ಭಾರತದಲ್ಲಿ ಮುಸ್ಲಿಮರು ಭಯಪಡಬೇಕಿಲ್ಲ, ಆದರೆ..: RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ನಾಗಪುರ, ಜನವರಿ 11: ಹಿಂದೂ ಸಮಾಜವು ಸಾವಿರಾರು ವರ್ಷಗಳಿಂದ ಸಂಘರ್ಷಗಳನ್ನು ಎದುರಿಸುತ್ತಲೇ ಬಂದಿದೆ. ಆದರೆ, ಈಗ ಭಾರತ ಸೇರಿದಂತೆ ಇತರೆಲ್ಲೆಡೆ ಹಿಂದೂಗಳಲ್ಲಿ ಹೊಸ ಆಕ್ರಮಣಶೀಲತೆ ಕಂಡುಬರುತ್ತಿದೆ. ಸಂಘದ ಬೆಂಬಲದೊಂದಿಗೆ ಹಿಂದುಗಳು ಎಚ್ಚರಗೊಂಡಿದ್ದಾರೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಈ ವಿಚಾರವಾಗಿ ಆರ್ಎಸ್ಎಸ್ ಮುಖವಾಣಿಗಳಾದ ಆರ್ಗನೈಸರ್ ಮತ್ತು ಪಾಂಚಜನ್ಯಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಆರ್ಗನೈಸರ್ ಸಂಪಾದಕ ಪ್ರಫುಲ್ಲ ಕೇತ್ಕರ್ ಮತ್ತು ಪಾಂಚಜನ್ಯ ಸಂಪಾದಕ ಹಿತೇಶ್ ಶಂಕರ್ ಸಂದರ್ಶನ ನಡೆಸಿದ್ದಾರೆ.
'ನೀವು ನೋಡಿ, ಹಿಂದೂ ಸಮಾಜವು 1,000 ವರ್ಷಗಳಿಂದ ಸಂಘರ್ಷದಲ್ಲಿದೆ. ಈ ಹೋರಾಟವು ವಿದೇಶಿ ಆಕ್ರಮಣಗಳು, ವಿದೇಶಿ ಪ್ರಭಾವಗಳು ಮತ್ತು ವಿದೇಶಿ ಪಿತೂರಿಗಳ ವಿರುದ್ಧ ನಡೆಯುತ್ತಿದೆ. ಸಂಘವು ಈ ಕಾರಣಕ್ಕೆ ತನ್ನ ಬೆಂಬಲವನ್ನು ಹಿಂದೂಗಳಿಗೆ ನೀಡಿದೆ. ಈ ಬಗ್ಗೆ ನಾವು ಮಾತನಾಡುತ್ತಲೇ ಬಂದಿದ್ದೇವೆ. ಇವೆಲ್ಲವುಗಳಿಂದಾಗಿ ಹಿಂದೂ ಸಮಾಜವು ಜಾಗೃತಗೊಂಡಿದೆ. ಯುದ್ಧದಲ್ಲಿರುವವರು ಆಕ್ರಮಣಕಾರಿಯಾಗಿರುವುದು ಸಹಜ' ಎಂದು ಭಾಗವತ್ ಹೇಳಿದ್ದಾರೆ.
