ಎಮ್ಮೆಗೆ ಡಿಕ್ಕಿ ಹೊಡೆದ ವಂದೇ ಭಾರತ್ ಎಕ್ಸ್ಪ್ರೆಸ್; ಮುಂದೇನಾಯ್ತು ಎಮ್ಮೆಯ ಗತಿ, ರೈಲಿನ ಸ್ಥಿತಿ!?
ಗಾಂಧಿನಗರ, ಅಕ್ಟೋಬರ್ 6: ಭಾರತದಲ್ಲಿ ಇತ್ತೀಚಿಗೆ ಆರಂಭಗೊಂಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಒಂದಿಲ್ಲೊಂದು ರೀತಿಯಲ್ಲಿ ಸುದ್ದಿ ಆಗುತ್ತಿವೆ. ಅದೇ ರೀತಿ ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್ ಸುದ್ದಿ ಮಾಡಿದೆ.
ಗುರುವಾರ ಗುಜರಾತ್ನ ವತ್ವಾ ರೈಲು ನಿಲ್ದಾಣದ ಬಳಿ ಟ್ರ್ಯಾಕ್ನಲ್ಲಿ ಜಾನುವಾರುಗಳಿಗೆ ಡಿಕ್ಕಿ ಹೊಡೆದು ಹಾನಿಯಾಗಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಬೆಳಗ್ಗೆ 11.15ರ ಸುಮಾರಿಗೆ ಈ ಘಟನೆಯು ನಡೆದಿದ್ದು, ಅಪಘಾತದಲ್ಲಿ ನಾಲ್ಕು ಎಮ್ಮೆಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.
ದೇಶದ ಒಟ್ಟು 200 ರೈಲು ನಿಲ್ದಾಣಗಳ ವಿಶ್ವದರ್ಜೆಯ ನವೀಕರಣಕ್ಕೆ ಕೇಂದ್ರ ಮಾಸ್ಟರ್ ಪ್ಲಾನ್!
"ವತ್ವಾ ಬಳಿಯ ಹಾದಿಯಲ್ಲಿ ಮುಂದೆ ಕಾಣಿಸದಂತಹ ಒಂದು ತಿರುವಿನ ಪ್ರದೇಶವಿದ್ದು, ರೈಲು ಈ ವೇಳೆಯಲ್ಲಿ ಸುಮಾರು 100 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಹೀಗಾಗಿ ಎಮ್ಮೆಗೆ ರೈಲು ಡಿಕ್ಕಿ ಹೊಡೆದ ರಭಸಕ್ಕೆ ಫೈಬರ್ನಿಂದ ನಿರ್ಮಿಸಿರುವ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ," ಎಂದು ಅಧಿಕಾರಿಗುಳ ತಿಳಿಸಿದ್ದಾರೆ.
ರೈಲ್ವೆ ಅಧಿಕಾರಿಯು ಈ ಬಗ್ಗೆ ಹೇಳುವುದೇನು?
ಗೈರತ್ಪುರ-ವತ್ವಾ ನಿಲ್ದಾಣದ ನಡುವೆ ಈ ಘಟನೆ ನಡೆದಿದೆ. ರೈಲ್ವೆ ಅಪಘಾತದ ಈ ಘಟನೆಯಲ್ಲಿ ಯಾವುದೇ ಕ್ರಿಯಾತ್ಮಕ ಭಾಗಕ್ಕೆ ಹಾನಿಯಾಗಿಲ್ಲ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ. ಎಮ್ಮೆ ಮೃತದೇಹಗಳನ್ನು ಹಳಿಗಳಿಂದ ಪಕ್ಕಕ್ಕೆ ತೆಗೆದ ನಂತರ ರೈಲು ಯಾವುದೇ ತೊಂದರೆಯಿಲ್ಲದೇ ಚಲಿಸಿ ಗಾಂಧಿನಗರಕ್ಕೆ ಸರಿಯಾದ ಸಮಯಕ್ಕೆ ತಲುಪಿತು. ಇದರ ಬೆನ್ನಲ್ಲೇ ದನಗಳನ್ನು ರೈಲ್ವೆ ಟ್ರ್ಯಾಕ್ ಬಳಿ ಬಿಡದಂತೆ ಹತ್ತಿರದ ಗ್ರಾಮಸ್ಥರಿಗೆ ರೈಲ್ವೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
7 ದಿನದಲ್ಲೇ ಅಪಘಾತಕ್ಕೀಡಾದ ವಂದೇ ಭಾರತ್ ರೈಲು
ಭಾರತೀಯ ರೈಲ್ವೆ ಇಲಾಖೆಯ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಹತ್ವಾಕಾಂಕ್ಷೆಯ ಯೋಜನೆ ಆಗಿದೆ. ಆದರೆ ಈ ಎಕ್ಸ್ಪ್ರೆಸ್ ರೈಲಿನ ಸೇವೆಯನ್ನು ಆರಂಭಿಸಿದ ಏಳು ದಿನದಲ್ಲೇ ಇಂಥದೊಂದು ಅಪಘಾತ ಸಂಭವಿಸಿದೆ. ಎಕ್ಸ್ಪ್ರೆಸ್ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ. ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು ರೈಲ್ವೆ ಇಲಾಖೆಯು ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಲಾಗಿದೆ.
ಗಾಂಧಿನಗರ-ಮುಂಬೈ ಎಕ್ಸ್ಪ್ರೆಸ್ ಶುರುವಾಗಿದ್ದು ಯಾವಾಗ?
ಕಳೆದ ಸೆಪ್ಟೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಗಾಂಧಿನಗರ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಅಂದಿನಿಂದ ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಸಂಚಾರ ಶುರುವಾಯಿತು. ಕಳೆದ ವಾರವಷ್ಟೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅದೇ ರೈಲಿನಲ್ಲಿ ಅಹಮದಾಬಾದ್ನ ಕಲುಪುರ್ ರೈಲು ನಿಲ್ದಾಣಕ್ಕೆ ಪ್ರಯಾಣಿಸಿದ್ದರು.
ವಂದೇ ಭಾರತ್ ಎಕ್ಸ್ಪ್ರೆಸ್ ವಿಶೇಷತೆ ತಿಳಿಯಿರಿ
ವಂದೇ ಭಾರತ್ ಎಕ್ಸ್ಪ್ರೆಸ್ ಅಸಂಖ್ಯಾತ ಉನ್ನತ ತಂತ್ರಜ್ಞಾನವನ್ನು ಹೊಂದಿದೆ. ಈ ರೈಲಿನಲ್ಲಿ ಪ್ರಯಾಣಿಸಿದರೆ ವಿಮಾನದಲ್ಲಿ ಪ್ರಯಾಣಿಸಿದ ಅನುಭವ ಸಿಗುತ್ತದೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಈ ರೈಲು ಗಾಂಧಿನಗರದಿಂದ ಮುಂಬೈ ನಡುವೆ ಮೊದಲು ಕಾರ್ಯಾರಂಭ ಮಾಡಿತು. ಇದು 'ಕವಾಚ್' ತಂತ್ರಜ್ಞಾನವನ್ನು ಹೊಂದಿರುವ ಮೊದಲ ವಂದೇ ಭಾರತ್ ರೈಲು ಆಗಿದೆ. ಇದು ಸ್ವಯಂಚಾಲಿತ ರಕ್ಷಣಾ ವ್ಯವಸ್ಥೆಯಾಗಿದ್ದು, ಎರಡು ರೈಲುಗಳು ಡಿಕ್ಕಿಯಾಗುವುದನ್ನು ತಡೆಯುತ್ತದೆ.