Morbi tragedy: ಒರೆವಾ ಗ್ರೂಪ್ ಎಂಡಿ ಜಯಸುಖ್ ಪಟೇಲ್ 7 ದಿನ ಪೊಲೀಸ್ ಕಸ್ಟಡಿಗೆ
ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮೊರ್ಬಿ ಸೇತುವೆ ಕುತಿ ಪ್ರಕರಣದ ಆರೋಪಿ ಒರೆವಾ ಗ್ರೂಪ್ ಎಂಡಿ ಜಯಸುಖ್ ಪಟೇಲ್ ಅವರನ್ನು 7 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಮೊರ್ಬಿ ಫೆಬ್ರವರಿ 2: ಕಳೆದ ವರ್ಷ 135 ಜನರನ್ನು ಬಲಿತೆಗೆದುಕೊಂಡ ಗುಜರಾತ್ನ ಮೊರ್ಬಿ ತೂಗು ಸೇತುವೆ ದುರಂತಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಒರೆವಾ ಗ್ರೂಪ್ ಎಂಡಿ ಜಯಸುಖ್ ಪಟೇಲ್ ಅವರನ್ನು 7 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಗುಜರಾತ್ನ ಮೊರ್ಬಿ ಪಟ್ಟಣದ ನ್ಯಾಯಾಲಯ ಬುಧವಾರ ಒರೆವಾ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ ಪಟೇಲ್ ಅವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಂ ಜೆ ಖಾನ್ ಅವರು ಫೆಬ್ರವರಿ 8 ರವರೆಗೆ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಕಸ್ಟಡಿಯಲ್ಲಿ ಜಯಸುಖ್ ಪಟೇಲ್ ಅವರನ್ನು ಕಳುಹಿಸಿದ್ದಾರೆ. ಆದರೆ ಎಸ್ಐಟಿ ಜಯಸುಖ್ ಪಟೇಲ್ ಅವರನ್ನು 14 ದಿನಗಳ ಕಸ್ಟಡಿಗೆ ಕೋರಿದೆ ಎಂದು ಸರ್ಕಾರಿ ಅಭಿಯೋಜಕ ಸಂಜಯ್ ವೋರಾ ಸುದ್ದಿಗಾರರಿಗೆ ತಿಳಿಸಿದರು. ಅಕ್ಟೋಬರ್ 30, 2022 ರಂದು ಗುಜರಾತ್ನ ಮೊರ್ಬಿ ಪಟ್ಟಣದಲ್ಲಿ ನದಿಯ ಮೇಲಿನ ತೂಗು ಸೇತುವೆ ಕುಸಿದು 135 ಜನರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡಿದ್ದಾರೆ.
ನ್ಯಾಯಾಲಯಕ್ಕೆ ಶರಣಾದ ಜಯಸುಖ್ ಪಟೇಲ್
ಸೇತುವೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುವ ಪಟೇಲ್ ಅವರ ವಿರುದ್ಧ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿತ್ತು. ಘಟನೆ ಬಳಿಕ ತಲೆಮರಿಸಿಕೊಂಡಿದ್ದ ಜಯಸುಖ್ ಪಟೇಲ್ ಮಂಗಳವಾರ ಸಂಜೆ ನ್ಯಾಯಾಲಯದ ಮುಂದೆ ಶರಣಾದರು. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು. ಸೇತುವೆಯ ನಿರ್ವಹಣೆಗಾಗಿ ಒರೆವಾ ಕಂಪನಿಯು ತುಕ್ಕು ಹಿಡಿದ ಕೇಬಲ್ಗಳನ್ನು ಬದಲಾಯಿಸುವ ಬದಲು ಸೇತುವೆಯ ಕಾಸ್ಮೆಟಿಕ್ ರಿಪೇರಿಗಳನ್ನು ಮಾತ್ರ ನಡೆಸಿತು ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತನಿಖಾ ತಂಡ ತಿಳಿಸಿದೆ ಎಂದು ವೋರಾ ಹೇಳಿದರು.
