22,842 ಕೋಟಿ ವಂಚನೆ: ಎಬಿಜಿ ಶಿಪ್ಯಾರ್ಡ್ ವಿರುದ್ಧ ಮನಿ ಲಾಂಡರಿಂಗ್ ಕೇಸ್
ನವದೆಹಲಿ, ಫೆಬ್ರವರಿ 15: ದೇಶದ ಕೇಂದ್ರೀಯ ತನಿಖಾ ದಳ ದಾಖಲಿಸಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಬಿಜಿ ಶಿಪ್ಯಾರ್ಡ್ ಲಿಮಿಟೆಡ್ ಮತ್ತು ಅದರ ಹಿಂದಿನ ಪ್ರಮೋಟರ್ ವಿರುದ್ಧ ಜಾರಿ ಇಲಾಖೆಯು ಅಕ್ರಮ ಹಣ ವರ್ಗಾವಣೆಯ ತನಿಖೆ ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಬಿಜಿ ಶಿಪ್ಯಾರ್ಡ್ ಮತ್ತು ಅದರ ಮಾಜಿ ನಿರ್ದೇಶಕ ರಿಷಿ ಅಗರ್ವಾಲ್, ಸಂತಾನಂ ಮುತ್ತುಸ್ವಾಮಿ ಮತ್ತು ಅಶ್ವಿನಿ ಕುಮಾರ್ ದೇಶದ 28 ಬ್ಯಾಂಕ್ಗಳಿಗೆ ಒಟ್ಟು 22,842 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
"ಬ್ಯಾಂಕ್ ಸಾಲಗಳನ್ನು ಬೇರೆಡೆಗೆ ವರ್ಗಾಯಿಸುವುದರ ಮೂಲಕ ಸಾಗರೋತ್ತರ ಅಂಗಸಂಸ್ಥೆಯಲ್ಲಿ ಬೃಹತ್ ಹೂಡಿಕೆ ಮಾಡಲಾಗಿದೆ. ಅದರ ಸಂಬಂಧಿತ ಸಂಸ್ಥೆಗಳ ಹೆಸರಿನಲ್ಲಿ ಬೃಹತ್ ಆಸ್ತಿಗಳನ್ನು ಖರೀದಿಸಲು ಹಣವನ್ನು ವರ್ಗಾಯಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ಎಬಿಸಿ ಶಿಪ್ಯಾರ್ಡ್ ಸಂಬಂಧಿತ 98 ಕಂಪನಿಗಳಿಗೆ ವರ್ಗಾವಣೆ
ಎಬಿಜಿ ಶಿಪ್ಯಾರ್ಡ್ನ ಪ್ರಮೋಟರ್ಸ್ ಬ್ಯಾಂಕ್ ಮೂಲಕ ಪಡೆದ ಸಾಲವನ್ನು 98 ಸಂಬಂಧಿತ ಕಂಪನಿಗಳಿಗೆ ವರ್ಗಾಯಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಬ್ಯಾಂಕ್ ಸಾಲದ ಹಣವನ್ನು ಬೇರೆ ಶೆಲ್ ಕಂಪನಿಗಳಿಗೆ ವರ್ಗಾಯಿಸುವ ಅಕ್ರಮ ವರ್ಗಾವಣೆ, ಸಾರ್ವಜನಿಕ ಹಣ ದುರ್ಬಳಕೆ ಮತ್ತು ಕಂಪನಿಗಳ ಕಾರ್ಯವೈಖರಿ ಕುರಿತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ಸಿಬಿಐ ಹೇಳಿದೆ.
ಲುಕ್ಔಟ್ ನೋಟಿಸ್ ನೀಡಿದ್ದ ಸಿಬಿಐ:
ದೇಶದಲ್ಲೇ ಮೊದಲ ಬಾರಿಗೆ 23,000 ಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಎಬಿಜಿ ಶಿಪ್ಯಾರ್ಡ್ನ ಮೇಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳಿಗೆ ಕೇಂದ್ರೀಯ ತನಿಖಾ ತಂಡ(ಸಿಬಿಐ)ದ ಅಧಿಕಾರಿಗಳು ಲುಕ್ಔಟ್ ನೋಟಿಸ್ ನೀಡಿದ್ದರು. ದೇಶದ ಕಾನೂನು ಅಡಿಯಲ್ಲಿ ಅಧಿಕಾರಿಗಳಿಗೆ ಬೇಕಾಗಿರುವ ಯಾವುದೇ ವ್ಯಕ್ತಿಯು ವಿಮಾನ ನಿಲ್ದಾಣಗಳ ಮೂಲಕ ದೇಶದ ಗಡಿಯನ್ನು ದಾಟದಿರುವಂತೆ ನೋಡಿಕೊಳ್ಳುವುದಕ್ಕಾಗಿ ಈ ಲುಕ್ಔಟ್ ಸುತ್ತೋಲೆಯನ್ನು ಹೊರಡಿಸಲಾಗಿತ್ತು.
