ಉತ್ತರಪ್ರದೇಶದಲ್ಲಿ ಸೈಕಲ್ 'ಬ್ರ್ಯಾಂಡ್'ಗಾಗಿ ಅಪ್ಪ-ಮಕ್ಕಳ ಕಾದಾಟ
ಲಖನೌ, ಜನವರಿ 2: ಸಮಾಜವಾದಿ ಪಕ್ಷದ ಕಚೇರಿ ಹಾಗೂ ಗುರುತಿನ ಮೇಲೆ ಪ್ರಭುತ್ವ ಸಾಧಿಸಲು ಮೇಲಾಟ ಶುರುವಾಗಿದೆ. ಇದು ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಹಾಗೂ ಅಖಿಲೇಶ್ ಮಧ್ಯೆ ನಡೆಯುತ್ತಿರುವ ನಾನಾ-ನೀನಾ ಎಂಬ ಕಾದಾಟ. ಇನ್ನು ಪಕ್ಷದ ಚಿಹ್ನೆ ವಿಚಾರವಾಗಿ ಅಪ್ಪ-ಮಕ್ಕಳು ಸೋಮವಾರ ಚುನಾವಣೆ ಆಯೋಗದ ಬಳಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.
ಸಮಾಜವಾದಿ ಪಕ್ಷ ಎರಡು ಗುಂಪಾಗಿದ್ದು, ಒಂದರ ನೇತೃತ್ವವನ್ನು ಮುಲಾಯಂ, ಮತ್ತೊಂದರ ಮುಂದಾಳತ್ವ ಅಖಿಲೇಶ್ ವಹಿಸಲಿದ್ದಾರೆ. ಇಬ್ಬರೂ ತಮ್ಮದೇ ನಿಜವಾದ ಸಮಾಜವಾದಿ ಪಕ್ಷ ಎಂದು, ಅದನ್ನು ಬೆಂಬಲಿಸುವಂಥ ಸಾಕ್ಷ್ಯಗಳನ್ನು ಒದಗಿಸುವ ಸಾಧ್ಯತೆ ಇದೆ. ಅಖಿಲೇಶ್ ಗುಂಪಿನಿಂದ ರಾಮ್ ಗೋಪಾಲ್ ಯಾದವ್ ಹಾಗೂ ಮತ್ತೊಂದು ಗುಂಪಿನಿಂದ ಸ್ವತಃ ಮುಲಾಯಂ ಚುನಾವಣೆ ಆಯೋಗದ ಬಳಿಗೆ ತೆರಳಲಿದ್ದಾರೆ.[ಅಖಿಲೇಶ್ ಉಚ್ಚಾಟನೆಯ ಹಿಂದೆ ಮುಲಾಯಂ ಎರಡನೇ ಕುಟುಂಬದ ಕೈವಾಡ?]

ಇನ್ನು ಪಕ್ಷದ ಸ್ಥಾಪಕ ಮುಲಾಯಂರ ಜತೆಗೆ ಸಹೋದರ ಶಿವಪಾಲ್ ಸಿಂಗ್ ಯಾದವ್, ರಾಜ್ಯಸಭಾ ಸಂಸದ ಅಮರ್ ಸಿಂಗ್ ತೆರಳಲಿದ್ದಾರೆ. ಈಚೆಗೆ ಅಖಿಲೇಶ್ ಯಾದವ್ ರನ್ನು ದಿಢೀರ್ ಆಗಿ ಎಸ್ ಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಿಸಲಾಯಿತು. ಅದಾದ ಮರು ದಿನ ಅಂದರೆ ಭಾನುವಾರ ಶಿವಪಾಲ್ ಸಿಂಗ್ ರನ್ನು ಬದಲಿಸಿ, ಅಖಿಲೇಶ್ ಆಪ್ತ ನರೇಶ್ ರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು.
ಆದರೆ, ಸಮಾವೇಶವನ್ನೇ ಕಾನೂನುಬಾಹಿರ ಹಾಗೂ ಅಸಾಂವಿಧಾನಿಕ ಎಂದು ಘೋಷಿಸಿದ ಮುಲಾಯಂ ಸಿಂಗ್, ಭಾನುವಾರ ಅಮರ್ ಸಿಂಗ್ ರನ್ನು ಪಕ್ಷದಿಂದ ಉಚ್ಚಾಟಿಸಿದ್ದರು. ಈ ಮಧ್ಯೆ ಭಾನುವಾರ ರಾತ್ರಿ ಮುಲಾಯಂ ಸಿಂಗ್ ಅವರಿಗೆ ರಕ್ತದೊತ್ತಡ ಹೆಚ್ಚಾಗಿ, ವೈದ್ಯರ ತಂಡವೊಂದು ಪರೀಕ್ಷೆ ಸಹ ಮಾಡಿದೆ.[ಅಖಿಲೇಶ್ ಮುಂದಿರುವ ಮಾರ್ಗೋಪಾಯಗಳೇನು?]

ಅಖಿಲೇಶ್ ತಂಡವು ಚುನಾವಣೆ ಸಮಿತಿಗೆ ವಿಡಿಯೋ, ದಾಖಲೆಗಳು ಹಾಗೂ ಕನಿಷ್ಠ ಶೇ 40ರಷ್ಟು ಪಕ್ಷದ ಕಾರ್ಯಕರ್ತರು (ತುರ್ತು ಸಭೆ ನಡೆಸಲು ಬೇಕಾದ ಸಂಖ್ಯಾಬಲ) ಸಹಿ ಹಾಕಿರುವ ನಿರ್ಣಯವನ್ನು ತೋರಿಸುವ ಸಾಧ್ಯತೆ ಇದೆ. ಇಪ್ಪತ್ತೈದು ವರ್ಷಗಳ ಹಿಂದೆ ಪಕ್ಷದ ಸಂವಿಧಾನ ರಚನೆ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಮ್ ಗೋಪಾಲ್ ಯಾದವ್ ರ ಚಾಕಚಕ್ಯತೆ ಮೇಲೆ ಈಗ ಎಲ್ಲವೂ ಅವಲಂಬನೆಯಾಗಿದೆ.
ಇದೇ ವೇಳೆ ಮುಲಾಯಂ ಆಪ್ತ ಅಮರ್ ಸಿಂಗ್ ತನ್ನ ಸಂಪರ್ಕವನ್ನೆಲ್ಲ ಬಳಸಿ, ನೇತಾಜಿ ಪರವಾಗಿ ಹೋರಾಡಲು ಕಾನೂನು ಹಾಗೂ ಸಂವಿಧಾನ ತಜ್ಞರ ಹುಡುಕಾಟದಲ್ಲಿದ್ದಾರೆ. ಸದ್ಯಕ್ಕೆ ಎಲ್ಲರ ಕಣ್ಣು ಚುನಾವಣೆ ಆಯೋಗದ ಮೇಲಿದೆ.(ಐಎಎನ್ ಎಸ್)












Click it and Unblock the Notifications