ಮೋದಿ ಜತೆ ಗುರುತಿಸಿಕೊಳ್ಳದ ರಜನಿಕಾಂತ್ ಜಯಲಲಿತಾ
ತಿರುಚ್ಚಿ, ಸೆಪ್ಟೆಂಬರ್ 27: ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ತಮಿಳುನಾಡಿನಲ್ಲಿ ಯುವಜನತೆಯನ್ನುದ್ದೇಶಿ ಭರ್ಜರಿ ಭಾಷಣ ಮಾಡಿದ್ದಾರೆ. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನ ಮೋದಿ ಮತ್ತು ಬಿಜೆಪಿ ಬಗ್ಗೆಯೂ ತಮ್ಮ ಕಳಕಳಿ ವ್ಯಕ್ತಪಡಿಸಿದ್ದಾರೆ.
ಆದರೆ ಇದರಿಂದ ಅಂದರೆ ಮೋದಿ ತಮಿಳುನಾಡು ಭೇಟಿಯ ಉದ್ದೇಶ ಈಡೇರಿದೆಯೇ? ಮುಂದಿನ ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಮೋದಿ ಅವರ ಆಯಕಟ್ಟಿನ ನಡೆಗಳು ಫಲ ನೀಡಿವೆಯೇ? ಎಂಬ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನೋಡಿದಾಗ ಬೇರೆಯದೇ ಲೋಕ ಅನಾವರಣವಾಗುತ್ತದೆ.

ಮೊದಲನೆಯದಾಗಿ ಮೇರುನಟ ರಜನಿಕಾಂತ್ ವಿಷಯವನ್ನೇ ತೆಗೆದುಕೊಂಡರೆ...
ಮೋದಿ ಸಮಾವೇಶಕ್ಕೂ ಮುನ್ನ, ಸೂಪರ್ ಸ್ಟಾರ್ ರಜನಿಕಾಂತ್ ಹವಾ ಎಬ್ಬಿಸುವಲ್ಲಿ ರಾಜ್ಯ ಬಿಜೆಪಿ ಯಶಸ್ವಿಯಾಗಿತ್ತು. ರಜನಿಕಾಂತ್ ಬಿಜೆಪಿ ಸೇರ್ಪಡೆಯ ಬಗ್ಗೆಯೂ ಮಾತುಗಳು ಕೇಳಿಬಂದವು. ಆದರೆ ಅದು ಅಷ್ಟಕ್ಕೇ ಕೊನೆಗೊಂಡಿತು.
ಮುಂದೆ ಮೋದಿ ಸಮಾವೇಶದ ಸಂದರ್ಭದಲ್ಲಿ ಅಪ್ಪಿತಪ್ಪಿಯೂ ರಜನಿ ಸೇರ್ಪಡೆ ಬಗ್ಗೆ ಮಾತು ಬರಲಿಲ್ಲ. ಸಮಾವೇಶದ ಸ್ಥಳದಲ್ಲಿ, ತಿರುಚ್ಚಿ ನಗರದಲ್ಲೆಲ್ಲೂ ಪೋಸ್ಟರುಗಳಲ್ಲಿ ರಜನಿಕಾಂತ್ ಕಾಣಿಸಿಕೊಂಡಿಲ್ಲ. ಇನ್ನು, ರಜನಿಕಾಂತ್ ಅತ್ತ ಸುಳಿಯಲೂ ಇಲ್ಲ. ಹೋಗಲಿ ರಜನಿ-ಮೋದಿ ನಡುವೆ ಭೇಟಿ ಏರ್ಪಟ್ಟಿತಾ ಅಂದರೆ ಅದೂ ಇಲ್ಲ.
ಹೋಗಲಿ ರಜನಿಕಾಂತ್ ಆದರೂ ತಾನು ಬಿಜೆಪಿಗೆ ಹತ್ತಿರವಾಗುತ್ತಿರುವುದರ ಬಗ್ಗೆ ಸಂದೇಶ ರವಾನಿಸಿದರಾ? ಅಂದರೆ ಅದೂ ಇಲ್ಲ. ಜಾಣ ರಜನಿಕಾಂತ್ ಆ ಬಗ್ಗೆ ತುಟಿ ಪಿಟಕ್ಕನ್ನಲಿಲ್ಲ.
ಹಾಗಂತ ಸುಖಾಸುಮ್ಮನೆ ರಜನಿಕಾಂತ್ ಹೆಸರನ್ನು ತಾನೇ ಮೊದಲು ಚಾಲ್ತಿಗೆ ತರುವ ಮೂಲಕ ಮತದಾರರನ್ನು ತನ್ನತ್ತ ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಯಿತಾ? ಅಂದರೆ ಅದಕ್ಕೆ ಕಾಲವೇ ಉತ್ತರಿಸಬೇಕು.
ಜಯಲಲಿತಾ ನಡೆಯೂ ನಿಗೂಢ: ಇದೇ ವೇಳೆ ಜಯಲಲಿತಾ ನಡೆಯೂ ನಿಗೂಢವಾಗಿದೆ. ಗೆಳೆಯ ಮೋದಿ ಬಗ್ಗೆ ಎಷ್ಟೇ ಮಮಕಾರವಿದ್ದರೂ ಜಯಾ ರಾಜಕೀಯವಾಗಿ ಮೋದಿ ಜತೆ ಗುರುತಿಸಿಕೊಳ್ಳಲು ಹಿಂಜರಿದಿದ್ದಾರೆ.
ತಮ್ಮ ಮತ್ತು ಮೋದಿ ಪೋಸ್ಟರುಗಳು ಎಲ್ಲೂ ಕಾಣಿಸಿಕೊಳ್ಳದಂತೆ ಎಚ್ಚರವಹಿಸಿದ್ದಾರೆ. ಕೊನೆಗೆ ತಮ್ಮ ನಾಲ್ಕಾರು ಚಾನೆಲುಗಳ ಪೈಕಿ ಯಾವುದಾದರೂ ಒಂದರಲ್ಲಿ ಮೋದಿ ಭಾಷಣದ ನೇರಪ್ರಸಾರ ಪ್ರೋಗ್ರಾಂ ಇಟ್ಟುಕೊಂಡಿದ್ದರಾ? ಅದಂರೆ ಅದೂ ಇಲ್ಲ. ಅತ್ತ ಮೋದಿ ಭಾಷಣ ಮಾಡುತ್ತಿದ್ದರೆ ಇತ್ತ ಜಯಾ ಚಾನೆಲುಗಳು ನಗಣ್ಯ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿತ್ತು. ಆಶ್ಚರ್ಯವೆಂದರೆ ಮೋದಿ ಭಾಷಣದ ನೇರಪ್ರಸಾರ ಮಾಡಿದ್ದು ಸನ್ ನೆಟ್ ವರ್ಕ್!
ಅಷ್ಟರಮಟ್ಟಿಗೆ ಚುನಾವಣೆ ಪೂರ್ವ ಸಮಝೌತಾದಲ್ಲಿ ಜಯಲಲಿತಾ ಅವರು ನರೇಂದ್ರ ಮೋದಿ/ ಬಿಜೆಪಿ ಜತೆ ಗುರುತಿಸಿಕೊಳ್ಳಲಿಲ್ಲ.












Click it and Unblock the Notifications