ಕನಿಷ್ಠ 10 ದಿನ ತಡವಾಗಿ ಅಂತ್ಯವಾಗಲಿದೆ ಮುಂಗಾರು; ಹವಾಮಾನ ಇಲಾಖೆ
ನವದೆಹಲಿ, ಸೆಪ್ಟೆಂಬರ್ 25: ಈ ಬಾರಿ ಮುಂಗಾರು ಮಳೆ ಕನಿಷ್ಠ 10 ದಿನಗಳವರೆಗೆ ತಡವಾಗಿ ಅಂತ್ಯವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಬಾರಿ ಮುಂಗಾರು ಋತುವಿನಲ್ಲಿ ಹೆಚ್ಚಿನ ಕಡೆಗಳಲ್ಲಿ ಅಸಮರ್ಪಕ ಮಳೆಯಿಂದಾಗಿ ಕೃಷಿ ಚಟುವಟಿಕೆ ಕುಂಠಿತವಾಗಿದೆ. ಸೆಪ್ಟೆಂಬರ್ ತಿಂಗಳಿನಿಂದ ಮತ್ತೆ ಮಳೆ ಬಿರುಸುಪಡೆದಿದೆ.
ಸಾಮಾನ್ಯವಾಗಿ ಮುಂಗಾರು ಮಾರುತ ಸೆಪ್ಟೆಂಬರ್ 17ರ ವೇಳೆಗೆ ಅಂತ್ಯವಾಗುತ್ತದೆ. ಇದೀಗ ಅಕ್ಟೋಬರ್ ಮೊದಲ ವಾರದ ನಂತರ ಮುಂಗಾರು ಅಂತ್ಯವಾಗುವುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಒಟ್ಟು ಮೂರು ವಾರಗಳ ಅವಧಿ ಮುಂಗಾರು ಅಂತ್ಯ ವಿಳಂಬವಾದಂತಾಗುವುದು ಎಂದು ಮಾಹಿತಿ ನೀಡಿದೆ.
'ಈಗಿರುವ ಹವಾಮಾನ ವ್ಯವಸ್ಥೆಯಲ್ಲಿ, ಸೆಪ್ಟೆಂಬರ್ 30ರಿಂದ ಅಕ್ಟೋಬರ್ 6ರವರೆಗೂ ಪರಿಸ್ಥಿತಿಗಳು ನೈಋತ್ಯ ಮುಂಗಾರು ಅಂತ್ಯಕ್ಕೆ ಸೂಕ್ತವಾಗಿಲ್ಲ' ಎಂದು ಇಲಾಖೆ ಹೇಳಿಕೆ ನೀಡಿದೆ. ಈ ವರ್ಷ ಮುಂಗಾರು ಹಂಗಾಮಿನಲ್ಲಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಜೂನ್ ತಿಂಗಳಿನಿಂದ ಅಧಿಕ ಮಳೆಯೊಂದಿಗೆ ಮುಂಗಾರು ಋತು ಬಿರುಸಿನ ಆರಂಭ ಪಡೆದಿತ್ತು. ಆದರೆ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮಳೆ ಕೊರತೆಯನ್ನು ಕಂಡಿತ್ತು.
ಇದೀಗ ಮುಂಗಾರು ಮಾರುತಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಚುರುಕು ಪಡೆದಿವೆ. ಇದರಿಂದಾಗಿ ಹೆಚ್ಚಿನ ರಾಜ್ಯಗಳಿಗೆ ಹೇರಳವಾದ ಮಳೆಯಾಗುವುದು ಎಂದು ಹೇಳಲಾಗಿದೆ. ಈ ತಿಂಗಳ ಆರಂಭದಿಂದ ಶುಕ್ರವಾರದವರೆಗೆ ವಾಡಿಕೆಗಿಂತ 31% ಹೆಚ್ಚು ಮಳೆ ದಾಖಲಾಗಿದೆ.
ಜೂನ್ 1ರಿಂದ ಸೆಪ್ಟೆಂಬರ್ 30ರ ನಡುವಿನ ಅವಧಿಯನ್ನು ಭಾರತದಲ್ಲಿ ನೈಋತ್ಯ ಮುಂಗಾರು ಅವಧಿ ಎಂದು ಕರೆಯಲಾಗುತ್ತದೆ.
ಆಗಸ್ಟ್ ತಿಂಗಳಿನಲ್ಲಿ ಕನಿಷ್ಠ ಮಳೆ ಪ್ರಮಾಣ ದಾಖಲು
ಜೂನ್ ತಿಂಗಳಿನಲ್ಲಿ ಶೇ 10ರಷ್ಟು ಅಧಿಕ ಮಳೆ ದಾಖಲಾಗಿತ್ತು. ಆದರೆ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮಳೆ ಕೊರತೆ ಕಂಡುಬಂದಿತ್ತು. ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ 7% ಮಳೆ ಕಡಿಮೆಯಾಗಿದ್ದರೆ, ಆಗಸ್ಟ್ ತಿಂಗಳಿನಲ್ಲಿ 24% ಕಡಿಮೆ ಮಳೆ ದಾಖಲಾಗಿದೆ.
