Maharashtra Assembly Election 2024: ಉದ್ಧವ್ ಠಾಕ್ರೆಯಿಂದಾಗಿ ಮಹಾಯತಿ ಮುನ್ನಡೆ!
ಮುಂಬೈ, ನವೆಂಬರ್ 14: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ-2024ರ ಪ್ರಚಾರ ಅಬ್ಬರದಿಂದ ಸಾಗಿದೆ. ಈ ಚುನಾವಣೆಯ ಫಲಿತಾಂಶದ ಬಗ್ಗೆ ದೇಶಾದ್ಯಂತ ಕುತೂಹಲವಿದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 23ರ ಶನಿವಾರ ಮತ ಎಣಿಕೆ ನಡೆಯಲಿದೆ.
ಚುನಾವಣೆ ಹಾಲಿ ರಾಜ್ಯದ ಆಡಳಿರೂಢ ಪಕ್ಷ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಮಹಾರಾಷ್ಟ್ರದ ವಿರೋಧ ಪಕ್ಷಗಳು ಸೇರಿರುವ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳಿವೆ. ಆದರೆ ಉದ್ಧವ್ ಠಾಕ್ರೆಯಿಂದಾಗಿ 'ಮಹಾಯತಿ' ಮೈತ್ರಿಕೂಟಕ್ಕೆ ಸಹಾಯಕವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.
ಉದ್ಧವ್ ಠಾಕ್ರೆ ತಪ್ಪುಗಳು: 2019ರ ವಿಧಾನಸಭೆ ಚುನಾವಣೆ ಬಳಿಕ ಮಹಾರಾಷ್ಟ್ರ ರಾಜ್ಯ ಹಲವು ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಸದ್ಯದ ಮಾಹಿತಿಗಳ ಪ್ರಕಾರ ಈ ಬಾರಿಯ ಚುನಾವಣೆಯಲ್ಲಿ ಎಂವಿಎಗಿಂತ ಮಹಾಯತಿ ಮೈತ್ರಿಕೂಟ ಮುಂದಿದೆ. ಇದಕ್ಕೆ ಕಾರಣ ಸಹ ಉದ್ಧವ್ ಠಾಕ್ರೆ.
ಪಕ್ಷವನ್ನು ಉಳಿಸುವ ಕೆಲಸಕ್ಕೆ ಆದ್ಯತೆ ನೀಡದೇ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಕಾಪಾಡಲು ಮುಂದಾದರು. ಅವರನ್ನು 2019ರಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದ್ದು, ಉದ್ಧವ್ ಠಾಕ್ರೆ ಮಾಡಿದ ಮೊದಲ ತಪ್ಪು ಎಂದು ವಿಶ್ಲೇಷಿಸಲಾಗುತ್ತಿದೆ.
2019ರಲ್ಲಿ ಅಧಿಕಾರ ಸಿಕ್ಕರೂ ಸಹ ಉದ್ಧವ್ ಠಾಕ್ರೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿಲ್ಲ. ಮತ್ತೊಂದು ಕಡೆ ಶಿವಸೇನೆ ಪಕ್ಷದ ಮೇಲಿನ ಹಿಡಿತವನ್ನು ಸಹ ಕಳೆದುಕೊಂಡರು. ರಾಜಕೀಯವನ್ನು ಚೆನ್ನಾಗಿ ಬಲ್ಲವರ ಪ್ರಕಾರ ಮೈತ್ರಿಕೂಟದ ಸರ್ಕಾರ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಉದ್ಧವ್ ಠಾಕ್ರೆ ಈ ವಿಚಾರದಲ್ಲಿ ಸಂಪೂರ್ಣವಾಗಿ ಸೋತು ಹೋದರು.
ಪಕ್ಷದೊಳಗಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಉದ್ಧವ್ ಠಾಕ್ರೆ ವಿಫಲವಾದರು. ಆದ್ದರಿಂದ ಪಕ್ಷ ಸಹ ಇಬ್ಭಾಗವಾಯಿತು. ಪಕ್ಷದ ಮೇಲೆ ಕಾರ್ಯಕರ್ತರು, ಜನರು ಸಹ ನಂಬಿಕೆ ಕಳೆದುಕೊಂಡರು. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಉದ್ಧವ್ ಠಾಕ್ರೆಯ ಈ ತಪ್ಪುಗಳು ಮಹಾಯತಿ ಮೈತ್ರಿಕೂಟಕ್ಕೆ ವರವಾಗಲಿದೆ ಎಂದು ಅಂದಾಜಿಸಲಾಗಿದೆ.
2022ರಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ 2.5 ವರ್ಷಗಳ ಆಡಳಿತದಲ್ಲಿ ಹಲವಾರು ಪರಿಣಾಮಕಾರಿ ಕೆಲಸಗಳನ್ನು ಮಾಡಿದೆ. ರಾಜ್ಯ ಶೇ 26.83ರಷ್ಟು ಹೂಡಿಕೆಯನ್ನು ಈ ಸಮಯದಲ್ಲಿ ಆಕರ್ಷಿಸಿದೆ. ಆದರೆ ಮೈತ್ರಿಕೂಟ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸೀಟು ಪಡೆಯುವಲ್ಲಿ ವಿಫಲವಾಯಿತು.
ಈ ಬಾರಿಯ ಚುನಾವಣೆಯಲ್ಲಿ ಮಹಾಯತಿ ಮೈತ್ರಕೂಟದಲ್ಲಿ ಸೀಟು ಹಂಚಿಕೆ ಕಗ್ಗಂಟಾಗಲಿಲ್ಲ. ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬುದು ಮೈತ್ರಿಕೂಟದ ಮುಂದಿರುವ ಪ್ರಮುಖ ಸವಾಲಾಗಿದೆ. ಒಂದು ವೇಳೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನದಲ್ಲಿ ಗೆದ್ದರೆ ಪಕ್ಷ ಮುಖ್ಯಮಂತ್ರಿ ಹುದ್ದೆಯನ್ನು ಬೇರೆ ಪಕ್ಷಗಳಿಗೆ ಬಿಟ್ಟುಕೊಡಲಿದೆಯೇ? ಎಂದು ಕುತೂಹಲದ ಪ್ರಶ್ನೆಯಾಗಿದೆ.
2022ರಲ್ಲಿಯೇ ದೇವೇಂದ್ರ ಫಡ್ನವೀಸ್ ಶಿವಸೇನೆಗೆ ಮುಖ್ಯಮಂತ್ರಿ ಸೀಟು ಬಿಟ್ಟು ಕೊಡಬಾರದಿತ್ತು ಎಂದು ಈಗ ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಒಂದು ವೇಳೆ ಈ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸೀಟು ಗೆದ್ದರೆ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆಯೇ? ಎಂಬ ಪ್ರಶ್ನೆ ಎದುರಾಗಿದೆ.












Click it and Unblock the Notifications