ನರೇಂದ್ರ ಮೋದಿ ಸರ್ಕಾರದ ಬೆನ್ನುಬಿದ್ದ 10 ವಿವಾದ
ಬೆಂಗಳೂರು, ಸೆ. 3: ನರೇಂದ್ರ ಮೋದಿ ಸರ್ಕಾರ ನೂರು ದಿನ ಪೂರೈಸಿದ್ದು ಅನೇಕ ಸಾಧನೆಗಳೊಂದಿಗೆ ಸವಾಲುಗಳು ಎದುರಾಗಿದ್ದವು. ಕೆಲವೊಮ್ಮೆ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳು ವ್ಯಾಪಕ ಟೀಕೆಗೆ ಒಳಗಾಗಿದ್ದವು.
ಯುಪಿಎ ಸರ್ಕಾರದ ಅವಧಿಯ 2ಜಿ, ಕಲ್ಲಿದ್ದಲು, ಕಾಮನ್ವೆಲ್ತ್ ಹಗರಣಗಳಂಥ ದೊಡ್ಡ ಪ್ರಕರಣಗಳು ಕಂಡುಬಾರದಿದ್ದರೂ ಚಿಕ್ಕ-ಪುಟ್ಟ ವಿವಾದಗಳು ದಾಖಲಾದವು.
ದಶಕಗಳ ನಂತರ ಕೇಂದ್ರದಲ್ಲಿ ಒಂದೇ ಪಕ್ಷ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಿತ್ತು. ಹಿಂದುತ್ವ ಮತ್ತು ಹಿಂದಿ ಹೇರಿಕೆ ಕುರಿತ ಚರ್ಚೆಗಳು ಆರಂಭವಾದವು. ಕೇಂದ್ರ ಸಚಿವ ನಿಹಾಲ್ ಚಂದ್ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂಬ ಆರೋಪ, ಸ್ಮೃತಿ ಇರಾನಿ ಪದವಿ ಗೊಂದಲ, ಯೋಜನಾ ಆಯೋಗದ ಶಕ್ತಿ ಕಸಿದುಕೊಂಡಿದ್ದು ಈ ರೀತಿ ಅನೇಕ ವಿಚಾರಗಳು ಟೀಕೆ ಮತ್ತು ವಿಮರ್ಶೆಗೆ ಒಳಗಾದವು. (ನರೇಂದ್ರ ಮೋದಿ ಸರ್ಕಾರದ ಸೆಂಚುರಿ ಹೈಲೈಟ್)
ಇತ್ತ ಬಿಜೆಪಿಯಲ್ಲೂ ಆಂತರಿಕ ಬದಲಾವಣೆ ಗಾಳಿ ಬೀಸಿತು. ಹಳೆಯ ಮತ್ತು ಹಿರಿಯ ನಾಯಕರನ್ನು ಪಕ್ಷದ ಪ್ರಮುಖ ಹುದ್ದೆಗಳಿಂದ ಕೆಳಗಿಳಿಸಲಾಯಿತು. ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದರು. ವಾಜಪೇಯಿ ಮತ್ತು ಎಲ್.ಕೆ.ಅಡ್ವಾನಿ ಅವರನ್ನು ಪಕ್ಷದ ಪ್ರಮುಖ ಹುದ್ದೆಗಳಿಂದ ಕೆಳಗಿಳಿಸಲಾಯಿತು.
ಎನ್ಡಿಎ ಸರ್ಕಾರದ ಬೆನ್ನು ಬಿದ್ದ ವಿವಾದಗಳತ್ತ ಒಂದು ನೋಟ...

370ನೇ ವಿಧಿ ತಿದ್ದುಪಡಿ ಗೊಂದಲ
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿರುವ 370ನೇ ವಿಧಿ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಪ್ರಧಾನಿ ಕಾರ್ಯಾಲಯದ ಜೀತೆಂದರ್ ಸಿಂಗ್ ಹೇಳಿಕೆ ನೀಡಿದ್ದು ಗೊಂದಲಕ್ಕೆ ಕಾರಣವಾಯಿತು. ಅನೇಕ ಟೀಕೆಗಳು ಎದುರಾದ ನಂತರ ಸರ್ಕಾರದ ಮುಂದೆ ಅಂಥ ಯಾವ ಪ್ರಸ್ತಾವನೆಯಿಲ್ಲ ಎಂದು ಹೇಳಿ ಪ್ರಕರಣಕ್ಕೆ ಇತಿಶ್ರೀ ಹಾಡಲಾಯಿತು.

