ಪಿಎಂ ಹುದ್ದೆಗೆ ರಾಹುಲ್ ಗಾಂಧಿ ಹೆಸರು ಹೇಳುತ್ತಿದ್ದಂತೆಯೇ ಸಿಟ್ಟಾದ ಮಮತಾ, ಅಖಿಲೇಶ್
Recommended Video

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರನ್ನು ಒಮ್ಮತದಿಂದ ಎದುರಿಸಬೇಕು ಎನ್ನುವ ವಿರೋಧ ಪಕ್ಷಗಳ ಪ್ರಯತ್ನಕ್ಕೆ ಹೆಜ್ಜೆಗೊಂದು ಅಪಸ್ವರ ಎದುರಾಗುತ್ತಲೇ ಇದೆ. ಅದಕ್ಕೆ ಇನ್ನೊಂದು ಉದಾಹರಣೆ, ಚೆನ್ನೈನಲ್ಲಿ ಭಾನುವಾರ (ಡಿ 16) ನಡೆದ ಕಾರ್ಯಕ್ರಮದ ಘಟನೆಯೊಂದು ಸೇರ್ಪಡೆಯಾಗಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಕರುಣಾನಿಧಿಯವರ ಪುತ್ಠಳಿ ಅನಾವರಣ ಸಮಾರಂಭದಲ್ಲಿ, ಡಿಎಂಕೆ ವರಿಷ್ಠ ಮತ್ತು ಕರುಣಾ ಪುತ್ರ ಎಂ ಕೆ ಸ್ಟಾಲಿನ್ ಆಡಿರುವ ಮಾತು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿಯನ್ನು ಕೆರಳಿಸಿದೆ.
ಎನ್ಡಿಎ ಮೈತ್ರಿಕೂಟದಿಂದ ದೂರವಾದ ನಂತರ, ಬಿಜೆಪಿ ವಿರೋಧಿ ಪಕ್ಷಗಳನ್ನು ಒಂದೇ ವೇದಿಕೆಯಲ್ಲಿ ತರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪ್ರಯತ್ನಕ್ಕೆ, ಈ ಘಟನೆ ಮತ್ತೊಂದು ಹಿನ್ನಡೆಯೆಂದೇ ಹೇಳಲಾಗುತ್ತಿದೆ.
ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣೆಗೆ ಮುನ್ನ ರಾಹುಲ್ ಗಾಂಧಿಯವರ ಹೆಸರನ್ನು ಸೂಚಿಸುವುದಕ್ಕೆ ಹಿಂದೆಯೂ ಆಕ್ಷೇಪಿಸಿದ್ದ ಮಮತಾ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಮತ್ತೊಮ್ಮೆ ಅದನ್ನೇ ಪುನರುಚ್ಚಿಸಿದ್ದಾರೆ.
ಕರುಣಾನಿಧಿ ಪುತ್ಠಳಿ ಅನಾವರಣ ಕಾರ್ಯಕ್ರಮದಲ್ಲಿ, 'ತಮಿಳುನಾಡಿನಿಂದ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿಯವರ ಹೆಸರನ್ನು ನಾನು ಸೂಚಿಸುತ್ತೇನೆ' ಎನ್ನುವ ಸ್ಟಾಲಿನ್ ಹೇಳಿಕೆ, ಮಮತಾ ಮತ್ತು ಅಖಿಲೇಶ್ ಸಿಟ್ಟಿಗೆ ಕಾರಣವಾಗಿದೆ. ಇದಕ್ಕೆ, ಮಮತಾ ತೀಕ್ಷ್ಣ ಪದಗಳಿಂದ ಸ್ಟಾಲಿನ್ ವಿರುದ್ದ ತಿರುಗಿಬಿದ್ದಿದ್ದಾರೆ.

ಪ್ರಾದೇಶಿಕ ಪಕ್ಷಗಳೆಲ್ಲಾ ಒಂದಾಗಬೇಕು
ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಪ್ರಾದೇಶಿಕ ಪಕ್ಷಗಳೆಲ್ಲಾ ಒಂದಾಗಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಮತ್ತು ಚಂದ್ರಬಾಬು ನಾಯ್ಡು ಇನ್ನಿಲ್ಲದಂತೆ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ, ಅದಕ್ಕೆ ಪೂರಕವಾದ ವಾತಾವರಣ ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಮತ್ತು ಮಾಯಾವತಿಯವರ ಕಡೆಯಿಂದ ನಿರ್ಮಾಣವಾಗುತ್ತಲೇ ಇಲ್ಲ.

ಫಲಿತಾಂಶ ಬಂದ ಮೇಲೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳೋಣ
ಪ್ರಧಾನಿ ಅಭ್ಯರ್ಥಿಯಾಗಿ ಈಗಲೇ ಯಾರನ್ನೂ ಸೂಚಿಸಬಾರದು, ಫಲಿತಾಂಶ ಬಂದ ಮೇಲೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳೋಣ ಎನ್ನುವುದು ಮಾಯಾ, ಮಮತಾ ಮತ್ತು ಅಖಿಲೇಶ್ ಅವರ ನಿಲುವು. ಹಾಗಾಗಿ, ಪ್ರಾದೇಶಿಕ ಪಕ್ಷಗಳ ವಿಚಾರ ಬಂದಾಗ, ಮಂಚೂಣಿಯಲ್ಲಿ ಬರುವ ಡಿಎಂಕೆ ಮುಖ್ಯಂಡ ಸ್ಟಾಲಿನ್ ಅವರ ಹೇಳಿಕೆ, ಮಮತಾ ಮತ್ತು ಅಖಿಲೇಶ್ ಕೋಪಕ್ಕೆ ಕಾರಣವಾಗಿದೆ.

ಮಹಾಘಟಬಂಧನದ ವಿರಾಟರೂಪ ದರ್ಶನ
2019 ರ ಲೋಕಸಭಾ ಚುನಾವಣೆಗೂ ಮುನ್ನ 'ಮಹಾಘಟಬಂಧನದ ವಿರಾಟರೂಪ ದರ್ಶನ'ಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸಾಕ್ಷಿಯಾಗಬೇಕಿತ್ತು. ಆದರೆ, ಅದಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಎಸ್ಪಿ ಮುಖಂಡ ಅಖಿಲೇಶ್ ಯಾದವ್ ಗೈರಾಗಿ ಆಶ್ಚರ್ಯ ಮೂಡಿಸಿದ್ದಾರೆ.

ರಾಹುಲ್ ಗಾಂಧಿಯವರ ಹೆಸರನ್ನು ಪ್ರಪೋಸ್ ಮಾಡುತ್ತೇನೆ
ದೆಹಲಿಯಲ್ಲಿ ಮುಂದಿನ ವರ್ಷದಿಂದ ನೂತನ ಪ್ರಧಾನಿಯನ್ನು ನೋಡಲು ಬಯಸುತ್ತೇನೆ. ಅದಕ್ಕೆ ತಮಿಳುನಾಡಿನಿಂದ ರಾಹುಲ್ ಗಾಂಧಿಯವರ ಹೆಸರನ್ನು ಪ್ರಪೋಸ್ ಮಾಡುತ್ತೇನೆ ಎಂದು ಎಂ ಕೆ ಸ್ಟಾಲಿನ್ ಹೇಳಿದ್ದರು. ಪ್ರಧಾನಿ ಮೋದಿಯವರನ್ನು ಮಣಿಸಲು ಸದ್ಯದ ರಾಜಕಾರಣದಲ್ಲಿ ರಾಹುಲ್ ಗಾಂಧಿಯವರಿಗೊಬ್ಬರಿಗೇ ಈ ಶಕ್ತಿಯಿರುವುದು. ರಾಹುಲ್ ಗಾಂಧಿ ಈ ದೇಶದ ಪ್ರಧಾನಿಯಾದರೆ, ನಮ್ಮ ದೇಶದ ಭವಿಷ್ಯ ಉಜ್ವಲವಾಗುತ್ತದೆ, ಹಾಗಾಗಿ ನಾವು ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕಾಗಿದೆ ಎಂದು ಸ್ಟಾಲಿನ್ ಹೇಳಿದ್ದರು.

ಸ್ಟಾಲಿನ್ ಹೇಳಿಕೆಗೆ ಕೆಂಡಕಾರಿರುವ ಮಮತಾ ಬ್ಯಾನರ್ಜಿ
ಸ್ಟಾಲಿನ್ ಹೇಳಿಕೆಗೆ ಕೆಂಡಕಾರಿರುವ ಮಮತಾ ಬ್ಯಾನರ್ಜಿ, ಸ್ಟಾಲಿನ್ ಅವರ ಹೇಳಿಕೆ ವಿರೋಧ ಪಕ್ಷಗಳ ಐಕ್ಯತೆಯನ್ನೇ ಪ್ರಶ್ನಿಸುತ್ತದೆ. ನಾವೆಲ್ಲಾ, ಸ್ಟಾಲಿನ್ ನೀಡಿರುವ ಹೇಳಿಕೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಪ್ರಧಾನಿ ಹುದ್ದೆಗೆ ಈಗಲೇ ಯಾರ ಹೆಸರನ್ನು ಸೂಚಿಸುವುದಕ್ಕೆ ನನ್ನ ತೀವ್ರ ವಿರೋಧವಿದೆ. ಸ್ಟಾಲಿನ್ ಅವರಿಂದ ಇಂತಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.












Click it and Unblock the Notifications