ಶಬರಿಮಲೆ ಮಹಿಳೆಯರಿಗೆ ಮುಕ್ತ: ಆತ್ಮಹತ್ಯೆಗೆ ಮುಂದಾದ ಅಯ್ಯಪ್ಪ ಭಕ್ತ
ಕೊಚ್ಚಿ, ಅ 2: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿಷಿದ್ದ ತೆರವುಗೊಳಿಸಿದ ಸರ್ವೋಚ್ಚ ನ್ಯಾಯಾಲದ ತೀರ್ಪಿನಿಂದ ಬೇಸತ್ತ ಅಯ್ಯಪ್ಪ ಭಕ್ತನೊಬ್ಬನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಹಿಂದೂ ಸಂಘಟನೆಯೊಂದರ ಶ್ರೀರಾಜ್ ಎನ್ನುವ ಯುವಕ, ನ್ಯಾಯಾಲಯದ ತೀರ್ಪಿನಿಂದ ಬೇಸತ್ತಿದ್ದೇನೆ. ಹಾಗಾಗಿ ಕೊಚ್ಚಿಯ ಹೈಕೋರ್ಟ್ ವೃತ್ತದ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ.
ಈ ಪೋಸ್ಟ್ ಸಾಕಷ್ಟು ವೈರಲ್ ಆದ ನಂತರ ಕಾರ್ಯಪ್ರವೃತ್ತರಾದ ಪೊಲೀಸರು, ಕೋರ್ಟ್ ವೃತ್ತದ ಬಳಿ ಬಂದೋಬಸ್ತ್ ಮಾಡಿದ್ದರು. ಸಾಮಾಜಿಕ ತಾಣದಲ್ಲಿ ಬರೆದಂತೆ, ಮಧ್ಯಾಹ್ನ 11.30ರ (ಅ 1) ಸುಮಾರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಸರ್ಕಲ್ ಬಳಿ ಬಂದ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ವೈದ್ಯಕೀಯ ತಪಾಸಣೆ ನಡೆಸಿದ ನಂತರ, ಜೈಲಿಗೆ ಕರೆದುಕೊಂಡು ಹೋಗಿ ಶ್ರೀರಾಜ್ ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯ ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿದ್ದು, ನಮ್ಮ ಸಂಪ್ರದಾಯದ ವಿರುದ್ದ ಎಂದು ಪೊಲೀಸರ ಬಳಿ ಯುವಕ ಬೇಸರ ವ್ಯಕ್ತಪಡಿಸಿದ್ದಾನೆ ಎಂದು ವರದಿಯಾಗಿದೆ.
ಕೇರಳದ ಪ್ರಸಿದ್ಧ ದೇವಾಲಯವಾದ ಶಬರಿಮಲೆಯ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ.
ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ದೇವಾಲಯದ ಆಡಳಿತ ಮಂಡಳಿಯ ವಾದವಾಗಿತ್ತು.












Click it and Unblock the Notifications