ಸ್ಮೃತಿ ಇರಾನಿ ಪದವಿ ಸಮಸ್ಯೆ
ಕೇಂದ್ರದ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಸುಳ್ಳು ಶೈಕ್ಷಣಿಕ ಪ್ರಮಾಣ ಪತ್ರ ನೀಡಿದ್ದಾರೆ. ಒಂದೆಡೆ ಬಿಎ ಮುಗಿಸಿದ್ದೇನೆ ಎಂದರೆ ಮತ್ತೊಂದೆಡೆ ಬಿಕಾಂ ಮುಗಿಸಿದ್ದೇನೆ ಎನ್ನುತ್ತಾರೆ ಎಂಬ ವಿವಾದ ಕೆಲ ದಿನಗಳ ಕಾಲ ಕೇಂದ್ರ ಸರ್ಕಾರವನ್ನು ಬಾಧಿಸಿತು.

ನಿಹಾಲ್ ಚಂದ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ
ರಸಗೊಬ್ಬರ ಖಾತೆ ಸಚಿವ ನಿಹಾಲ್ಚಂದ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂತು. ಜೈಪುರದ 24 ವರ್ಷದ ಮಹಿಳೆ ಮೇಲೆ ಸಚಿವರು ಅತ್ಯಾಚಾರ ಎಸಗಿದ್ದಾರೆ ಎಂದು ಪ್ರಕರಣ ದಾಖಲಾಯಿತು. ಸಚಿವರ ರಾಜೀನಾಮೆಗೆ ವಿರೋಧ ಪಕ್ಷಗಳು ಒತ್ತಾಯಿಸಿದ್ದವು.

ಹಿಂದಿ ಹೇರಿಕೆಯ ಹುನ್ನಾರವೆ?
ಸಿಬಿಎಸ್ಸಿ ಪಠ್ಯಕ್ರಮದಲ್ಲಿ ಸಂಸ್ಕೃತ ಅಳವಡಿಕೆ, ಸಾಮಾಜಿಕ ಜಾಲತಾಣ, ಬ್ಯಾಂಕ್, ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಹಿಂದಿ ಬಳಸುವಂತೆ ಗೃಹ ಸಚಿವಾಲಯ ಮೇ 27ರಂದು ನೀಡಿದ ಆದೇಶ ಗೊಂದಲಕ್ಕೆ ಕಾರಣವಾಯಿತು. ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಅನೇಕ ಹಿಂದಿಯೇತಯರ ರಾಜ್ಯಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು.

ಗಡ್ಕರಿ ಮನೆಯಲ್ಲಿ ಕದ್ದಾಲಿಕೆ
ಕೇಂದ್ರ ಸಚಿವ ನಿತಿನ್ ಗಡ್ಕರಿ ಮನೆಯಲ್ಲಿ ಕದ್ದಾಲಿಕೆ ಸಾಧನಗಳು ದೊರೆತಿವೆ ಎಂಬ ಸುದ್ದಿ ಕೇಂದ್ರ ಸರ್ಕಾರವನ್ನು ಪೇಚಿಗೆ ಸಿಲುಕಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ವಿಪಕ್ಷಗಳು ಒತ್ತಾಯಿಸಿದವು. ಸಚಿವರ ಮನೆಯಲ್ಲೇ ಇಂಥ ಪ್ರಕರಣಗಳು ನಡೆದರೆ ಹೇಗೆ? ಪ್ರಶ್ನೆ ಮಾಧ್ಯಮಗಳಲ್ಲಿ ಹರಿದಾಡಿತು.