ಹಿಂದೂ ಸಮಾಜವು ಮತ್ತೊಂದು ಯುದ್ಧದ ಮಧ್ಯೆ ಇದೆ ಎಂದು ಪ್ರತಿಪಾದಿಸಿದ ಭಾಗವತ್, 'ಈ ಯುದ್ಧವು ಹೊರಗಿನ ಶತ್ರುಗಳ ವಿರುದ್ಧ ಅಲ್ಲ. ಆದರೆ ಒಳಗಿನ ಶತ್ರುಗಳ ವಿರುದ್ಧ. ಹಾಗಾಗಿ ಹಿಂದೂ ಸಮಾಜ, ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕೃತಿಯನ್ನು ರಕ್ಷಿಸಲು ಯುದ್ಧ ನಡೆಯುತ್ತಿದೆ. ವಿದೇಶಿ ಆಕ್ರಮಣಕಾರರು ಈಗ ಇಲ್ಲ. ಆದರೆ ವಿದೇಶಿ ಪ್ರಭಾವಗಳು ಮತ್ತು ವಿದೇಶಿ ಪಿತೂರಿಗಳು ಮುಂದುವರೆದಿದೆ. ಇದು ಯುದ್ಧವಾಗಿರುವುದರಿಂದ, ಜನರು ಅತಿಯಾದ ಉತ್ಸಾಹವನ್ನು ಪಡೆಯುವ ಸಾಧ್ಯತೆಯಿದೆ. ಇದು ಅಪೇಕ್ಷಣೀಯವಲ್ಲದಿದ್ದರೂ, ಇನ್ನೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಲಾಗುತ್ತಿದೆ' ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಭಯವಿಲ್ಲ. ಆದರೆ ಅವರು ತಮ್ಮ ಶ್ರೇಷ್ಠತೆಯ ಪ್ರತಿಪಾದನೆಯನ್ನು ಬಿಡಬೇಕು ಎಂದು ಭಾಗವತ್ ಹೇಳಿದ್ದಾರೆ.
'ಸರಳ ಸತ್ಯ ಇದು. ಹಿಂದೂಸ್ಥಾನವು ಹಿಂದೂಸ್ಥಾನವಾಗಿ ಉಳಿಯಬೇಕು. ಇಂದು ಭಾರತದಲ್ಲಿ ವಾಸಿಸುವ ಮುಸ್ಲಿಮರಿಗೆ ಯಾವುದೇ ಹಾನಿ ಇಲ್ಲ. ಅವರು ತಮ್ಮ ನಂಬಿಕೆಗೆ ಅಂಟಿಕೊಳ್ಳಲು ಬಯಸಿದರೆ, ಹಾಗೇಯೇ ಮಾಡಬಹುದು. ಅವರು ತಮ್ಮ ಪೂರ್ವಜರ ನಂಬಿಕೆಗೆ ಮರಳಲು ಬಯಸಿದರೆ, ಅದನ್ನೂ ಮಾಡಬಹುದು. ಇದು ಸಂಪೂರ್ಣವಾಗಿ ಅವರ ಆಯ್ಕೆಯಾಗಿದೆ. ಹಿಂದೂಗಳಲ್ಲಿ ಅಂತಹ ಹಠವಿಲ್ಲ. ಇಸ್ಲಾಮಿನ ಜನರು ಭಯಪಡುವ ಅಗತ್ಯವಿಲ್ಲ. ಆದರೆ ಅದೇ ಸಮಯದಲ್ಲಿ, ಮುಸ್ಲಿಮರು ತಮ್ಮ ಶ್ರೇಷ್ಠತೆಯ ಪ್ರತಿಪಾದನೆಯನ್ನು ತ್ಯಜಿಸಬೇಕು' ಎಂದು ಅವರು ತಿಳಿಸಿದ್ದಾರೆ.
'ನಾವು ಉತ್ಕೃಷ್ಟ ಜನಾಂಗದವರು. ನಾವು ಒಮ್ಮೆ ಈ ಭೂಮಿಯನ್ನು ಆಳಿದ್ದೇವೆ. ಅದನ್ನು ಮತ್ತೊಮ್ಮೆ ಆಳುತ್ತೇವೆ. ನಮ್ಮ ದಾರಿ ಮಾತ್ರ ಸರಿ, ಉಳಿದವರೆಲ್ಲರೂ ತಪ್ಪು. ನಾವು ವಿಭಿನ್ನವಾಗಿದ್ದೇವೆ, ಆದ್ದರಿಂದ ನಾವು ಹಾಗೆ ಮುಂದುವರಿಯುತ್ತೇವೆ. ನಾವು ಒಟ್ಟಿಗೆ ಇರಲು ಸಾಧ್ಯವಿಲ್ಲ ಎನ್ನುವಂತಹ ಭಾವನೆಗಳನ್ನು ಅವರು (ಮುಸ್ಲಿಮರು) ಬಿಡಬೇಕು' ಎಂದು ಹೇಳಿದ್ದಾರೆ.
