ಮಕರ ಸಂಕ್ರಾಂತಿ ಪವಿತ್ರ ಸ್ನಾನ: ಕಾಲ್ತುಳಿತದಲ್ಲಿ ಭಾರೀ ಸಾವು ನೋವು
ಕೊಲ್ಕತ್ತಾದಿಂದ 129 ಕಿಲೋಮೀಟರ್ ದೂರದಲ್ಲಿರುವ ಗಂಗಾ ಸಾಗರದಲ್ಲಿ ನಡೆದ ಕಾಲ್ತುಳಿತದ ದುರಂತದಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ.
ಕೊಲ್ಕತ್ತಾ, ಜ 15: ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಿಂದ 129 ಕಿಲೋಮೀಟರ್ ದೂರದಲ್ಲಿರುವ ಗಂಗಾ ಸಾಗರದಲ್ಲಿ ನಡೆದ ಕಾಲ್ತುಳಿತದ ದುರಂತದಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, ಗಾಯಗೊಂಡ ಇಪ್ಪತ್ತಕ್ಕೂ ಹೆಚ್ಚು ಭಕ್ತರ ಪರಿಸ್ಥಿತಿ ಗಂಭೀರವಾಗಿದೆ.
ಮಕರ ಸಂಕ್ರಾಂತಿಯ ಪ್ರಯುಕ್ತ ಪವಿತ್ರ ಸ್ನಾನ ಮಾಡಲು ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಗಂಗಾಸಾಗರದ ಬಳಿ ಸೇರಿದ್ದರು, ಭಕ್ತರು ನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದ ವೇಳೆ ನಡೆದ ಕಾಲ್ತುಳಿತದಲ್ಲಿ ಈ ದುರ್ಘಟನೆ ಸಂಭವಿಸಿದೆ. (3 ಬಾರಿ ಮಕರ ಜ್ಯೋತಿ ದರ್ಶನ: ಸ್ವಾಮಿಯೇ ಶರಣಂ ಅಯ್ಯಪ್ಪ)
ಕಪಿಲ ಮುನಿ ಆಶ್ರಮದ ಬಳಿ ಗಂಗಾನದಿ ಸಾಗರ ಸೇರುವ ' ಗಂಗಾ ಸಾಗರ' ಬಳಿ ಈ ಘಟನೆ ನಡೆದಿದ್ದು, ಮಕರ ಸಂಕ್ರಾಂತಿಯ ವೇಳೆ ನಡೆಯುವ ಈ ಪವಿತ್ರ ಸ್ನಾನ ಪಶ್ಚಿಮ ಬಂಗಾಳದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ.

ಈ ಪವಿತ್ರ ಸ್ನಾನಕ್ಕೆ ಭಾರೀ ಭಕ್ತರು ಸೇರುವ ಇತಿಹಾಸವಿರುವುದನ್ನು ಅರಿತಿದ್ದ ಪಶ್ಚಿಮ ಬಂಗಾಳ ಸರಕಾರ, ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಾರೀ ಭದ್ರತೆ ಒದಗಿಸಿತ್ತು. ಸಾವು ನೋವಿನ ಬಗ್ಗೆ ಸರಕಾರದಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬೀಳ ಬೇಕಷ್ಟೇ.
ಪವಿತ್ರ ಸ್ನಾನದ ಮುನ್ನಾ ದಿನವಾದ ಭಾನುವಾರ (ಜ 14) ಭಕ್ತರು ತಂಗಿದ್ದ ಡೇರೆಗಳಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಈ ಘಟನೆಯಲ್ಲಿ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದರು.
ವರ್ಷಕ್ಕೊಮ್ಮೆಯಾದರೂ ಪವಿತ್ರ ಸ್ನಾನ ಮಾಡಬೇಕು ಎನ್ನುವ ಐತಿಹ್ಯವಿರುವ ಮತ್ತು ಸ್ಥಳೀಯವಾಗಿ ಸಾಗರ್ ಮೇಳಾ ಎಂದು ಕರೆಯಲ್ಪಡುವ ಈ ಕಾರ್ಯಕ್ರಮಕ್ಕಾಗಿ ಸರಕಾರ 9000 ಪೊಲೀಸರನ್ನು ಮತ್ತು 165 ಸಿಸಿಟಿವಿ ಕ್ಯಾಮರಾ ನಿಯೋಜಿಸಿತ್ತು.












Click it and Unblock the Notifications