ನಾಯಕತ್ವದ ಬಗ್ಗೆ ಮತ್ತೆ ಭುಗಿಲೆದ್ದ ಅಸಮಾಧಾನ: ಸೋನಿಯಾಗೆ ಕಾಂಗ್ರೆಸ್ಸಿಗರ ಪತ್ರಗಳ ಮಹಾಪೂರ
ನವದೆಹಲಿ, ಆ 17: ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರಕಾರ ವಿಶ್ವಾಸಮತ ಗೆದ್ದ ನಂತರ, ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ಮಾಡಬೇಕೆನ್ನುವ ಕೂಗು ಮತ್ತೆ ತೀವ್ರಗೊಳ್ಳುತ್ತಿದೆ.
ಪಕ್ಷದ ಹಿರಿಯ ತಲೆಗಳ ಮಾತಿಗೆ ಜಾಸ್ತಿ ಸೊಪ್ಪು ಹಾಕಬಾರದು ಎಂದು ಸೋನಿಯಾ ಗಾಂಧಿ ಜೊತೆ ನಡೆದ ವರ್ಚುಯಲ್ ಸಭೆಯಲ್ಲಿ ರಾಜ್ಯಸಭಾ ಸದಸ್ಯರು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ, ನೂರಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು, ನಾಯಕತ್ವದಲ್ಲಿ ಬದಲಾವಣೆಯಾಗಬೇಕು ಎಂದು ಪತ್ರ ಬರೆದಿದ್ದಾರೆ.
ಪಕ್ಷದಲ್ಲಿ ತುರ್ತಾಗಿ ನಾಯಕತ್ವ ಬದಲಾವಣೆಗೆ ಆದ್ಯತೆಯನ್ನು ನೀಡಬೇಕು ಎಂದು, ಎಐಸಿಸಿ ಹಂಗಾಮೀ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ಒತ್ತಾಯಿಸಲಾಗಿದೆ ಎಂದು ಉಚ್ಚಾಟಿತ ಕಾಂಗ್ರೆಸ್ ಮುಖಂಡ ಸಂಜಯ್ ಝಾ ಹೇಳಿದ್ದಾರೆ.
ಜುಲೈ ಕೊನೆಯ ವಾರದಲ್ಲಿ ಕಾಂಗ್ರೆಸ್ಸಿನ ಹಿರಿಯ ಮುಖಂಡ ಆನಂದ್ ಶರ್ಮಾ ಮಾಡಿದ್ದ ಸಾಲುಸಾಲು ಟ್ವೀಟ್ ಗಳು ಪಕ್ಷದೊಳಗೆ ಹಿರಿಯರು ಮತ್ತು ಕಿರಿಯರು ಎನ್ನುವ ಜಟಾಪಟಿ ಜೋರಾಗಿ ನಡೆಯುತ್ತಿದೆ ಎನ್ನುವುದನ್ನು ಸಾಬೀತು ಪಡಿಸಿತ್ತು. ಈಗ, ನೂರಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರು, ಸೋನಿಯಾಗೆ ಪತ್ರವನ್ನು ಬರೆದಿದ್ದಾರೆ.

ಸಂಜಯ್ ಝಾ ಟ್ವೀಟ್
"ಸಂಸದರೂ ಸೇರಿದಂತೆ ನೂರಕ್ಕೂ ಹೆಚ್ಚು ಮುಖಂಡರು, ಪಕ್ಷದ ಆಂತರಿಕ ವಿದ್ಯಮಾನಗಳ ವಿಚಾರದಲ್ಲಿ ಅಸಮಾಧಾನವನ್ನು ಹೊಂದಿದ್ದಾರೆ. ಹಾಗಾಗಿ, ಸೋನಿಯಾ ಗಾಂಧಿಗೆ ಪತ್ರ ಬರೆದು, ನಾಯಕತ್ವ ಬದಲಾವಣೆಗೆ ಒತ್ತಾಯಿಸಿದ್ದೇವೆ. ಜೊತೆಗೆ, ಪಾರದರ್ಶಕವಾಗಿ CWCಗೆ ಚುನಾವಣೆ ನಡೆಯಲಿ ಎಂದು ಮನವಿ ಮಾಡಿದ್ದೇವೆ"ಎಂದು ಸಂಜಯ್ ಝಾ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಸಚಿನ್ ಪೈಲಟ್ ಅವರ ಪರವಾಗಿ ಹೇಳಿಕೆ
ಪಕ್ಷ ವಿರೋಧಿ ಹೇಳಿಕೆಗಾಗಿ ಸಂಜಯ್ ಝಾ ಅವರನ್ನು ಜುಲೈ ತಿಂಗಳಲ್ಲಿ ಸಸ್ಪೆಂಡ್ ಮಾಡಲಾಗಿತ್ತು. ಸಂಜಯ್, ರಾಜಸ್ಥಾನದ ಭಿನ್ನಮತ ತಾರಕಕ್ಕೇರಿದ್ದಾಗ, ಸಚಿನ್ ಪೈಲಟ್ ಅವರ ಪರವಾಗಿ ಹೇಳಿಕೆಯನ್ನು ನೀಡಿದ್ದರು. ಈಗ, ಸಚಿನ್ ಪೈಲಟ್ ಭಿನ್ನಮತ ಶಮನಗೊಂಡಿರುವುದರಿಂದ, ಸಂಜಯ್ ಝಾ ಸಾಲುಸಾಲು ಟ್ವೀಟ್ ಅನ್ನು ಮಾಡಿದ್ದಾರೆ.

