ಮನದಾಸೆ ಈಡೇರಿಸಿದ 'ವಿಷಕಂಠ'ನಿಗೆ ನಾಲಿಗೆಯನ್ನೇ ಕತ್ತರಿಸಿ ಕೊಟ್ಟಳು!
ಕೊರ್ಬಾ, ಫೆ 15 (ಪಿಟಿಐ): 'ಶಿವಪ್ಪ ಕಾಯೋ ತಂದೆ' ಎಂದು ಬೇಡರ ಕಣ್ಣಪ್ಪ ಅಂದು ಶಿವನಿಗೆ ಕಣ್ಣು ಕಿತ್ತುಕೊಟ್ಟನಂತೆ, 'ಬೆಂದ ಜೀವ ನೊಂದು, ಕೂಗೆ ಬಂದು ನೋಡೆಯಾ ಹರನೇ' ಎಂದು ಕಲಿಯುಗದ ಭಕ್ತೆಯೊಬ್ಬಳು ಶಿವನಿಗೆ ನಾಲಿಗೆಯನ್ನೇ ಕತ್ತರಿಸಿಕೊಟ್ಟಿದ್ದಾಳೆ.
ಛತ್ತೀಸಗಢ, ಕೊರ್ಬಾ ಜಿಲ್ಲೆ, ನೌನೇರಾ ಗ್ರಾಮದ, ಸೀಮಾಬಾಯಿ ಗೊಂದ್ ಎನ್ನುವ 28ವರ್ಷದ ವಿವಾಹಿತ ಮಹಿಳೆ, ಸಮೀಪದ ಶಿವ ದೇವಾಲಯವೊಂದರಲ್ಲಿ ಅಸಂಖ್ಯಾತ ಭಕ್ತರ ಸಮ್ಮುಖದಲ್ಲೇ ಶಿವಲಿಂಗದ ಮುಂದೆ ನಿಂತು ಚಾಕುವಿನಿಂದ ತನ್ನ ನಾಲಗೆಯನ್ನು ಕತ್ತರಿಸಿ ಶಿವನಿಗೆ ಅರ್ಪಿಸಿದ್ದಾಳೆ.
ಮೈಯೆಲ್ಲ ಭಸ್ಮ, ಕೈಯಲ್ಲಿ ತ್ರಿಶೂಲ, ಜನ ಸಾಮಾನ್ಯರ ದೈವ ಶಿವನ ಸ್ಮರಣೆ
ಅಚಾನಕ್ ಆಗಿ ನಡೆದ ಈ ಘಟನೆಯಿಂದ ವಿಚಲಿತರಾದ ದೇವಾಲಯದಲ್ಲಿ ನೆರೆದಿದ್ದ ಭಕ್ತರಲ್ಲಿ ಕೆಲವರು ಆಕೆಯನ್ನು ಸಮೀಪದ ಆಸ್ಪತ್ರೆಗೆ ಕೂಡಲೇ ದಾಖಲಿಸಿದ್ದಾರೆ. ಸದ್ಯ, ಈಕೆ ಚೇತರಿಸಿಕೊಳ್ಳುತ್ತಿದ್ದು, ಆಕೆಯ ಪತಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಮಹಾನ್ ಶಿವಭಕ್ತೆಯಾದ ಈಕೆ, ತನ್ನ ಮನದಾಸೆಯೊಂದು ಈಡೇರಿದರೆ ತನ್ನ ನಾಲಗೆಯನ್ನೇ ಕತ್ತರಿಸಿ ಕೊಡುತ್ತೇನೆಂದು ದೇವರಲ್ಲಿ ಹರಕೆ ಹೊತ್ತಿದ್ದಳು. ಅದಕ್ಕಾಗಿ ಆಕೆ ಹೀಗೆ ಮಾಡಿದ್ದಾಳೆ ಎಂದು ಸೀಮಾಭಾಯಿ ಪತಿ, ಪೊಲೀಸ್ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ.
ಜಿಲ್ಲಾಕೇಂದ್ರ ಕೊಬ್ರಾದಿಂದ ಅರವತ್ತು ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯದಲ್ಲಿ, ಬುಧವಾರ (ಫೆ 14) ಬೆಳಗ್ಗಿನ ಪೂಜೆಗೆ ತುಂಬಾ ಭಕ್ತರು ನೆರೆದಿದ್ದರು. ಶಿವಲಿಂಗದ ಮುಂದೆ ತುಂಬಾ ಹೊತ್ತು ಪಾರ್ಥನೆ ಸಲ್ಲಿಸಿದ ನಂತರ, ಸೀಮಾಬಾಯಿ ಶಿವನಿಗೆ ತನ್ನ ನಾಲಿಗೆಯನ್ನು ಅರ್ಪಿಸಿದ್ದಾಳೆ.
ಹರಕೆಗೋಸ್ಕರ ಈ ಕೆಲಸ ಮಾಡಿದ್ದಾಳೆಂದು ಪತಿ ಹೇಳಿದ್ದರೂ, ಪೊಲೀಸರು ಈಕೆಯ ಗಂಡ ಫಿರ್ತು ರಾಂನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.