ಆಗಸ್ಟ್ ತಿಂಗಳ ಅವಧಿಯಲ್ಲಿ, ಇಡೀ ದೇಶಾದ್ಯಂತ ಮಳೆಯು ದೀರ್ಘಾವಧಿ ಸರಾಸರಿಗಿಂತ ಕಡಿಮೆ ಪ್ರಮಾಣದಲ್ಲಿ, ಅಂದರೆ 24% ಮಳೆ ಕೊರತೆ ಕಂಡುಬಂದಿದೆ. 2002ರ ನಂತರ, ಕಳೆದ 19 ವರ್ಷಗಳಲ್ಲಿ ದಾಖಲಾದ ಅತಿ ಕನಿಷ್ಠ ಮಳೆ ಪ್ರಮಾಣ ಇದಾಗಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚಿನ ಮಳೆ
ದೇಶದಲ್ಲಿ ಈ ಬಾರಿ ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ 27% ಹೆಚ್ಚಿನ ಮಳೆಯಾಗಲಿದೆ. ಬಂಗಾಳ ಕೊಲ್ಲಿಯಲ್ಲಿ ಇತ್ತೀಚಿಗೆ ರೂಪುಗೊಂಡಿರುವ ವಾಯುಭಾರ ಕುಸಿತ ಮಳೆ ಪ್ರಮಾಣದ ಏರಿಕೆಗೆ ಕಾರಣವಾಗಲಿದೆ. ಇದರಿಂದಾಗಿ ಸಾಮಾನ್ಯವಾಗಿ ಸೆಪ್ಟೆಂಬರ್ 17ರಿಂದ ಕಡಿಮೆಯಾಗಬೇಕಿದ್ದ ಮಳೆ ಇನ್ನೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉತ್ತರ ಭಾರತದಲ್ಲಿ ಸದ್ಯ ಮುಂಗಾರು ಅಂತ್ಯವಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ತಿಳಿಸಿದ್ದಾರೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಮುಂಗಾರು ಬಿರುಸು ಪಡೆದಿರುವುದು ಮುಂಗಾರು ಹಂಗಾಮಿನ ಮಳೆ ಕೊರತೆಯನ್ನು ತಿಂಗಳ ಆರಂಭದಲ್ಲಿ -9% ಕಡಿಮೆ ಮಾಡಿದೆ. ಸೆಪ್ಟೆಂಬರ್ 30ರಂದು ಮುಂಗಾರು ಅಧೀಕೃತವಾಗಿ ಅಂತ್ಯವಾಗಲಿದ್ದು, ಮುಂಗಾರಿನ ನಾಲ್ಕು ತಿಂಗಳ ಅವಧಿಯಲ್ಲಿ ಒಟ್ಟಾರೆ ಮಳೆ ಪ್ರಮಾಣದಲ್ಲಿ ಸಣ್ಣ ಕೊರತೆಯೊಂದಿಗೆ ಅಂತ್ಯವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಖಾರಿಫ್ ಋತುವಿನ ಅಂತಿಮ ಹಂತದಲ್ಲಿ ಕೃಷಿ ಸಚಿವಾಲಯವು ಖಾರಿಫ್ ಆಹಾರ ಧಾನ್ಯ ಉತ್ಪಾದನೆಯ 150.5 ಮಿಲಿಯನ್ ಟನ್ ಗುರಿ ಹೊಂದಿತ್ತು. ಕಳೆದ ವರ್ಷ ಇದು 149.56 ದಶಲಕ್ಷ ಟನ್ಗಳಷ್ಟಿತ್ತು. ಆದರೆ ಅಸಮರ್ಪಕ ಮಳೆಯಿಂದ ರೈತರಿಗೆ ತೊಂದರೆಯಾಗಿದೆ.
ಈ ಬಾರಿ ಮುಂಗಾರು ಅವಧಿಯಲ್ಲಿ ಕಡಿಮೆ ಮಳೆಯಿಂದಾಗಿ ಬಿತ್ತನೆಯೂ ವಿಳಂಬವಾಗಿದೆ. ಮುಂಗಾರು ನಂತರದ ಮಳೆ ಎಂದು ಪರಿಗಣಿಸಲಾಗಿರುವ ಅಕ್ಟೋಬರ್ ಮಳೆಯು ಖಾರಿಫ್ ಬೆಳೆಗಳಾದ ಅಕ್ಕಿ, ದ್ವಿದಳ ಧಾನ್ಯಗಳು ಹಾಗೂ ಸಿರಿಧಾನ್ಯಗಳ ಕೃಷಿಗೆ ನೆರವಾಗುವ ನಿರೀಕ್ಷೆಯಿದೆ.












Click it and Unblock the Notifications