
ಬಿಲ್ ಮತ್ತು ಮಿಲಿಂದಾ ಗೇಟ್ಸ್ ಗೆ ಧನ್ಯವಾದ
"ಭಗವದ್ಗೀತೆಯ ಶ್ಲೋಕ 'ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ
ಮಾ ಕರ್ಮಫಲ ಹೇತುರ್ಭೂ ಮಾ ತೇ ಸಂಗೋಸ್ತ್ವ ಕರ್ಮಣಿ' ಎನ್ನುವಂತೆ ಅನೇಕ ಜನರಿಗೆ ತಮ್ಮ ನೈತಿಕ ಆಕಾಂಕ್ಷೆಗಳನ್ನು ಅರಿತುಕೊಳ್ಳಲು ನೆರವಾದ ಈ ಅನನ್ಯ ಅವಕಾಶವನ್ನು ಸೃಷ್ಟಿಸಿದ ಬಿಲ್ ಮತ್ತು ಮಿಲಿಂದಾ ಗೇಟ್ಸ್ ಗೆ ನಾವು ಧನ್ಯವಾದ ಸಲ್ಲಿಸುತ್ತೇವೆ," ಎಂದು ನಿಲೇಕಣಿ ದಂಪತಿ ಹೇಳಿದ್ದಾರೆ.
|
ಬಿಲ್ ಗೇಟ್ಸ್ ಸ್ವಾಗತ
ನಿಲೇಕಣಿ ದಂಪತಿಯ ದಾನ ನೀಡುವ ತೀರ್ಮಾನವನ್ನು ಬಿಲ್ ಗೇಟ್ಸ್ ಸ್ವಾಗತಿಸಿದ್ದಾರೆ. "ತಮ್ಮ ಉದ್ಯಮಶೀಲತೆಯ ಉತ್ಸಾಹವನ್ನು ನಂದನ್ ನಿಲೇಕಣಿ ಅವರು ಲೋಕೋಪಕಾರಕ್ಕೆ ದಾನ ನೀಡಿದ್ದು ನನ್ನನ್ನು ಆಚ್ಚರಿಗೊಳಿಸಿದೆ. ಅವರನ್ನು ಮತ್ತು ಅವರ ಪತ್ನಿ ರೋಹಿಣಿಯನ್ನು ಗಿವಿಂಗ್ ಪ್ಲೆಡ್ಜ್ ಗೆ ಸ್ವಾಗತಿಸಲು ನಾನು ಖುಷಿ ಪಡುತ್ತೇನೆ," ಎಂದು ಹೇಳಿದ್ದಾರೆ.

ಈ ಹಿಂದೆಯೂ ದಾನ ನೀಡಿದ್ದಾರೆ ನಿಲೇಕಣಿ
ನೀಲೇಕಣಿ ದಂಪತಿಗಳು ಈ ರೀತಿ ದಾನ ನೀಡುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಐಐಟಿ ಬಾಂಬೆಯಲ್ಲಿ ಹಾಸ್ಟೆಲ್ ಕ್ಯಾಂಪಸ್ ಕಟ್ಟಲು ನಿಲೇಕಣಿ ದಂಪತಿ ಧನ ಸಹಾಯ ಮಾಡಿದ್ದರು. ಇಂಡಿಯನ್ ಇನ್ಸಿಟ್ಯೂಟ್ ಫಾರ್ ಹ್ಯುಮನ್ ಸೆಟಲ್ ಮೆಂಟ್ ಎಂಬ ಸಂಸ್ಥೆಯನ್ನೂ ಅವರು ಸ್ಥಾಪಿಸಿದ್ದರು.
ಜತೆಗೆ ಕ್ಯಾನ್ಸರ್ ಸಂಶೋಧನೆಗೆಲ್ಲಾ ಧನ ಸಹಾಯವನ್ನು ಮಾಡಿದ್ದಾರೆ. ಇದೀಗ ಗಿವಿಂಗ್ ಪ್ಲೆಡ್ಜ್ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.
|
ನಿಲೇಕಣಿ ನಿರ್ಧಾರಕ್ಕೆ ಮೆಚ್ಚುಗೆ
ನಿಲೇಕಣಿ ದಂಪತಿ ನಿರ್ಧಾರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, "ನಂದನ್ ನಿಲೇಕಣಿ ಮತ್ತು ರೋಹಿಣಿ ಅವದ್ದು ಸ್ಪೂರ್ತಿದಾಯಕ ನಿರ್ಧಾರ. ಏರುತ್ತಿರುವ ಅಸಮಾನತೆಗಳನ್ನು ಕಡಿಮೆ ಮಾಡಲು ಮತ್ತು ಸಮ ಸಮಾಜವನ್ನು ಸೃಷ್ಟಿಸಲು, ಇದು ನಿಜವಾಗಿಯೂ ಉಪಯುಕ್ತವಾಗಿದೆ," ಎಂದು ಹೇಳಿದ್ದಾರೆ.
|
ಸುರೇಶ್ ಕುಮಾರ್ ಮೆಚ್ಚುಗೆ
"ತಮ್ಮ ಸಂಪತ್ತಿನ ಅರ್ಧ ಭಾಗವನ್ನು ( ಸುಮಾರು 5,525ಕೋಟಿ) ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ದಾನ ಮಾಡಲು ನಿರ್ಧರಿಸಿರುವ ನಿಲೇಕಣಿ ದಂಪತಿಗಳಿಗೆ ದೊಡ್ಡ ಸಲ್ಯೂಟ್," ಎಂದು ಬಿಜೆಪಿ ನಾಯಕ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications