ಮಾಲ್ಡಾ: ಹಿಂದೂ ಮುಸ್ಲಿಂ ಕೋಮು ದಳ್ಳುರಿ, ಪೂರ್ವನಿಯೋಜಿತ ಸಂಚೇ?
ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಉತ್ತರಕ್ಕೆ 347 ಕಿಲೋಮೀಟರ್ ದೂರದಲ್ಲಿರುವ ಮಾಲ್ಡಾ ಎನ್ನುವ ಜಿಲ್ಲೆ ಸದ್ಯ ಹಿಂದೂ ಮುಸ್ಲಿಂ ಕೋಮುಗಲಭೆಯ ಹೆಸರಿನಲ್ಲಿ ಮತ್ತು ರಾಷ್ಟ್ರೀಯ ವಾಹಿನಿಗಳ ವಸ್ತುನಿಷ್ಟ ಕವರೇಜ್ ಇಲ್ಲದಿದ್ದರೂ ಭಾರೀ ಸುದ್ದಿಯಲ್ಲಿದೆ.
ಇನ್ನು ನಾಲ್ಕೈದು ತಿಂಗಳಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಮಾಲ್ಡಾದಲ್ಲಿ ಹಿಂದೂಗಳ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದ್ದರೂ, ವೋಟ್ ಬ್ಯಾಂಕ್ ರಾಜಕಾರಣದಿಂದ ಘಟನೆಗೆ ಸಂಬಂಧಿಸಿದಂತೆ ಹೊಸಹೊಸ ಆಯಾಮಗಳು ವರದಿಯಾಗುತ್ತಲೇ ಇದೆ. ಆದರೆ ವಾಹಿನಿಗಳು ದಾದ್ರಿ ಘಟನೆಯ ಸುತ್ತಮುತ್ತ ಬೆಳಕು ಚೆಲ್ಲಿದಷ್ಟು ಮಾಲ್ಡಾ ಘಟನೆಗೆ ಪ್ರಾಮುಖ್ಯತೆ ಕೊಟ್ಟಿಲ್ಲ.
ಕೋಮು ಗಲಭೆ ನಡೆಯುತ್ತಿರುವ ಮಾಲ್ಡಾ ಜಿಲ್ಲೆಯ ಕಾಲಿಯಾಚಾಕ್ ಎನ್ನುವ ಪ್ರದೇಶದಲ್ಲಿ ಹಿಂದೂಗಳ ಸಂಖ್ಯೆ ಶೇ. 30, ಉಳಿದಂತೆ ಸಂಪೂರ್ಣ ಮುಸ್ಲಿಂ ಪ್ರಾಭಲ್ಯವಿರುವ ಇಲ್ಲಿ ಬಾಂಗ್ಲಾದ ವಲಸೆ ಮುಸ್ಲಿಂರ ಸಂಖ್ಯೆ ಏನೂ ಕಮ್ಮಿಯಿಲ್ಲ ಎನ್ನುವುದು ಸರಕಾರದ ಅಧಿಕೃತ ದಾಖಲಾತಿಯಿಂದ ಹೊರತಾದ ವರದಿ. (ಮಾಲ್ಡಾ ಪ್ರಕರಣ: ಬಿಜೆಪಿ ನಾಯಕರಿಗೆ ಪ್ರವೇಶ ನಿರಾಕರಣೆ)
ಪಶ್ಚಿಮ ಬಂಗಾಳದ ಪ್ರಮುಖ ಮಾವು ಮತ್ತು ರೇಷ್ಮೆ ಮಾರುಕಟ್ಟೆಯನ್ನು ಹೊಂದಿರುವ ಮಾಲ್ಡಾ, ಖೋಟಾ ನೋಟು ದಂಧೆಗೂ ಅಷ್ಟೇ ಹೆಸರುವಾಸಿ. ಇಲ್ಲಿ ಈ ಹಿಂದೆ ಈ ಮಟ್ಟಿನ ಕೋಮುಗಲಭೆ ವರದಿಯಾದ ಉದಾಹರಣೆಗಳು ಕಮ್ಮಿ.
ಪ್ರವಾದಿ ಮೊಹಮ್ಮದ್ ಪೈಗಂಬರ್ ಒಬ್ಬ ಸಲಿಂಗಕಾಮಿ ಎನ್ನುವ ಹೇಳಿಕೆಯನ್ನು ಅಖಿಲ ಭಾರತ ಹಿಂದೂ ಮಹಾಸಭಾದ ಮುಖಂಡ ಕಮಲೇಶ್ ತಿವಾರಿ ನೀಡಿದ್ದರು ಎನ್ನುವ ಕಾರಣಕ್ಕಾಗಿ ಆರಂಭವಾದ ಕೋಮು ದಳ್ಳುರಿ ಮಾಲ್ಡಾ ಜಿಲ್ಲೆಯ ಹಿಂದೂಗಳ ನೆಮ್ಮದಿಯನ್ನು ಕೆಡಿಸಿದೆ.
