ಜೈಲಿನಿಂದ ತಪ್ಪಿಸಿಕೊಂಡವರನ್ನು ಗ್ರಾಮಸ್ಥರೇ ಹೊಡೆದು ಕೊಲ್ಲುವುದೇ!?
ಶಿಲ್ಲಾಂಗ್, ಸೆಪ್ಟೆಂಬರ್ 12: ಮೇಘಾಲಯದ ಜೈಲಿನಿಂದ ಎಸ್ಕೇಪ್ ಆಗಿರುವ ನಾಲ್ವರು ವಿಚಾರಣಾಧೀನ ಕೈದಿಗಳನ್ನು ಸ್ಥಳೀಯರ ಗುಂಪೇ ಹೊಡೆದು ಹತ್ಯೆಗೈದಿರುವ ಘಟನೆಯು ಪಶ್ಚಿಮ ಜೈಟಿಂಯಾ ಹಿಲ್ ಜಿಲ್ಲೆಯಲ್ಲಿ ನಡೆದಿದೆ.
ಸೆಪ್ಟೆಂಬರ್ 10ರ ಶನಿವಾರ ಜೊವೈ ಜೈಲಿನಿಂದ ಆರು ಮಂದಿ ಕೈದಿಗಳ ಗುಂಪು ಪರಾರಿ ಆಯಿತು. ಈ ಪೈಕಿ ಐವರು ಕೈದಿಗಳು ಭಾನುವಾರ 70 ಕಿಲೋ ಮೀಟರ್ ದೂರದಲ್ಲಿ ಇರುವ ಶಾಂಗ್ ಪುಂಗ್ ಗ್ರಾಮವನ್ನು ತಲುಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಿಯಲು ನೀರು ಕೇಳಿದ್ದೇ ತಪ್ಪಾ- ಗುಟುಕು ಹನಿ ನೀರಿಗೆ ನಡೆಯಿತು ಭೀಕರ ಹತ್ಯೆ!
ಜೈಲಿನಿಂದ ಪರಾರಿಯಾಗಿದ್ದ ಕೈದಿಗಳಲ್ಲಿ ಒಬ್ಬ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಹಾರವನ್ನು ಖರೀದಿಸುವುದಕ್ಕಾಗಿ ಹೋಟೆಲ್ ವೊಂದಕ್ಕೆ ಹೋಗುತ್ತಾನೆ. ಅಲ್ಲಿ ಸ್ಥಳೀಯರು ಈ ಕೈದಿಗಳನ್ನು ಗುರುತಿಸುತ್ತಾರೆ. ಕೈದಿಗಳು ತಮ್ಮ ಗ್ರಾಮಕ್ಕೆ ಎಂಟ್ರಿ ಕೊಟ್ಟಿರುವುದು ಗೊತ್ತಾಗುತ್ತಿದ್ದಂತೆ ಇಡೀ ಗ್ರಾಮಸ್ಥರು ಅಲರ್ಟ್ ಆದರು ಎಂದು ಗ್ರಾಮದ ಮುಖಂಡ ಆರ್ ರಾಬೋನ್ ಹೇಳಿದ್ದಾರೆ.
ಅರಣ್ಯ ಪ್ರದೇಶದತ್ತ ನುಗ್ಗಿದ ಗ್ರಾಮಸ್ಥರಿಂದ ಕ್ರೌರ್ಯ
ಜೈಲಿನಿಂದ ಎಸ್ಕೇಪ್ ಆಗಿರುವ ಕೈದಿಗಳು ತಮ್ಮದೇ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತಿರುವ ಬಗ್ಗೆ ಗ್ರಾಮಸ್ಥರಿಗೆ ಸುಳಿವು ಸಿಕ್ಕಿತು. ತಕ್ಷಣ ಕೆರಳಿದ ಗ್ರಾಮಸ್ಥರು ಕೈಯಲ್ಲಿ ದೊಣ್ಣೆ, ಕತ್ತಿ ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಅರಣ್ಯ ಪ್ರದೇಶದತ್ತ ನುಗ್ಗಿದರು. ಕೈದಿಗಳನ್ನು ಬೆನ್ನಟ್ಟಿ ಕ್ರೂರವಾಗಿ ಹಲ್ಲೆ ನಡೆಸಿದರು ಎಂದು ಗೊತ್ತಾಗಿದೆ. "ಈ ವೇಳೆ ನಾಲ್ವರು ಕೈದಿಗಳು ಮೃತಪಟ್ಟಿದ್ದು, ಒಬ್ಬ ಕೈದಿಯು ಈ ವೇಳೆ ತಪ್ಪಿಸಿಕೊಂಡನು," ಎಂದು ರಾಬೋನ್ ತಿಳಿಸಿದ್ದಾರೆ.