ಭಾಗವತ್ ಅವರು LGBTQ ಹಕ್ಕುಗಳ ವಿಷಯವನ್ನು ಪ್ರಸ್ತಾಪಿಸಿದರು. ಅದಕ್ಕೆ ಸಂಘದ ಬೆಂಬಲವಿದೆ ಎಂದು ತಿಳಿಸಿದ್ದಾರೆ.
'ಈ ಜನರು (LGBTQ) ಸಹ ಬದುಕುವ ಹಕ್ಕನ್ನು ಹೊಂದಿದ್ದಾರೆ. ನಾವು ಅವರಿಗೆ ಸಾಮಾಜಿಕ ಒಪ್ಪಿಗೆಯನ್ನು ನೀಡಿದ್ದೇವೆ. ಅದಕ್ಕೆ ಒಂದು ಮಾರ್ಗ ಕಂಡುಕೊಂಡಿದ್ದೇವೆ. ಅವರು ಸಹ ಬದುಕುವ ಹಕ್ಕನ್ನು ಹೊಂದಿರುವ ಮನುಷ್ಯರು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೇವೆ. ನಮ್ಮಲ್ಲಿ ಟ್ರಾನ್ಸ್ಜೆಂಡರ್ ಸಮುದಾಯವಿದೆ. ನಾವು ಅದನ್ನು ಸಮಸ್ಯೆಯಾಗಿ ನೋಡಿಲ್ಲ. ಅವರಿಗೆ ಒಂದು ಪಂಗಡ ಮತ್ತು ಅವರದೇ ಆದ ದೇವತೆಗಳಿವೆ. ಅವರದೇ ಆದ ಮಹಾಮಂಡಲೇಶ್ವರವೂ ಇದೆ. ಕುಂಭದ ಸಮಯದಲ್ಲಿ, ಅವರಿಗೆ ವಿಶೇಷ ಸ್ಥಾನವನ್ನು ನೀಡಲಾಗುತ್ತದೆ. ಅವರು ನಮ್ಮ ದೈನಂದಿನ ಜೀವನದ ಭಾಗವಾಗಿದ್ದಾರೆ' ಎಂದು ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಎಲ್ಜಿಬಿಟಿಕ್ಯು ಸಮುದಾಯದವರು ತಮ್ಮದೇ ಆದ ಖಾಸಗಿ ಜಾಗವನ್ನು ಹೊಂದಲು ಬಯಸುತ್ತಾರೆ. ಅವರೂ ಸಮಾಜದ ಒಂದು ಭಾಗವೆಂದು ಭಾವಿಸಬೇಕೆಂದು ಭಾಗವತ್ ಹೇಳಿದ್ದಾರೆ.
'ಇದು ತುಂಬಾ ಸರಳವಾದ ಸಮಸ್ಯೆಯಾಗಿದೆ. ನಾವು ಈ ದೃಷ್ಟಿಕೋನವನ್ನು ಪ್ರಚಾರ ಮಾಡಬೇಕಾಗಿದೆ. ಏಕೆಂದರೆ ಅದನ್ನು ಪರಿಹರಿಸುವ ಎಲ್ಲಾ ಇತರ ಮಾರ್ಗಗಳು ನಿಷ್ಪ್ರಯೋಜಕವಾಗಿರುತ್ತವೆ. ಆದ್ದರಿಂದ, ಅಂತಹ ವಿಷಯಗಳಲ್ಲಿ, ಸಂಘವು ನಮ್ಮ ಸಂಪ್ರದಾಯಗಳಿಂದ ಬಂದಿರುವ ಜ್ಞಾನದ ಮೇಲೆ ಅವಲಂಬಿತವಾಗಿದೆ' ಎಂದು ಅವರು ತಿಳಿಸಿದ್ದಾರೆ.