Mahakumbh Mela 2025: ಮಹಂತ್ ಕೌಶಲ್ ಗಿರಿ 7 ವರ್ಷಗಳ ಕಾಲ ಉಚ್ಛಾಟನೆ
ಲಕ್ನೋ, ಜನವರಿ 12: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ-2025ಕ್ಕೆ ತಯಾರಿ ಪೂರ್ಣಗೊಂಡಿದೆ. ಜನವರಿ 13ರಿಂದ ಫೆಬ್ರುವರಿ 26ರ ತನಕ ನಡೆಯಲಿರುವ ಉತ್ಸವದಲ್ಲಿ ಸುಮಾರು 40 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕುಂಭಮೇಳಕ್ಕಾಗಿ ಜುನಾ ಅಖಾಡ ಮತ್ತು ಕಿನ್ನರ ಅಖಾಡಗಳು ಪ್ರಯಾಗ್ರಾಜ್ಗೆ ಆಗಮಿಸಿವೆ. ಈ ಮಹಾಕುಂಭ ಮೇಳ ದೇಶಾದ್ಯಂತ ಆಧ್ಯಾತ್ಮಿಕ ಮತ್ತು ಭಕ್ತಿಯ ಕಂಪು ಹರಡಲಿವೆ ಎಂದು ನಿರೀಕ್ಷೆ ಮಾಡಲಾಗಿದೆ.
ಶುಕ್ರವಾರ ಜುನಾ ಅಖಾಡದ ಮಹಂತ್ ಕೌಶಲ್ ಗಿರಿಯನ್ನು ಏಳು ವರ್ಷಗಳ ಕಾಲ ಉಚ್ಚಾಟಿಸುವ ತೀರ್ಮಾನವನ್ನು ಕೈಗೊಂಡಿದೆ. ಮಹಂತ್ ಕೌಶಲ್ ಗಿರಿ 13 ವರ್ಷದ ಅಪ್ರಾಪ್ತ ಬಾಲಕಿಯನ್ನು ಸಾಧ್ವಿಯನ್ನಾಗಿ ದೇಣಿಗೆಯಾಗಿ ಸ್ವೀಕಾರ ಮಾಡಿದ ಕಾರಣಕ್ಕೆ ಉಚ್ಛಾಟನೆ ಮಾಡುವ ತೀರ್ಮಾವನ್ನು ಕೈಗೊಳ್ಳಲಾಗಿದೆ.

ಮಹಾ ಕುಂಭಮೇಳ-2025ರ ಮೊದಲ ಸ್ನಾನದ ಆಚರಣೆಗೂ ಮುನ್ನ 13 ವರ್ಷದ ಅಪ್ರಾಪ್ತೆಯನ್ನು ದೇಣಿಗೆಯಾಗಿ ಸ್ವೀಕರಿಸಿದ ಕಾರಣಕ್ಕೆ ಜುನಾ ಅಖಾಡದ ಮಹಂತ್ ಕೌಶಲ್ ಗಿರಿಯನ್ನು ಉಚ್ಚಾಟಿಸಲಾಗಿದೆ. ಆಗ್ರಾದಲ್ಲಿ ವಾಸಿಸುವ ಕುಟುಂಬದಿಂದ ದೇಣಿಗೆಯನ್ನು ಅವರು ಸ್ವೀಕಾರ ಮಾಡಿದ್ದರು.
ಶುಕ್ರವಾರ ನಡೆದ ಜುನಾ ಅಖಾಡದ ಸಭೆಯ ಬಳಿಕ ಸಂಜೆ 13 ವರ್ಷದ ಅಪ್ರಾಪ್ತೆಯನ್ನು ಆಗ್ರಾದಲ್ಲಿ ವಾಸಿಸುವ ಕುಟುಂಬಕ್ಕೆ ಮರಳಿ ನೀಡಲಾಗಿದೆ. ಹೆಣ್ಣು ಮಕ್ಕಳು ಸನ್ಯಾಸಿನಿ ದೀಕ್ಷೆ ಪಡೆಯಲು 22 ವರ್ಷದ ವಯೋಮಿತಿ ಇದೆ ಎಂದು ಸಹ ಅಖಾಡದ ಪ್ರಮುಖರು ಸ್ಪಷ್ಟಪಡಿಸಿದ್ದಾರೆ ಎಂದು ರಾಷ್ಟ್ರೀಯ ವಾಹಿನಿಗಳು ವರದಿ ಮಾಡಿವೆ.
ಯಾವುದೇ ಬಲವಂತವಿಲ್ಲ: ಯಾವುದೇ ಬಲವಂತವಿಲ್ಲದೇ ಕುಟುಂಬದ, ಹೆಣ್ಣು ಮಗುವಿನ ಒಪ್ಪಿಗೆ ಪಡೆದು ಆಕೆಯನ್ನು ದೇಣಿಗೆಯಾಗಿ ಸ್ವೀಕಾರ ಮಾಡಿ ಸನ್ಯಾಸ ದೀಕ್ಷೆ ನೀಡಲಾಗಿದೆ ಎಂದು ಮಹಂತ್ ಕೌಶಲ್ ಗಿರಿ ಹೇಳಿದ್ದರು. 13 ವರ್ಷದ ಬಾಲಕಿ ಸನ್ಯಾಸಿನಿಯಾಗುವ ಕುರಿತು ತನ್ನ ತಂದೆಗೆ ಸಹ ಮಾಹಿತಿ ನೀಡಿದ್ದು, ತಂದೆಯೂ ಒಪ್ಪಿಗೆ ನೀಡಿದ್ದರು.
