ಕರಾರುವಾಕ್ಕಾಗಿ ಹೊರಬಿದ್ದ 2016ರಲ್ಲಿ ನುಡಿಯಲಾದ ಭವಿಷ್ಯಗಳು!
ಕೋಡಿಮಠ, ಚಾಣಕ್ಯ ಮೀನು, ಕಾಲಜ್ಞಾನಿ ನಾಸ್ಟ್ರಡಾಮಸ್ ಭವಿಷ್ಯ ಸೇರಿದಂತೆ ಹಲವು ಭವಿಷ್ಯವಾಣಿಗಳು 2016ರಲ್ಲಿ ನುಡಿಯಲಾಗಿತ್ತು. ಅದರ ಸತ್ಯಾಸತ್ಯತೆಯ ಬಗ್ಗೆ ಒಂದು ವರದಿ.
ಜ್ಯೋತಿಷ್ಯ, ಭವಿಷ್ಯ, ನುಡಿಗಟ್ಟು, ಕಾರ್ಣಿಕ ಮುಂತಾದವು ಒಂದು ರೀತಿಯ ಮೂಢನಂಬಿಕೆ ಎನ್ನುವವರ ನಡುವೆಯೂ, ಜನರು ಇದರ ಪ್ರಭಾವಕ್ಕೆ ಒಳಗಾಗುತ್ತಿರುವುದೇ ಜಾಸ್ತಿ.
ಜ್ಯೋತಿಷ್ಯ, ಭವಿಷ್ಯದ ಹೆಸರಿನಲ್ಲಿ ಹಲವರು ಜನರಿಗೆ ಮಂಕುಬೂದಿ ಎರಚುತ್ತಿರುವ, ಲೈಂಗಿಕ ಕಿರುಕುಳ ನೀಡುತ್ತಿರುವ ಘಟನೆಗಳು ನಮ್ಮ ಮುಂದಿದ್ದರೂ, ಇದನ್ನು ನಂಬುವವರ ಸಂಖ್ಯೆ ಕಮ್ಮಿಯೇನೂ ಆಗಿಲ್ಲ, ಆಗುತ್ತಲೂ ಇಲ್ಲ.
ಕೋಡಿಮಠದ ಶ್ರೀಗಳು, ಮೈಲಾರ ಲಿಂಗೇಶ್ವರನ ಸನ್ನಿಧಾನದಲ್ಲಿ ನುಡಿಯಲಾದ ಕಾರ್ಣಿಕ, ಮಾತಾ ಮಾಣಿಕೇಶ್ವರಿಯವರಿಂದ ಆದಿಯಾಗಿ, ನಾಸ್ಟ್ರಾಡಾಂ, ಮೀನು, ಮಂಗನವರೆಗೆ ಕಳೆದ ವರ್ಷ (2016) ವಿವಿಧ ಭವಿಷ್ಯವಾಣಿ ಹೊರಬಿದ್ದಿತ್ತು.
ಇದರಲ್ಲಿ ನುಡಿಯಲಾದ ಹಲವು ಭವಿಷ್ಯಗಳು ಕರಾರುವಕ್ಕಾಗಿ ಹೊರಬಿದ್ದಿರುವುದು ಗಮನಿಸಬೇಕಾದ ಅಂಶ. ಅಮೆರಿಕಾ ಅಧ್ಯಕ್ಷೀಯ ಚುನಾವಣೆ, ನೈಸರ್ಗಿಕ ವಿಕೋಪ, ಸಿದ್ದರಾಮಯ್ಯ, ನರೇಂದ್ರ ಮೋದಿ ಸೇರಿದಂತೆ ಹಲವು ಭವಿಷ್ಯವೂ ಇದರಲ್ಲಿ ಪ್ರಮುಖವಾದದ್ದು.
ಕರಾರುವಕ್ಕಾಗಿ ಹೊರಬಿದ್ದ 2016ರಲ್ಲಿ ನುಡಿಯಲಾದ ಭವಿಷ್ಯಗಳು ಮತ್ತು ಸುಳ್ಳಾದ ಭವಿಷ್ಯಗಳ ಪಟ್ಟಿ ಮುಂದಿದೆ..

ಮೀನು ನುಡಿದ ಭವಿಷ್ಯ
ಚಾಣಕ್ಯ ಎಂಬ ಮೀನು ಅಮೆರಿಕ ಅಧ್ಯಕ್ಷರು ಯಾರು ಆಗಲಿದ್ದಾರೆಂದು ಭವಿಷ್ಯ ನುಡಿದಿತ್ತು. ಚಾಣಕ್ಯನ ಆಯ್ಕೆಯಂತೆ ರಿಪಬ್ಲಿಕ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲ್ಲಲಿದ್ದಾರೆ ಎಂದು ಹೇಳಿತ್ತು. ಹಿಲರಿ ಕ್ಲಿಂಟನ್ ಜೊತೆ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಟ್ರಂಪ್ ಜಯಭೇರಿ ಬಾರಿಸಿದ್ದರು. ಇದು ಅಧಿಕೃತವಾಗಿ ಘೋಷಣೆಯಾಗಬೇಕಷ್ಟೇ.