ಹಡಗು ನಿರ್ಮಾಣ ಮತ್ತು ದುರಸ್ತಿ ಕಂಪನಿ:
ಎಬಿಜಿ ಶಿಪ್ಯಾರ್ಡ್ ಎಬಿಜಿ ಗ್ರೂಪ್ನ ಪ್ರಮುಖ ಕಂಪನಿಯಾಗಿದ್ದು, ಇದು ಹಡಗು ನಿರ್ಮಾಣ ಮತ್ತು ಹಡಗು ದುರಸ್ತಿಯಲ್ಲಿ ತೊಡಗಿಸಿಕೊಂಡಿದೆ. ಗುಜರಾತಿನ ದಹೇಜ್ ಮತ್ತು ಸೂರತ್ನಲ್ಲಿ ಹಡಗು ಕಟ್ಟೆಗಳಿವೆ. "ಕಳೆದ ಏಪ್ರಿಲ್ 2019 ರಿಂದ ಮಾರ್ಚ್ 2020ರ ನಡುವೆ ಎಬಿಜಿ ಶಿಪ್ಯಾರ್ಡ್ನ ಖಾತೆಗಳಿಂದ ವಂಚನೆ ಎಂದು ಒಕ್ಕೂಟದ ವಿವಿಧ ಬ್ಯಾಂಕ್ಗಳು ಘೋಷಿಸಿವೆ. ಎಬಿಜಿ ಶಿಪ್ಯಾರ್ಡ್ನಿಂದ ಅದರ ಸಂಬಂಧಿತ ಖಾತೆಗಳಿಗೆ ಭಾರಿ ಪ್ರಮಾಣದ ಹಣ ವರ್ಗಾವಣೆಯಾಗಿದ್ದು ಖಾತೆಯಲ್ಲಿ ನಮೂದಾಗಿದೆ," ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಎಬಿಜಿ ಶಿಪ್ಯಾರ್ಡ್ ಸಾಲ ಹಗರಣ:
ಎಬಿಜಿ ಶಿಪ್ಯಾರ್ಡ್ ವಂಚನೆಯನ್ನು ಭಾರತದ ಅತಿದೊಡ್ಡ ಬ್ಯಾಂಕ್ ಸಾಲ ಹಗರಣ ಎಂದು ಹೇಳಲಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ 28 ಬ್ಯಾಂಕ್ಗಳಿಂದ 22,842 ಕೋಟಿ ರೂಪಾಯಿ ಸಾಲವನ್ನು ಎಬಿಜಿ ಶಿಪ್ಯಾರ್ಡ್ ಪಡೆದುಕೊಂಡಿದ್ದು, ಮರುಪಾವತಿ ಮಾಡಿಲ್ಲ ಎಂದು ಸಿಬಿಐ ಹೇಳಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ನೀಡಿರುವ ದೂರಿನ ಪ್ರಕಾರ, ಕಂಪನಿಯು ಬ್ಯಾಂಕ್ಗೆ 2,925 ಕೋಟಿ ಬಾಕಿ ಉಳಿಸಿಕೊಂಡಿದೆ. ಐಸಿಐಸಿಐ ಬ್ಯಾಂಕ್ಗೆ 7,089 ಕೋಟಿ, ಐಡಿಬಿಐ ಬ್ಯಾಂಕ್ಗೆ 3,634 ಕೋಟಿ, ಬ್ಯಾಂಕ್ ಆಫ್ ಬರೋಡಾಕ್ಕೆ 1,614 ಕೋಟಿ, ಪಿಎನ್ಬಿಗೆ 1,244 ಮತ್ತು ಐಒಬಿಗೆ 1,228 ಕೋಟಿ ರೂಪಾಯಿ ಬಾಕಿ ಉಳಿಸಿಕೊಳ್ಳಲಾಗಿದೆ. ಬ್ಯಾಂಕ್ ಬಿಡುಗಡೆಗೊಳಿಸಿದ ಹಣವನ್ನು ಉದ್ದೇಶಿತ ಕಾರ್ಯದ ಹೊರತಾಗಿ ಬೇರೆ ಕೆಲಸಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ.












Click it and Unblock the Notifications