"ಅವರ ತಂದೆಗೆ ಸನ್ಯಾಸಿನಿ ವಿಧಿ ವಿಧಾನಗಳನ್ನು ತಿಳಿಸಲಾಗಿದೆ. ಅವರ ಸಮ್ಮುಖದಲ್ಲಿಯೇ ಧರ್ಮಧ್ವಜ, ಪಿಂಡದಾನ ಪ್ರಕ್ರಿಯೆಗಳನ್ನು ನಡೆಸಲಾಗಿದೆ. 13 ವರ್ಷದ ಅಪ್ರಾಪ್ತ ಬಾಲಕಿ ಈಗ ಸನ್ಯಾಸಿನಿ ಆಗಿದ್ದಾಳೆ" ಎಂದು ಮಹಂತ್ ಕೌಶಲ್ ಗಿರಿ ಹೇಳಿದ್ದರು. ಆದರೆ ಜುನಾ ಅಖಾಡದ ಸಭೆಯಲ್ಲಿ ಈ ನಡೆಯುನ್ನು ಖಂಡಿಸಲಾಗಿದೆ.
ಅಪ್ರಾಪ್ತ ಬಾಲಕಿಗೆ ಸನ್ಯಾಸ ದೀಕ್ಷೆ ನೀಡಿದ ಕ್ರಮವನ್ನು ಹಿರಿಯ ಸಂತರು ವಿರೋಧಿಸಿದ್ದರು. ಈ ಕುರಿತು ಜುನಾ ಅಖಾಡದ ಸಭೆಯಲ್ಲಿ ಚರ್ಚೆಯಾಗಬೇಕು ಎಂದು ಒತ್ತಾಯಿಸಿದ್ದರು. ಆದ್ದರಿಂದ ಶುಕ್ರವಾರ ಜುನಾ ಅಖಾಡದ ಮಹತ್ವದ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಸಭೆಯಲ್ಲಿ ಮಹಂತ್ ಕೌಶಲ್ ಗಿರಿ ಉಚ್ಛಾಟನೆ ಮಾಡುವ ತೀರ್ಮಾನ ಕೈಗೊಳ್ಳಲಾಯಿತು.
ಆಕೆ ಅಪ್ರಾಪ್ತ ವಯಸ್ಕಳು, ಈ ನಡೆ ಅಂಗೀಕಾರ ಮಾಡುವಂತಹದ್ದಲ್ಲ. ಆಕೆ ಮನೆಗೆ ಹಿಂತಿರುಗಬೇಕು ಎಂದು ನಾವು ತೀರ್ಮಾನಿಸಿದ್ದೇವೆ. ತ್ಯಜಿಸಲ್ಪಟ್ಟ ಮಗುವನ್ನು ನಾವು ಕಂಡುಹಿಡಿದರೆ ದತ್ತು ಪಡೆಯುತ್ತೇವೆ. ಆದರೆ ಸಾಮಾನ್ಯ ಪರಿಸ್ಥಿತಿಗಳಲ್ಲಿ 22 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳನ್ನು ಸೇರಿಸಿಕೊಳ್ಳುವುದಿಲ್ಲ. ಸನ್ಯಾಸತ್ವ ಜೀವನ ಆಯ್ಕೆ ಮಾಡಿಕೊಳ್ಳುವ ಹುಡುಗಿ ತನ್ನ ನಿರ್ಧಾರವನ್ನು ತೆಗೆದುಕೊಳ್ಳಲು ಸಾಕಷ್ಟು ಪ್ರೌಢವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜುನಾ ಅಖಾಡ ಹೇಳಿದೆ.
ಅಖಾಡದ ವಕ್ತಾರ ವಕ್ತಾರ ನರಾಯಣ ಗಿರಿ ಮಾತನಾಡಿ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಸಂಬಂಧಿತ ಅಧಿಕಾರಿಗಳು ಹಸ್ತಕ್ಷೇಪ ಮಾಡಲು ನಾವು ವಿನಂತಿ ಮಾಡುತ್ತೇವೆ. ಅಖಾಡದ ಅಧಿಕಾರಿಗಳು ವಿವರಿಸಿದಂತೆ, ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ಅಪ್ರಾಪ್ತ ವಯಸ್ಕಳ ಪೋಷಕರು ಪ್ರಾರಂಭಿಕ ಒಪ್ಪಿಗೆ ಪತ್ರವನ್ನು ನೀಡಬೇಕು, ನಂತರ ಆಕೆ ಸನ್ಯಾಸಿನಿಯಾಗಲು ಅರ್ಹಳಾಗುತ್ತಾಳೆ. ಆರು ತಿಂಗಳ ನಂತರ, ಅಂತಿಮ ಒಪ್ಪಿಗೆ ಪತ್ರದೊಂದಿಗೆ ಅಪ್ರಾಪ್ತ ವಯಸ್ಕಳ ಸ್ವಂತ ಒಪ್ಪಿಗೆಯೂ ಅಗತ್ಯವಿದೆ ಎಂದು ಹೇಳಿದ್ದಾರೆ.












Click it and Unblock the Notifications