'ಬಿಜೆಪಿ ಭಾರತ ಬಿಟ್ಟು ತೊಲಗು' ಮಮತಾ ಬ್ಯಾನರ್ಜಿ ಹೊಸ ಆಂದೋಲನ
ಕೊಲ್ಕತ್ತಾ, ಆಗಸ್ಟ್ 9: ಕ್ವಿಟ್ ಇಂಡಿಯಾ ಚಳುವಳಿಗೆ 75 ವರ್ಷ ತುಂಬಿದ ಹಿನ್ನಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 'ಬಿಜೆಪಿ ಕ್ವಿಟ್ ಇಂಡಿಯಾ' ಘೋಷಣೆ ಮೊಳಗಿಸಿದ್ದಾರೆ.
ಕ್ವಿಟ್ ಇಂಡಿಯದಿಂದ ನ್ಯೂ ಇಂಡಿಯಾ: ಟ್ವಿಟ್ಟರ್ ನಲ್ಲಿ ಸಂಕಲ್ಪ
'ಪ್ರಜಾಪ್ರಭುತ್ವವನ್ನು ಬಿಜೆಪಿ ಸರಕಾರ ಹತ್ತಿಕ್ಕುತ್ತಿದೆ' ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿ 2019ರ ಚುನಾವಣೆಯಲ್ಲಿ ಎಲ್ಲಾ ವಿರೋಧ ಪಕ್ಷಗಳ ಜತೆ ಸೇರಿ ಬಿಜೆಪಿಯನ್ನು ಸೋಲಿಸಲಾಗುವುದು ಎಂದು ಹೇಳಿದ್ದಾರೆ.
'ದೇಶದ ಜನರ ಹಕ್ಕುಗಳನ್ನು ಬಿಜೆಪಿ ಸರಕಾರ ಕಸಿದುಕೊಳ್ಳುತ್ತಿದೆ' ಎಂದು ಹೇಳಿದ ಮಮತಾ ಬ್ಯಾನರ್ಜಿ, 'ಜಾತ್ಯಾತೀತತೆ ಅಪಾಯದಲ್ಲಿದೆ' ಎಂದು ಹೇಳಿದ್ದಾರೆ.
"ಬಿಜೆಪಿ ದೇಶವನ್ನು ಒಡೆಯಲು ಯತ್ನಿಸುತ್ತಿದೆ. ನಾವು ಇದಕ್ಕೆ ಅವಕಾಶ ನೀಡುವುದಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ 'ಬಿಜೆಪಿ ಭಾರತ ಬಿಟ್ಟು ತೊಲಗು' ನಮ್ಮ ಘೋಷಣೆಯಾಗಲಿದೆ. ಎಲ್ಲಾ ವಿಪಕ್ಷಗಳು ಒಟ್ಟಾಗಿ ನಾವು ಬಿಜೆಪಿ ವಿರುದ್ಧ ಹೋರಾಡುತ್ತೇವೆ. ಈ ಮೂಲಕ ದ್ವೇಷ ಮತ್ತು ಕೋಮು ರಾಜಕಾರಣವನ್ನು ಕೊನೆಗೊಳಿಸುತ್ತೇವೆ," ಎಂದು ಮಮತಾ ಗುಡುಗಿದ್ದಾರೆ.
'ಭಾರತ ಬಿಟ್ಟು ತೊಲಗಿ ಆಂದೋಲನ'ಕ್ಕೆ 75 ವರ್ಷ: ಸಂಸತ್ ವಿಶೇಷ ಅಧಿವೇಶನ
ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ನಾವು ವಿರಮಿಸುವುದಿಲ್ಲ ಎಂದು ಅವರು ತಮ್ಮ ಸ್ಪಷ್ಟ ಅಭಿಪ್ರಾಯ ಹೊರಹಾಕಿದ್ದಾರೆ.
"ಇಡಿ, ಐಟಿ, ಸಿಬಿಐ ಮೂಲಕ ಅವರು ನಮಗೆ ಹೆಸರಿಸಬಹುದು. ಆದರೆ ನಾವು ಇದಕ್ಕೆಲ್ಲಾ ಬೆದರುವುದಿಲ್ಲ. ಕೇಂದ್ರ ಸರಕಾರ ಏಜೆನ್ಸಿಗಳ ಸರಕಾರವಾಗಿ ಬದಲಾಗಿದೆ. ಏಜೆನ್ಸಿಗಳಿಗಾಗಿ, ಏಜೆನ್ಸಿಗಳಿಗೋಸ್ಕರ, ಏಜೆನ್ಸಿಗಳೇ ನಡೆಸುವ ಸರಕಾರ ಇದು," ಎಂದು ಮಮತಾ ಕಿಡಿಕಾರಿದ್ದಾರೆ.
ಇದೇ ಸಂಮದರ್ಭದಲ್ಲಿ ಅವರು ಈ ತಿಂಗಳ ಅಂತ್ಯದಲ್ಲಿ ಪಾಟ್ನಾದಲ್ಲಿ ಲಾಲು ಪ್ರಸಾದ್ ಯಾದವ್ ಹಮ್ಮಿಕೊಂಡಿರುವ ರ್ಯಾಲಿಯಲ್ಲಿ ತಾವೂ ಭಾಗವಹಿಸುವುದಾಗಿ ಹೇಳಿದ್ದಾರೆ.
ಆದಿವಾಸಿಗಳ ಬಗ್ಗೆ ಬಿಜೆಪಿ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ದೂರಿದ್ದಾರೆ. 'ಆದಿವಾಸಿಗಳ ಮೇಲೆ ದಾಳಿ ಮಾಡಿ ಅದೇ ಆದಿವಾಸಿಗಳ ಮನೆಯಲ್ಲಿ ಊಟ ಮಾಡುತ್ತಾ ಫೋಟೋ ಕ್ಲಿಕ್ಕಿಸುವುದರಲ್ಲಿ ಬಿಜೆಪಿ ನಿರತವಾಗಿದೆ," ಎಂದು ಮಮತಾ ಹರಿಹಾಯ್ದಿದ್ದಾರೆ..