ಗ್ರಾಮಸ್ಥರೇ ಕೈದಿಗಳನ್ನು ಹತ್ಯೆಗೈದಿರುವುದು ನಿಜ
"ಗ್ರಾಮಸ್ಥರ ಗುಂಪು ಪರಾರಿಯಾದ ನಾಲ್ವರನ್ನು ಬಂಧಿಸಿ ನಂತರ ಅವರನ್ನು ಹತ್ಯೆಗೈದಿರುವುದು ನಿಜ. ನಮ್ಮ ಅಧಿಕಾರಿಗಳು ಆ ಪ್ರದೇಶಕ್ಕೆ ಭೇಟಿ ನೀಡಿದ್ದು, ನಾನು ಹೆಚ್ಚಿನ ಮಾಹಿತಿಗಾಗಿ ಎದುರು ನೋಡುತ್ತಿದ್ದೇನೆ," ಎಂದು ಕಾರಾಗೃಹಗಳ ಇನ್ಸ್ಪೆಕ್ಟರ್-ಜನರಲ್ ಜೆ.ಕೆ.ಮಾರಾಕ್ ಹೇಳಿದ್ದಾರೆ. "ನಾವು ಗುರುತುಗಳನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ, ಆದರೆ ಸತ್ತವರ ಪೈಕಿ ಒಬ್ಬರಲ್ಲಿ ಐ ಲವ್ ಯೂ ತಲಾಂಗ್ ಎಂದು ಬರೆಸಿಕೊಂಡವರೂ ಒಬ್ಬರಿದ್ದಾರೆ," ಎಂದು ಅವರು ತಿಳಿಸಿದರು.
ಆ ಆರನೇ ಕೈದಿ ಪರಾರಿ ಆಗಿದ್ದು ಹೇಗೆ?
ಮೇಘಾಲಯದ ಜೈಲಿನಿಂದ ಪರಾರಿ ಆಗಿರುವ ಆರು ಮಂದಿ ಕೈದಿಗಳಲ್ಲಿ ಐದು ಮತ್ತು ಆರನೇ ಕೈದಿಯು ಎಸ್ಕೇಪ್ ಆಗಿದ್ದಾರೆ. ಗ್ರಾಮಸ್ಥರು ಹಲ್ಲೆ ನಡೆಸಿದ ಸಂದರ್ಭದಲ್ಲಿಯೂ ಈ ಕೈದಿಗಳ ಸುಳಿವೇ ಇರಲಿಲ್ಲ. ರಮೇಶ್ ದಖರ್ ಗುಂಪಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಲಾಂಗ್ ಮತ್ತು ರಮೇಶ್ ದಖರ್ ಅನ್ನು ಆಗಸ್ಟ್ನಲ್ಲಿ ಟ್ಯಾಕ್ಸಿ ಡ್ರೈವರ್ ದಮೆಹಿಪಾಯಾ ಪಾಪೆಂಗ್ ಮತ್ತು ಫುಲ್ಮೂನ್ ಖಾರ್ಸಾಹ್ನೋ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗ್ರಾಮಸ್ಥರ ಕೋಪಕ್ಕೆ ಬಲಿಯಾದವರು ಯಾರು?
ಮರ್ಸಾಂಕಿ ತರಿಯಾಂಗ್, ರಿಕಾಮೆನ್ಲಾಂಗ್ ಲಾಮಾರೆ, ಶಿಡೋರ್ಕಿ ದಖರ್ ಮತ್ತು ಲೊಡೆಸ್ಟಾರ್ ಟ್ಯಾಂಗ್ ತಪ್ಪಿಸಿಕೊಂಡಿದ್ದರು. ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದು, ಸ್ಥಳ ಪರಿಶೀಲನೆ ಮತ್ತು ಇತರ ಅಗತ್ಯ ಔಪಚಾರಿಕತೆಗಳನ್ನು ನಡೆಸುತ್ತಿದ್ದಾರೆ ಎಂದು ಪಶ್ಚಿಮ ಜೈ ತಿಯಾ ಹಿಲ್ಸ್ನ ಪೊಲೀಸ್ ಅಧೀಕ್ಷಕ ಬಿ.ಕೆ.ಮಾರಾಕ್ ಹೇಳಿದ್ದಾರೆ. ಜೈಲು ಸಿಬ್ಬಂದಿ ವಿರುದ್ಧ ಜೋವಾಯಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈವರೆಗೆ ಐವರನ್ನು ಬಂಧಿಸಲಾಗಿದೆ. ಬಂಧಿತ ಕಾರಾಗೃಹದ ಸಿಬ್ಬಂದಿಯಲ್ಲಿ ಒಬ್ಬರು ಹೆಡ್ ವಾರ್ಡನ್ ಹಾಗೂ ನಾಲ್ವರು ವಾರ್ಡನ್ ಸಹ ಇದ್ದಾರೆ.