ಹಿಂದೂ ಮಹಾಸಭಾದ ಮುಖಂಡ ತಿವಾರಿ, ಸಮಾಜವಾದಿ ಪಕ್ಷದ ಧುರೀಣ ಅಜಂಖಾನ್ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಲು ಪೈಗಂಬರ್ ಬಗ್ಗೆ ಹೇಳಿಕೆ ನೀಡಿದ್ದರು. RSS ಪ್ರಮುಖ ಮುಖಂಡರು ಸಲಿಂಗಕಾಮಿಗಳು ಅದಕ್ಕೆ ಅವರೆಲ್ಲಾ ಇನ್ನೂ ಬ್ರಹ್ಮಚಾರಿಗಳಾಗಿದ್ದಾರೆ ಎಂದು ಅಜಂಖಾನ್ ಹೇಳಿದ್ದರು. ಮಾಲ್ಡಾ ಘಟನೆಯ ಸುತ್ತಮುತ್ತ ಇದುವರೆಗಿನ ವರದಿಯ ಸಾರಾಂಶವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಅಂಜುಮಾನ್ ಆಲೆ ಸುನ್ನತುಲ್ ಜಮಾತ್ (ಎಎಸ್ಜೆ)
ಅಂಜುಮಾನ್ ಆಲೆ ಸುನ್ನತುಲ್ ಜಮಾತ್ (ಎಎಸ್ಜೆ) ಎನ್ನುವ ಸಂಘಟನೆ ಕಮಲೇಶ್ ತಿವಾರಿಯನ್ನು ಬಂಧಿಸಬೇಕು ಎನ್ನುವ ಬೇಡಿಕೆಯೊಂದಿಗೆ ಸುಮಾರು ಎರಡುವರೆ ಲಕ್ಷಕ್ಕೂ ಹೆಚ್ಚು ಮುಸ್ಲಿಮರನ್ನು ಜಮಾಯಿಸಿ ಮಾಲ್ಡಾ ಜಿಲ್ಲೆಯ ಕಾಲಿಯಾಚಾಕ್ ನಲ್ಲಿ ಭಾರೀ ಪ್ರತಿಭಟನೆ ನಡೆಸಿತು.
ಬಿಎಸ್ಎಫ್ ಪಡೆಗಳು
ಈ ಪ್ರತಿಭಟನಾ ಮೆರವಣಿಗೆಯ ವೇಳೆ ಬಿಎಸ್ಎಫ್ ಪಡೆಗಳು ರ್ಯಾಲಿಗೆ ದಾರಿ ಬಿಟ್ಟುಕೊಟ್ಟಿಲ್ಲ ಎನ್ನುವ ವಿಷಯ ಬಿಎಸ್ಎಫ್ ಜವಾನರು ಮತ್ತು ಎಎಸ್ಜೆ ಕಾರ್ಯಕರ್ತರ ಮಾರಾಮಾರಿಗೆ ಕಾರಣವಾಯಿತು. ಭಾರೀ ಸಂಖ್ಯೆಯಲ್ಲಿದ್ದ ಎಎಸ್ಜೆ ಕಾರ್ಯಕರ್ತರು ಸಿಕ್ಕಸಿಕ್ಕ ವಾಹನಗಳು, ಕಾಲಿಯಾಚಾಕ್ ಪೊಲೀಸ್ ಠಾಣೆ, ಸರಕಾರಿ ಕಚೇರಿಗಳನ್ನು ಧ್ವಂಸ ಮಾಡಲಾರಂಭಿಸಿದರು.
ಹಿಂದೂ ಕುಟುಂಬಕ್ಕೆ ಸೇರಿದ ಮನೆಗಳು ನೆಲಸಮ
ರಾಷ್ಟ್ರೀಯ ಹೆದ್ದಾರಿ ಸಂಚಾರವನ್ನು ತಡೆಹಿಡಿದ ಮುಸ್ಲಿಂ ಸಂಘಟನೆಯ ಕಾರ್ಯಕರ್ತರು ಸುಮಾರು ಆರು ತಾಸು ಕಾಲಿಯಾಚಾಕ್ ರೈಲ್ವೆ ನಿಲ್ದಾಣವನ್ನೂ ಬಂದ್ ಮಾಡಿದರು. ಇಷ್ಟಕ್ಕೂ ಸುಮ್ಮನಿರದ ಎಎಸ್ಜೆ ಕಾರ್ಯಕರ್ತರು ಶನಿ, ದುರ್ಗಾ ದೇವಾಲಯ ಸೇರಿದಂತೆ 25ಕ್ಕೂ ಹೆಚ್ಚು ಹಿಂದೂ ಕುಟುಂಬಕ್ಕೆ ಸೇರಿದ ಮನೆಯ ಮೇಳೆ ದಾಳಿ ಮಾಡಿದರು. ಪರಿಸ್ಥಿತಿ ಕೈಮೀರಿ ಹೋದಾಗ rapid action force ಸೇವೆಯನ್ನು ಬಳಸಿಕೊಂಡ ನಂತರ ಗಲಭೆ ಹತೋಟಿಗೆ ಬಂತು. ಅಷ್ಟರಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು ಮತ್ತು ಆರ್ ಎಸ್ ಎಸ್ ಕಾರ್ಯಕರ್ತನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.