ಮಂಗ ನುಡಿಯಿತು ಭವಿಷ್ಯವ..
'ಕಿಂಗ್ ಆಫ್ ಪ್ರಿಡಿಕ್ಷನ್' ಎಂದೇ ಚೀನಾದಲ್ಲಿ ಕರೆಯಲ್ಪಡುವ 'ಗೆಡಾ' ಎನ್ನುವ ಮಂಗನಿಂದ ಅಮೆರಿಕಾದ ಅಧ್ಯಕ್ಷ ಚುನಾವಣೆಯ ಬಗ್ಗೆ ಭವಿಷ್ಯ ಕೇಳಲಾಗಿತ್ತು. ಇದಕ್ಕಾಗಿ ಎಡ ಭಾಗದಲ್ಲಿಡೊನಾಲ್ಡ್ ಟ್ರಂಪ್ ಮತ್ತು ಬಲ ಭಾಗದಲ್ಲಿ ಹಿಲರಿ ಕ್ಲಿಂಟನ್ ಅವರ ಭಾವಚಿತ್ರಗಳನ್ನು ಇಡಲಾಗಿತ್ತು. ಗೆಡಾ ಸ್ವಲ್ಪ ಹೊತ್ತು ಎರಡೂ ಅಭ್ಯರ್ಥಿಗಳ ಭಾವಚಿತ್ರಗಳನ್ನು ನೋಡಿ, ಡೊನಾಲ್ಡ್ ಟ್ರಂಪ್ ಚಿತ್ರಕ್ಕೆ ಮುತ್ತಿಕ್ಕಿತು.

ಮಾರ್ಮಿಕವಾಗಿ ನುಡಿಯುವ ಭವಿಷ್ಯ
'ಸಪ್ತಲೋಕ ಸದ್ದಲೇ, ಭೂಮಿ ಸಂಪಲೇ ಪರಾಕ್' ಎಂದು ನಾಗಪಜ್ಜ ಉರ್ಮಿ ಕಾರ್ಣಿಕ ನುಡಿದಿದ್ದರು. ಇದರರ್ಥದಲ್ಲಿ ಏಳು ಲೋಕದಲ್ಲಿ ಅಶಾಂತಿ ತಲೆದೋರಲಿದೆ ಎಂದು. ಸಪ್ತಲೋಕ ಅಂದರೆ ಭಾರತ, ಪಾಕ್ ಸೇರಿದಂತೆ ಸಾರ್ಕ್ ರಾಷ್ಟಗಳು. ಕಾರ್ಣಿಕದಂತೆ ಭಾರತ-ಪಾಕ್ ದೇಶಗಳ ನಡುವೆ ದಿನದಿಂದ ದಿನಕ್ಕೆ ಅಶಾಂತಿ ಹೆಚ್ಚುತ್ತಲೇ ಇದೆ.

ಮಾತಾ ಮಾಣಿಕೇಶ್ವರಿ
ಕಲಬುರಗಿ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಭವಿಷ್ಯ ನುಡಿದು ಭಾರತ-ಪಾಕಿಸ್ತಾನ ಮಧ್ಯೆ ಯುದ್ಧ ನಡೆಯುತ್ತದೆ ಎಂದಿದ್ದರು. ಎರಡು ದೇಶಗಳ ನಡುವೆ ಯುದ್ದ ಅಧಿಕೃತವಾಗಿ ಘೋಷಣೆಯಾಗದಿದ್ದರೂ, ರಾಜತಾಂತ್ರಿಕವಾಗಿ ಮತ್ತು ಗಡಿಯಲ್ಲಿ ಬಿಗುವಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ರಾಜ್ಯದ ದೊರೆ ಕಣ್ಣೀರು
ರಾಜ್ಯದ ದೊರೆ ಕಣ್ಣೀರಿಡಲಿದ್ದಾರೆಂದು ಭವಿಷ್ಯ ನುಡಿದಿದ್ದೆ, ಅದರಂತೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರನನ್ನು ಕಳೆದುಕೊಂಡು ಕಣ್ಣೀರು ಹಾಕುವಂತಾಯಿತು ಎಂದು ಕೋಡಿಶ್ರೀಗಳು ಅಂದು ತಾನು ನುಡಿದಿದ್ದ ಭವಿಷ್ಯದ ವಿವರಣೆಯನ್ನು ನೀಡಿದ್ದನ್ನು ಸ್ಮರಿಸಬಹುದಾಗಿದೆ.