ಪಟೇಲ್ ಕಸ್ಟಡಿಗೆ ತನಿಖಾಧಿಕಾರಿಗಳ ಮನವಿ
ಸೇತುವೆಯ ಅಪಾಯಕಾರಿ ಸ್ಥಿತಿಯ ಬಗ್ಗೆ ತಿಳಿದಿದ್ದರೂ ಓರೆವಾ ಗ್ರೂಪ್ ತನ್ನ ಕೆಲಸವನ್ನು ಏಕೆ ಮುಂದುವರೆಸಿದೆ ಎಂದು ಪ್ರಶ್ನಿಸಲು ಪಟೇಲ್ ಅವರ ಕಸ್ಟಡಿಗೆ ತನಿಖಾಧಿಕಾರಿಗಳು ಬಯಸಿದ್ದರು. ಈ ಸೇತುವೆಯ ಮೇಲೆ 100 ಕ್ಕೂ ಹೆಚ್ಚು ಜನರನ್ನು ಅನುಮತಿಸುವುದು ಅಪಾಯಕಾರಿ ಎಂದು ತಿಳಿದಿದ್ದರೂ ಸಹ ಟಿಕೆಟ್ ಕಲೆಕ್ಟರ್ ಸೇತುವೆಯ ಮೇಲೆ 500 ಕ್ಕೂ ಹೆಚ್ಚು ಸಂದರ್ಶಕರನ್ನು ಯಾರ ಸೂಚನೆಯ ಮೇರೆಗೆ ಅನುಮತಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿದುಕೊಳ್ಳಲು ಬಯಸಿದ್ದರು ಎಂದು ವೋರಾ ಹೇಳಿದರು.
ಬಂಧನ ಪೂರ್ವ ಜಾಮೀನು ಅರ್ಜಿ
ಅಜಂತಾ ಮ್ಯಾನುಫ್ಯಾಕ್ಚರಿಂಗ್ ಲಿಮಿಟೆಡ್ (ಒರೆವಾ ಗ್ರೂಪ್ ಎಂದೂ ಕರೆಯುತ್ತಾರೆ) ಮಚ್ಚು ನದಿಯ ಮೇಲೆ ಬ್ರಿಟಿಷರ ಕಾಲದ ತೂಗು ಸೇತುವೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿತ್ತು. ಎಸ್ಐಟಿ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಪಟೇಲ್ ಅವರನ್ನು ಹತ್ತನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಬಂಧನಕ್ಕೂ ಮುನ್ನ ಅವರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಅದನ್ನು ನ್ಯಾಯಾಲಯ ತಿರಸ್ಕರಿಸಿತು. ಪಟೇಲ್ ಶರಣಾಗತಿಗಾಗಿ ನ್ಯಾಯಾಲಯಕ್ಕೆ ಆಗಮಿಸಿದಾಗ, ಹೊರಗೆ ಜಮಾಯಿಸಿದ ಸಂತ್ರಸ್ತರ ಕೋಪಗೊಂಡ ಸಂಬಂಧಿಕರು ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮೊರ್ಬಿ ದುರಂತ ಸಂಭವಿಸಿದ್ದು ಹೇಗೆ?
135ಕ್ಕೂ ವರ್ಷಕ್ಕೂ ಹಳೆಯದಾದ ಮೊರ್ಬಿ ಸೇತುವೆಯನ್ನು ದುರಸ್ತಿ ಕಾರ್ಯಕ್ಕೆ ಒರೆವಾ ಗ್ರೂಪ್ ಕಂಪನಿಗೆ ವಹಿಸಲಾಗಿತ್ತು. ಅಕ್ಟೋಬರ್ 26ರಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತ ಮಾಡಲಾಗಿತ್ತು. 500ಕ್ಕೂ ಹೆಚ್ಚು ಜನರು ಸೇತುವೆ ಮೇಲೆ ಸಾಗುತ್ತಿರುವಾಗ ಈ ದುರಂತ ಸಂಭವಿಸಿದೆ. ಮೃತರಲ್ಲಿ 50 ಮಕ್ಕಳು ಮತ್ತು 40 ಮಹಿಳೆಯರೂ ಸೇರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರ ವಿರುದ್ಧ ದೂರ ದಾಖಲಿಸಿಕೊಳ್ಳಲಾಗಿತ್ತು. ಸೇತುವೆ ದುರಂತ ನಡೆದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದ್ದರು. ಜೊತೆಗೆ ದುರ್ಘಟನೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ ₹ 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹ 50 ಸಾವಿರ ಪರಿಹಾರವನ್ನು ಪ್ರಧಾನಿ ಘೋಷಿಸಿದ್ದಾರೆ. ದುರಂತದಲ್ಲಿ ದೊಡ್ಡ ಕೈಗಳಿವೆ ಅವುಗಳು ಬೆಳಕಿಗೆ ಬರಬೇಕಿದೆ ಎಂದು ವಿರೋಧ ಪಕ್ಷಗಳು ಹರಿಹಾಯ್ದಿವೆ.