ಕಮಲೇಶ್ ತಿವಾರಿ ಲಕ್ನೋದಲ್ಲಿ ಬಂಧನ
ಪೈಗಂಬರರ ಬಗ್ಗೆ ವಿವಾದಕಾರಿ ಹೇಳಿಕೆ ನೀಡಿದ್ದ ಕಮಲೇಶ್ ತಿವಾರಿಯನ್ನು ಲಕ್ನೋದಲ್ಲಿ ಬಂಧಿಸಲಾಯಿತು. ಈ ಕೋಮು ಗಲಭೆ ಕಮಲೇಶ್ ತಿವಾರಿ, ಪೈಗಂಬರರ ಬಗ್ಗೆ ನೀಡಿದ್ದ ಹೇಳಿಕೆಯ ಸುಮಾರು ಒಂದು ತಿಂಗಳ ನಂತರ ನಡೆದದ್ದು ಎನ್ನುವುದು ಇಲ್ಲಿ ಉಲ್ಲೇಖನೀಯ. ಮತ್ತು ಪಶ್ಚಿಮಬಂಗಾಳದ ಅಥವಾ ರಾಷ್ಟ್ರೀಯ ವಾಹಿನಿಗಳು ದಾದ್ರಿ ಘಟನೆಯನ್ನು ಕವರೇಜ್ ಮಾಡಿದಷ್ಟು ಮಾಲ್ಡಾ ಘಟನೆಗೆ ಪ್ರಾಮುಖ್ಯತೆ ಕೊಡಲಿಲ್ಲ ಎನ್ನುವುದೂ ಚರ್ಚಿತ ವಿಚಾರ.
ಬಿಜೆಪಿಯ ಮೂವರು ಸಂಸದರ ನಿಯೋಗ
ಈ ನಡುವೆ, ಬಿಜೆಪಿಯ ಮೂವರು ಸಂಸದರನ್ನೊಳಗೊಂಡ ನಿಯೋಗ ಮಾಲ್ಡಾಗೆ ಭೇಟಿ ನೀಡಿ, ರಾಷ್ಟ್ರಪತಿ ಮತ್ತು ಕೇಂದ್ರ ಗೃಹಸಚಿವರಿಗೆ ವರದಿ ನೀಡಲು ಮುಂದಾಗಿತ್ತು. ಆದರೆ, ಮಮತಾ ಬ್ಯಾನರ್ಜಿ ಸರಕಾರ ರೈಲ್ವೆ ನಿಲ್ದಾಣದಲ್ಲೇ ಅವರನ್ನು ತಡೆದು ಬಲವಂತವಾಗಿ ಹೌರಾ ಎಕ್ಸಪ್ರೆಸ್ ರೈಲಿನಲ್ಲಿ ವಾಪಸ್ ದೆಹಲಿಗೆ ಕಳುಹಿಸಿತ್ತು.
ಬಿಜೆಪಿಯ ಪ್ರಶ್ನೆಗಳು
ಮಮತಾ ಸರಕಾರದ ವಿರುದ್ದ ಹರಿಹಾಯ್ದಿರುವ ಬಿಜೆಪಿ, ಕೋಮು ಗಲಭೆ ಆರಂಭವಾಗುವ ಮುನ್ನ ಕರಪತ್ರ ಹಂಚಲಾಗಿತ್ತು, ಸರಕಾರಕ್ಕೆ ಇದರ ಅರಿವಿರಲಿಲ್ಲವೇ? ಹಿಂದೂ ಮುಖಂಡ ಪೈಗಂಬರರ ಬಗ್ಗೆ ನೀಡಿದ್ದ ಹೇಳಿಕೆಯ ಒಂದು ತಿಂಗಳ ನಂತರ ಗಲಭೆ ನಡೆಯಲು ಕಾರಣವೇನು? ಬಿಎಸ್ಎಫ್ ಮತ್ತು ಮುಸ್ಲಿಂ ಸಂಘಟನೆಯ ಕಾರ್ಯಕರ್ತರ ನಡುವೆ ಸಂಘರ್ಷದಲ್ಲಿ ಪೊಲೀಸ್ ಠಾಣೆ ಬೆಂಕಿಗೆ ಆಹುತಿಯಾಗಿದ್ದು ಯಾಕೆ? ನಕಲಿ ನೋಟು ದಂಧೆಗೆ ಸಂಬಂಧಪಟ್ಟ ದಾಖಲೆಗಳು ಬೆಂಕಿಗೆ ಆಹುತಿಯಾದ ಠಾಣೆಯಲ್ಲಿ ಇದೆಯಲ್ಲವೇ? ಈ ಘಟನೆಯ ಹಿಂದೆ ಮಮತಾ ಸರಕಾರದ ಪಿತೂರಿಯಿದೆ ಎನ್ನುವುದು ಬಿಜೆಪಿಯ ಗುರುತರ ಆರೋಪ.