ಹಬ್ಬಗಳ ಸಾಲು; ಕೊರೊನಾ ಕುರಿತು ರಾಜ್ಯಗಳಿಗೆ ಗೃಹ ಸಚಿವಾಲಯ ಪತ್ರ
ನವದೆಹಲಿ, ಮಾರ್ಚ್ 26: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದ್ದು, ಹಬ್ಬಗಳು ಸಮೀಪಿಸುತ್ತಿರುವುದರಿಂದ ಕೊರೊನಾ ಸೋಂಕಿನ ಹರಡುವಿಕೆ ಹೆಚ್ಚಾಗದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಗೃಹ ಸಚಿವಾಲಯ ರಾಜ್ಯಗಳಿಗೆ ಹಾಗು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಸಾಲು ಸಾಲು ಹಬ್ಬಗಳು ಕೊರೊನಾ ಹರಡುವಿಕೆ ಹೆಚ್ಚಾಗಲು ಕಾರಣವಾಗಬಾರದು ಎಂದು ರಾಜ್ಯಗಳಿಗೆ ಸೂಚಿಸಿದೆ. ಕೇಂದ್ರ ಗೃಹ ಸಚಿವಾಲಯ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಕೊರೊನಾ ಹರಡುವಿಕೆ ತಡೆ ನಿಯಮಾವಳಿಗಳ ಪಾಲನೆ ಕುರಿತು ಕಟ್ಟುನಿಟ್ಟಿನ ನಿಗಾವಹಿಸುವಂತೆ ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ತಿಳಿಸಿದ್ದಾರೆ.
ಕೊವಿಡ್ 19: ಮಾರ್ಚ್ 26ರಂದು ವಿಶ್ವದಲ್ಲಿ ಎಷ್ಟು ಮಂದಿ ಗುಣಮುಖ?
ಹೋಲಿ, ಈದ್, ಈಸ್ಟರ್ ಹಬ್ಬಗಳು ಸಮೀಪಿಸುತ್ತಿವೆ. ಈ ಹಬ್ಬಗಳಲ್ಲಿ ಹೆಚ್ಚಿನ ಜನರು ಒಂದೆಡೆ ಸೇರದಂತೆ ನಿಗಾ ವಹಿಸಬೇಕಿದೆ. ಕೊರೊನಾ ಮಾರ್ಗಸೂಚಿಗಳ ಪಾಲನೆ ಕಡ್ಡಾಯವಾಗಿರುವಂತೆ ನೋಡಿಕೊಳ್ಳಬೇಕಿದೆ ಎಂದು ಕಾರ್ಯದರ್ಶಿಗಳು ತಿಳಿಸಿದ್ದಾರೆ.
ದೇಶದಲ್ಲಿ ಅಕ್ಟೋಬರ್ ನಂತರ ಶುಕ್ರವಾರ ಮೊದಲ ಬಾರಿ ಹೆಚ್ಚಿನ ಸಂಖ್ಯೆಯ ದಿನನಿತ್ಯದ ಪ್ರಕರಣಗಳು ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ 59,118 ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 257 ಮಂದಿ ಸಾವನ್ನಪ್ಪಿದ್ದಾರೆ. 32,987 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದುವರೆಗೂ ಒಟ್ಟು 1,12,64,637 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,18,46,652ಗೆ ಏರಿಕೆಯಾಗಿದೆ. ಸದ್ಯಕ್ಕೆ 4,21,066 ಸಕ್ರಿಯ ಪ್ರಕರಣಗಳಿವೆ.