ಯುಪಿಎ ರಾಜ್ಯಪಾಲರಿಗೆ ಗೇಟ್ಪಾಸ್
ಅಧಿಕಾರ ವಹಿಸಿಕೊಂಡ ಎನ್ಡಿಎ ಸರ್ಕಾರ ಯುಪಿಎ ಅವಧಿಯಲ್ಲಿ ನೇಮಕವಾಗಿದ್ದ ರಾಜ್ಯಪಾಲರು, ವಿವಿಧ ಆಯೋಗಗಳ ಮುಖ್ಯಸ್ಥರಿಗೆ ರಾಜೀನಾಮೆ ನೀಡಲು ಸೂಚಿಸಿದ್ದು ವಿವಾದಕ್ಕೆ ಕಾರಣವಾಯಿತು. ಕೆಲವೆಡೆ ರಾಜ್ಯಪಾಲರನ್ನು ವಜಾ ಮಾಡಲಾಯಿತು.

ಕೇಂದ್ರ ಸಚಿವರ ಪುತ್ರರ ಪ್ರವರ
ಕೇಂದ್ರ ಸಚಿವ ರಾಜನಾಥ್ ಸಿಂಗ್ ಪುತ್ರ ಲಂಚ ಪಡೆದಿದ್ದಾರೆ ಎಂಬ ವದಂತಿ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಕೆ ಸಿಲುಕಿಸಿತು. ಮದುವೆಯಾಗಿ ಮೋಸಮಾಡಿದ್ದಾರೆ ಎಂಬ ಆರೋಪ ರೈಲ್ವೆ ಸಚಿವ ಸದಾನಂದ ಗೌಡರ ಮಗನ ಮೇಲೆ ಕೇಳಿಬಂದಿದ್ದು ಚರ್ಚೆ ನಡೆಯುತ್ತಿದೆ.

ಶಿಕ್ಷಕರ ದಿನಾಚರಣೆ ಬದಲಾಯಿತೆ?
ಶಿಕ್ಷಕರ ದಿನಾಚರಣೆಯನ್ನು 'ಗುರು ಉತ್ಸವ್' ಎಂದು ನಾಮಕರಣ ಮಾಡಲು ಆದೇಶ ಹೊರಡಿಸಿದ್ದು. ಅಂದಿನ ಪ್ರಧಾನ ಮಂತ್ರಿ ಭಾಷಣವನ್ನು ಮಕ್ಕಳು ಕಡ್ಡಾಯವಾಗಿ ಆಲಿಸಬೇಕು ಎಂದು ತಿಳಿಸಿದ್ದು ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳ ಕೆಂಗಣ್ಣಿಗೆ ಗುರಿಯಾಗಿದೆ. ಎಂ.ಕರುಣಾನಿಧಿ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯೋಜನಾ ಆಯೋಗ ತಿದ್ದುಪಡಿಗೆ ವಿರೋಧ
ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ನೆರವಾಗಿದ್ದ ಯೋಜನಾ ಆಯೋಗಕ್ಕೆ ಅವೈಜ್ಞಾನಿಕ ತಿದ್ದುಪಡಿ ಮಾಡಲಾಗಿದೆ. ಇದು ದೇಶವನ್ನು ಮತ್ತಷ್ಟು ಹಿಂದಕ್ಕೆ ತಳ್ಳುತ್ತದೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದರು.

ಕೇಂದ್ರ ಸಚಿವರ ಅರ್ಥವಿಲ್ಲದ ಹೇಳಿಕೆ
ಕೇಂದ್ರ ಸಚಿವ ಅರುಣ್ ಜೇಟ್ಲಿ 'ದೆಹಲಿಯ ನಿರ್ಭಯಾ ಅತ್ಯಾಚಾರ ಒಂದು ಸಣ್ಣ ಘಟನೆ' ಎಂದು ಹೇಳಿಕೆ ನೀಡಿದ್ದು, ಮತ್ತೊಬ್ಬ ಸಚಿವ ಹರ್ಷವರ್ಧನ್ 'ಮಹಿಳೆಯ ದೇಹ ದೇವಾಲಯದಂತೆ' ಎಂದಿದ್ದು ವಿವಾದಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಈ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.












Click it and Unblock the Notifications