ಗುಜರಾತ್ ನಲ್ಲಿ ಬಿಜೆಪಿಗೆ ಸೋಲು
ಗುಜರಾತಿನಲ್ಲಿ ಬಿಜೆಪಿ ಸೋಲು ಅನುಭವಿಸಲಿದೆ. ಪ್ರಧಾನಿ ಮೋದಿ ಒಬ್ಬ ಸಜ್ಜನ ರಾಜಕಾರಣಿ ಜೊತೆಗೆ ಧರ್ಮದಿಂದ ನಡೆದುಕೊಳ್ಳುತ್ತಿರುವುದರಿಂದ ಎದುರಾಗುವ ಯಾವುದೇ ತೊಂದರೆಗಳನ್ನು ಎದುರಿಸುವ ಶಕ್ತಿ ಅವರಿಗಿದೆ ಎಂದು ಕೋಡಿಶ್ರೀಗಳು ಯುಗಾದಿಗೆ ಮುನ್ನ ಭವಿಷ್ಯ ನುಡಿದಿದ್ದರು. ಗುಜರಾತ್ ಅಸೆಂಬ್ಲಿ ಚುನಾವಣೆ ದಿನಾಂಕ ಘೋಷಣೆ ಇನ್ನಷ್ಟೇ ಆಗಬೇಕು.

ಸಿದ್ದು ವಿರೋಧಿಗಳಿಗೆ ಮುಂದೆಯೂ ಆಷಾಢ
ಹಾಲುಮತ ಸಂಸ್ಥಾನದ ಸಿಎಂ ಸಿದ್ದರಾಮಯ್ಯನವರಿಗೆ ಏನೇ ತೊಂದರೆ ಎದುರಾದರೂ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಅವರ ಕುರ್ಚಿಗೆ ಸಂಚಕಾರವಿಲ್ಲ. ಸರಕಾರ ಅಸ್ಥಿರಗೊಳಿಸುವ ಕೆಲಸ ಮುಂದಿನ ಎರಡು ವರ್ಷಗಳಲ್ಲೂ ಅವರ ವಿರೋಧಿಗಳಿಂದ ಮುಂದುವರಿಯಲಿದೆ ಎಂದು ಕೋಡಿ ಶ್ರೀಗಳು ಹೇಳಿದ್ದರು. ಅದರಂತೆ, ಪಕ್ಷದಲ್ಲಿ ಎಷ್ಟೇ ವಿರೋಧ ವ್ಯಕ್ತವಾದರೂ ಸಿಎಂ ಸದ್ಯಕ್ಕೆ ಸೇಫ್.

ಅಗ್ನಿದುರಂತ
ದಕ್ಷಿಣದ ರಾಜ್ಯವೊಂದರಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿ ಸಾಕಷ್ಟು ಹಾನಿಯಾಗಲಿದೆ ಎಂದು ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದರು. ಕೇರಳದ ಕೊಲ್ಲಂನಲ್ಲಿನ ದೇವಾಲಯದ ಆವರಣದಲ್ಲಿ ಭಾನುವಾರ (ಏ 10) ಸಂಭವಿಸಿದ ಅಗ್ನಿದುರಂತದಲ್ಲಿ ಭಾರೀ ಸಂಖ್ಯೆಯಲ್ಲಿ ಅನಾಹುತ ಸಂಭವಿಸಿತ್ತು.

ಕಾಲಜ್ಞಾನಿ ನಾಸ್ಟ್ರಡಾಮಸ್
ಮಹಾನ್ ವ್ಯಕ್ತಿಯೊಬ್ಬರು ಭಾರತವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ. ಆಡಳಿತದ ಆರಂಭದಲ್ಲಿ ಇವರನ್ನು ದ್ವೇಷಿಸುವವರ ಸಂಖ್ಯೆ ಹೆಚ್ಚಿದ್ದರೂ, ದೇಶವನ್ನು ಅಭಿವೃದ್ದಿಯತ್ತ ಮುನ್ನಡೆಸುವ ಗುಣದಿಂದಾಗಿ ಇವರನ್ನು ಎಲ್ಲರೂ ಪ್ರೀತಿಸುತ್ತಾರೆಂದು 450 ವರ್ಷದ ಹಿಂದೆ ಫ್ರೆಂಚ್ ಪ್ರವಾದಿ, ಕಾಲಜ್ಞಾನಿ ನಾಸ್ಟ್ರಡಾಮಸ್ ಭವಿಷ್ಯ ನುಡಿದಿದ್ದರು. ಈ ಭವಿಷ್ಯವನ್ನು ಮೋದಿ ಭಾರತವನ್ನು ಮುನ್ನಡೆಸುತ್ತಿರುವ ರೀತಿಗೆ ಜನ ಹೋಲಿಕೆ ಮಾಡುತ್ತಿದ್ದಾರೆ.












Click it and Unblock the Notifications