ಸೋನಿಯಾ, ಮನಮೋಹನ್ ಸಿಂಗ್ ಕೂಡಾ ಭಾಗವಹಿಸಿದ್ದರು
ಜುಲೈ 30ರಂದು, ಪಕ್ಷದ ರಾಜ್ಯಸಭಾ ಸಂಸದರ ಸಭೆಯನ್ನು ಉದ್ದೇಶಿಸಿ ಸೋನಿಯಾ ಗಾಂಧಿ ಮಾತನಾಡಿದ್ದರು. ಆ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಭಾಗವಹಿಸಿದ್ದರು. ಪಕ್ಷ ಸದ್ಯ ಎದುರಿಸುತ್ತಿರುವ ಹೀನಾಯ ಪರಿಸ್ಥಿತಿಗೆ ಹಿರಿಯ ಮುಖಂಡರೇ ಕಾರಣ ಎಂದು ನೇರವಾಗಿ, ಕೆಲವು ಸಂಸದರು ಆರೋಪಿಸಿದ್ದರು. ಯುಪಿಎ ಎರಡನೇ ಅವಧಿಯಲ್ಲಿ ಇದ್ದವರೇ ಕಾಂಗ್ರೆಸ್ಸಿನ ಇಂದಿನ ಹೀನಾಯ ಸ್ಥಿತಿಗೆ ಕಾರಣ ಎನ್ನುವುದು ಯುವ ನಾಯಕರ ಆಪಾದನೆಯಾಗಿತ್ತು.

ರಾಹುಲ್ ಗಾಂಧಿಯನ್ನು ಪಕ್ಷದ ಸಾರಥಿಯನ್ನಾಗಿ ಮಾಡಿ
"ಮೋದಿ ನೇತೃತ್ವದ ಸರಕಾರ ಹಲವು ವಿಚಾರಗಳಲ್ಲಿ ವೈಫಲ್ಯತೆಯನ್ನು ಎದುರಿಸುತ್ತಿದೆ. ಆದರೂ, ಕಾಂಗ್ರೆಸ್ ಇದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ದಿನದಿಂದ ದಿನಕ್ಕೆ ದುರ್ಬಲವಾಗುತ್ತಿರುವ ಪಕ್ಷಕ್ಕೆ ನವಚೇತನ ನೀಡಬೇಕಿದೆ. ರಾಹುಲ್ ಗಾಂಧಿಯನ್ನು ಪಕ್ಷದ ಸಾರಥಿಯನ್ನಾಗಿ ಮಾಡಿ" ಎಂದು ಸಂಸದ ರಾಜೀವ್ ಸತಾವ್ ನೇರವಾಗಿ ಆಗ್ರಹಿಸಿದ್ದರು. ಇದಕ್ಕೆ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಧ್ವನಿಗೂಡಿಸಿದ್ದರು. ಈಗ ಪತ್ರದ ಮೂಲಕ ಸೋನಿಯಾಗೆ ಮಾಡಿರುವ ಮನವಿ ಹೊಸರೂಪ ಪಡೆಯುವ ಸಾಧ್ಯತೆಯಿದೆ.












Click it and Unblock the Notifications