ಲವ್ ಜಿಹಾದ್: ಯುವತಿ ಹಾದಿಯಾ ಖುದ್ದು ಹಾಜರಿಗೆ ಸುಪ್ರಿಂ ಸೂಚನೆ
ನವದೆಹಲಿ, ಅಕ್ಟೋಬರ್ 30: ಕೇರಳದ ಲವ್ ಜಿಹಾದ್ ಪ್ರಕರಣದ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ಪ್ರಕರಣದ ಕೇಂದ್ರ ಬಿಂದು ಯುವತಿ ಹಾದಿಯಾರನ್ನು ನವೆಂಬರ್ 27ರಂದು ಖುದ್ದು ಹಾಜರಿರುವಂತೆ ಸೂಚಿಸಿದೆ.
ವಿಚಾರಣೆಯನ್ನು ನವೆಂಬರ್ 27 ರಂದು ಮೂರು ಗಂಟೆಗೆ ಮುಂದೂಡಿದ ಸರ್ವೋಚ್ಛ ನ್ಯಾಯಾಲಯ ಅಂದು ತಮ್ಮ ಮಗಳನ್ನು ಕರೆತನ್ನಿ ಎಂದು ಹಾದಿಯಾ ತಂದೆಗೆ ಸೂಚಿಸಿದೆ.
ವಿಚಾರಣೆ ವೇಳೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ವನ್ನು ತರಾಟೆಗೆ ತೆಗೆದುಕೊಂಡ ಸುಪ್ರಿಂ ಕೋರ್ಟ್, ಕ್ರಿಮಿನಲ್ ನ ಜತೆ ಪ್ರೀತಿಯಲ್ಲಿ ಬೀಳಬಾರದು ಎಂದು ಯಾವ ಕಾನೂನು ಹೇಳುವುದಿಲ್ಲಎಂದು ಖಾರವಾಗಿ ಹೇಳಿದೆ.
ಪ್ರಕರಣದಲ್ಲಿ ಯುವತಿಯ ಅಭಿಪ್ರಾಯ ಪ್ರಮುಖ ಎಂದು ಮನಗಂಡಿರುವ ಸುಪ್ರಿಂ ಕೋರ್ಟ್ ಆಕೆಯನ್ನು ಖುದ್ದು ಹಾಜರಿರುವಂತೆ ಹೇಳಿದೆ.
ಜತೆಗೆ ಹಾದಿಯಾ ಪ್ರಕರಣದಲ್ಲಿ ಯಾವುದೇ ತನಿಖಾ ಸಂಸ್ಥೆಯಿಂದ ತನಿಖೆ ಅಗತ್ಯವಿಲ್ಲ ಎಂದು ಹೇಳಿದೆ. ಈ ಹಿಂದೆ ಪ್ರಕರಣ ಲವ್ ಜಿಹಾದ್ ಆಗಿದ್ದಲ್ಲಿ ತನಿಖೆ ನಡೆಸುವಂತೆ ಎನ್ಐಎಗೆ ಹೇಳಿತ್ತು. ಈ ಪ್ರಕರಣದಲ್ಲಿ ಯುವತಿಯ ವಿಚಾರಣೆ ನಡೆಸಲು ಎನ್ಐಎಗೆ ಇಲ್ಲಿಯವರೆಗೆ ಸಾಧ್ಯವಾಗಿರಲಿಲ್ಲ.
ಹಾದಿಯಾ ಅಲಿಯಾಸ್ ಅಖಿಲಾ ತಂದೆ ತನ್ನ ಮಗಳು ಬಲವಂತವಾಗಿ ಮತಾಂತರವಾಗಿ ಮದುವೆಯಾಗಿದ್ದಾರೆ ಎಂದು ಸುಪ್ರಿಂ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದರು.