ಪಕ್ಷ ವಿರೋಧಿ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಕೀರ್ತಿ ಅಜಾದ್ ಅಮಾನತು
ಬೆಂಗಳೂರು, ಡಿ. 23: ಮಾಜಿ ಕ್ರಿಕೆಟರ್, ಹಾಲಿ ಸಂಸದ ಕೀರ್ತಿ ಅಜಾದ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಪಕ್ಷದಿಂದ ಬುಧವಾರ ಉಚ್ಚಾಟನೆ ಮಾಡಲಾಗಿದೆ. ಕೀರ್ತಿ ಅಜಾದ್ ಅವರು ಡಿಡಿಸಿಎ ಹಗರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ವಿಡಿಯೋ ಸಾಕ್ಷ್ಯ ಬಹಿರಂಗಪಡಿಸಿದ್ದರು.
ದರ್ಭಾಂಗ ಕ್ಷೇತ್ರದ ಸಂಸದ ಕೀರ್ತಿ ಅಜಾದ್ ಅವರು ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಆರೋಪ ಮಾಡಿ ದೆಲ್ಲಿ ಹಾಗೂ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಅವ್ಯವಹಾರದ ಬಗ್ಗೆ ವಿಕಿಲೀಕ್ಸ್ ಇಂಡಿಯಾ ಸಂಗ್ರಹಿಸಿದ ವಿಡಿಯೋ ಸಾಕ್ಷ್ಯವನ್ನು ಕಳೆದ ಭಾನುವಾರ ಪ್ರದರ್ಶಿಸಿದ್ದರು. [ಡಿಡಿಸಿಎ ಭ್ರಷ್ಟಾಚಾರ: ವಿಡಿಯೋ ಸಾಕ್ಷ್ಯ ಬಹಿರಂಗ]

ಸುಮಾರು 28 ನಿಮಿಷಗಳ ವಿಡಿಯೋ ಐದು ಭಾಗಗಳಲ್ಲಿದ್ದು, ಡಿಡಿಸಿಎ ಉಪ ಗುತ್ತಿಗೆ, ಅವ್ಯವಹಾರಗಳ ಬಗ್ಗೆ ವಿವರಣೆ ಇದೆ. Wikileaks4India ನಿಂದ ಖಚಿತ ಮಾಹಿತಿ ಪಡೆದು ಈ ವಿಡಿಯೋ ತಯಾರಿಸಲಾಗಿದೆ.
ಇದರಲ್ಲಿ ನಕಲಿ ಕಂಪನಿಗಳು, ಉಪ ಗುತ್ತಿಗೆ ಅಕ್ರಮದ ಬಗ್ಗೆ ಹೇಳಲಾಗಿದೆ. ಕೋಟಿಗಟ್ಟಲೆ ಪಡೆದ ಕಂಪನಿಗಳಿಗೆ ಗುತ್ತಿಗೆ ಕೆಲಸ ನೀಡಿದ ಬಗ್ಗೆ ದಾಖಲೆಗಳೇ ಇಲ್ಲ. ಸುಮಾರು 14 ನಕಲಿ ಕಂಪನಿಗಳ ವಿರುದ್ಧ ಭ್ರಷ್ಟಾಚಾರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದರು.
ಆದರೆ, ಅರುಣ್ ಜೇಟ್ಲಿ ಅವರು ಅಧಿಕಾರದಲ್ಲಿದ್ದ 13 ವರ್ಷಗಳ ಯಾವುದೇ ಅಕ್ರಮ ನಡೆದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕ್ರಿಕೆಟರ್ ಗಳಾದ ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಮುಂತಾದವರು ಬೆಂಬಲ ವ್ಯಕ್ತಪಡಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಹೇಳಿಕೆ ನೀಡಿದ ಅರವಿಂದ್ ಕೇಜ್ರಿವಾಲ್ ಹಾಗೂ ಐವರ ವಿರುದ್ಧ ಜೇಟ್ಲಿ ಅವರು 10 ಕೋಟಿ ರು ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications